ಬೆಂಗಳೂರು: ತಾಂತ್ರಿಕ ಸಲಹಾ ಸಮಿತಿ ಕಳೆದ ನವೆಂಬರ್ ನಲ್ಲಿ ಎಚ್ಚರಿಸಲ್ಪಟ್ಟರೂ ಕೋವಿಡ್-19 ಎರಡನೇ ಅಲೆ ತೀವ್ರತೆಯನ್ನು ನಿರೀಕ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದೀಗ ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ ಆದ ದುರಂತ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಆದರೂ ಆಶ್ಚರ್ಯಪಡಬೇಕಿಲ್ಲ.
ರಾಜಧಾನಿಯ ಮೂರು ಆಸ್ಪತ್ರೆಗಳಲ್ಲಿ ಸೋಮವಾರ ಆಕ್ಸಿಜನ್ ಇಲ್ಲದೆ ಗಂಭೀರ ಪರಿಸ್ಥಿತಿ ಎದುರಾಗಿತ್ತು. ಆರ್ ಟಿ ನಗರದ ಮೆಡಾಕ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 30 ರೋಗಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಅವರು ಕುಟುಂಬಕ್ಕೆ ಮನವಿ ಮಾಡಿದ್ದರು.
ಮತ್ತೊಂದು ಆಸ್ಪತ್ರೆ ರಾಜರಾಜೇಶ್ವರಿ ನಗರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲೂ ಆಕ್ಸಿಜನ್ ಕೊರತೆ ತೀವ್ರವಾಗಿತ್ತು. ಆದಾಗ್ಯೂ ಸ್ವಯಂ ಸೇವಕರು ಮೆಡಾಕ್ಸ್ ಆಸ್ಪತ್ರೆಗೆ ನೆರವಾದರೆ ರಾಮನಗರ ಜಿಲ್ಲಾಧಿಕಾರಿ 20 ಸಿಲಿಂಡರ್ ಗಳನ್ನು ಸಂಜೆ 5-30ಕ್ಕೆ
ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇದು ಸಾಕಾಗುವುದಿಲ್ಲ, ಆಕ್ಸಿಜನ ಕೊರತೆ ಸಮಸ್ಯೆ ಕೆಲ ದಿನಗಳಿಂದ ನಗರದಲ್ಲಿ ಪದೇ ಪದೇ ಆಗುತ್ತಲೇ ಇದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಮೆಡಾಕ್ಸ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಶ್ರೀಹರಿ ಆರ್ ಶಹಪೂರ್, ವಾರದಿಂದಲೂ ಆಕ್ಸಿಜನ್ ಕೊರತೆ ಸಮಸ್ಯೆ ಎದುರುಸುತ್ತಿದ್ದೇವೆ. ಆಕ್ಸಿಜನ್ ಗಾಗಿ ಆಸ್ಪತ್ರೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಈವರೆಗೂ ಹೊಸೂರು ನಿಂದ ಆಕ್ಸಿಜನ್ ಪಡೆಯುತ್ತಿದ್ದೇವು. ಆದರೆ,ಈಗ ಅಲ್ಲಿಂದ ಪೂರೈಕೆ ಕಡಿಮೆಯಾಗಿದೆ. ಅವರು ಬಿಟ್ಟರೆ
ಬೇರೆ ಆಯ್ಕೆಗಳಿಲ್ಲ, ನಿನ್ನೆ ಸಂಜೆ 4-30ರ ವೇಳೆಗೆ 15 ಸಿಲಿಂಡರ್ ಗಳನ್ನು ವಿವಿಧ ಸ್ವಯಂ ಸೇವಕರು ಹಾಗೂ ಶಿಫಾ ಆಸ್ಪತ್ರೆಯಿಂದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಆಕ್ಸಿಜನ್ ಗಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನು ಕೇಳಿದರೆ, ಸರಿಯಾಗಿ ಸ್ಪಂದಿಸುತ್ತಿಲ್ಲ. ಸಮರ್ಪಕವಾಗಿ ಆಕ್ಸಿಜನ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ,ಸ್ವಯಂ ಸೇವಕರು ಸಿಲಿಂಡರ್ ಗಳನ್ನು ವ್ಯವಸ್ಥೆ ಮಾಡುತ್ತಿರುವುದಾಗಿ ಸ್ವಯಂ ಸೇವಕ ಡಾ.ಸಾಕಿಬ್ ಇದ್ರೀಸ್ ಹೇಳಿದರು.
ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 9 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವಿದೆ. ಆದರೆ,ಕೇವಲ ಎರಡು ಟನ್ ಪಡೆಯುತ್ತಿದ್ದೇವೆ. ಇದು ಕೇವಲ 16 ಗಂಟೆಗೆ ಸಾಕಾಗುತ್ತದೆ. 200 ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಆಗತ್ಯವಿದೆ ಎಂದು ರಾಜರಾಜೇಶ್ವರಿನಗರ ಮೆಡಿಕಲ್
ಕಾಲೇಜ್ ಮತ್ತು ಆಸ್ಪತ್ರೆಯ ಪ್ರಿನ್ಸಿಪಾಲ್ ಡಾ. ಎಸ್. ನವೀನ್ ತಿಳಿಸಿದರು.
ಮತ್ತೊಂದೆಡೆ ಯಲಹಂಕದ ಚೈತನ್ಯ ಮೆಡಿಕಲ್ ಸೆಂಟರ್ ನಲ್ಲಿಯೂ ರೋಗಿಗಳಿಗೆ ಆಕ್ಸಿಜನ್ ಕೊರತೆಯ ಸಮಸ್ಯೆ ಇರುವುದಾಗಿ ಆಸ್ಪತ್ರೆಯವರು ತಿಳಿಸಿದ್ದಾರೆ.
Advertisement