ಬೆಂಗಳೂರು: ರಾಜ್ಯದಲ್ಲಿ ಎರಡನೇ ಅಲೆ ತಹಬದಿಗೆ ಬಂದಿದ್ದು ಮೂರನೇ ಅಲೆ ಎದುರಾದಲ್ಲಿ ಅದನ್ನು ನಿಭಾಯಿಸುವುದಕ್ಕೆ ಆರೋಗ್ಯ ಇಲಾಖೆ ಸಜ್ಜುಗೊಳ್ಳುತ್ತಿದೆ. ಈ ನಡುವೆ ಮೂರನೇ ಅಲೆಗೂ ಮುನ್ನ ಜಿನೋಮ್ ನಿಗಾ ಅಥವಾ ಅಧ್ಯಯನಕ್ಕಾಗಿ ಪ್ರಯೋಗಾಲಯದ ಸಿಬ್ಬಂದಿಗಳಿಗೆ ತರಬೇತಿ ನೀಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಆನ್ ಲೈನ್ ಅಥವಾ ಆನ್ ಗ್ರೌಂಡ್ ಗಳಲ್ಲಿ ಪ್ರಯೋಗಾಲಯದ ಸಿಬ್ಬಂದಿಗಳಿಗೆ ತರಬೇತಿ ನೀಡುವ ಮೂಲಕ ಜಿನೋಮ್ ಸೀಕ್ವೆನ್ಸಿಂಗ್ ನ್ನು ಹೆಚ್ಚಿಸುವುದಕ್ಕೆ ಸರ್ಕಾರ ರಚನೆ ಮಾಡಿರುವ ಜಿನೋಮ್ ನಿಗಾ (ಅಧ್ಯಯನ) ಸಮಿತಿ ನಿರ್ಧರಿಸಿದೆ.
ಈ ಯೋಜನೆಯನ್ನು ಆರೋಗ್ಯ ಸಚಿವ ಕೆ.ಸುಧಾಕರ್ ಘೋಷಣೆ ಮಾಡಿದ್ದು, ವೆನ್ಲಾಕ್ ಆಸ್ಪತ್ರೆ, ಮಂಗಳೂರು, ವಿಜಯಪುರದ ಜಿಲ್ಲಾ ಆಸ್ಪತ್ರೆ ಹಾಗೂ ಇನ್ನೂ 5 ವೈದ್ಯಕೀಯ ಕಾಲೇಜುಗಳು ಸೇರಿ ಒಟ್ಟು 7 ಜಿನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.
"ಸೆಲ್ಯುಲರ್ ಹಾಗೂ ಮೊಲಿಕ್ಯುಲರ್ ವೇದಿಕೆ (ಸಿ-ಕ್ಯಾಂಪ್) ಐಬಿಎಬಿ ಹಾಗೂ ಐಟಿ-ಬಿಟಿ ಇಲಾಖೆ-ಸ್ಟ್ರಾಂಡ್-ಹೆಚ್ ಸಿಜಿ ಆಸ್ಪತ್ರೆ, ಐಐಎಸ್ ಸಿ ಹಾಗೂ ಎನ್ ಸಿಬಿಎಸ್ ಸಹಯೋಗದಲ್ಲಿ ಪ್ರಯೋಗಾಲಯದ ಸಿಬ್ಬಂದಿಗಳಿಗೆ ಜಿನೋಮ್ ಸೀಕ್ವೆನ್ಸಿಂಗ್ ನಡೆಸುವುದಕ್ಕೆ ತರಬೇತಿ ಕೊಡಿಸಲಾಗುತ್ತದೆ" ಎಂದು ರಾಜ್ಯ ಜಿನೋಮ್ ನಿಗಾ (ಅಧ್ಯಯನ) ಸಮಿತಿ ಹಾಗೂ ಹೆಚ್ ಸಿಜಿ ಕ್ಯಾನ್ಸರ್ ಕೇಂದ್ರ ತಲೆ-ಕುತ್ತಿಗೆ ಸರ್ಜಿಕಲ್ ಆನ್ಕಾಲಜಿ ವಿಭಾಗದ ನಿರ್ದೇಶಕ ಡಾ. ವಿಶಾಲ್ ರಾವ್ ಮಾಹಿತಿ ನೀಡಿದ್ದಾರೆ
ಬ್ರಿಟನ್ ರೂಪಾಂತರಿ ವೈರಾಣು ಪತ್ತೆಯಾದಾಗ, ದೃಢಪಟ್ಟ ಸೋಂಕು ಮಾದರಿಗಳನ್ನು ಸಂಗ್ರಹಿಸಿ ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ನ್ನು ಪ್ರಾರಂಭಿಸಲಾಗಿತ್ತು. ಆ ನಂತರದಲ್ಲಿ ದಕ್ಷಿಣ ಆಫ್ರಿಕಾದ ರೂಪಾಂತರಿ ಪತ್ತೆಯಾಗಿತ್ತು. ಈಗ ಡೆಲ್ಟಾ ಹಾಗೂ ಕಪ್ಪಾ ವೈರಾಣುಗಳು ದೇಶದಲ್ಲಿ 318 ಪತ್ತೆಯಾಗಿದ್ದರೆ ಕರ್ನಾಟಕದಲ್ಲಿ 112 ಮಂದಿಯಲ್ಲಿ ಪತ್ತೆಯಾಗಿದೆ.
ಈ ವರೆಗೂ 350-400 ಮಾದರಿಗಳಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ನಡೆಸಲಾಗಿದೆ. ಆದರೆ ಇದರ ದುಪ್ಪಟ್ಟು ಜಿನೋಮ್ ಸೀಕ್ವೆನ್ಸಿಂಗ್ ನಡೆಸಬೇಕಾಗಿದೆ. ತಂತ್ರಜ್ಞಾನ ಬಳಸಿಕೊಂಡು ವಾರಕ್ಕೆ 1,000 ಸ್ಯಾಂಪಲ್ ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಒಳಪಡಿಸಬೇಕಾಗಿದೆ ಎಂದು ಡಾ.ರಾವ್ ಮಾಹಿತಿ ನೀಡಿದ್ದಾರೆ.
Advertisement