ಬೆಂಗಳೂರು: ರಾಜ್ಯಪಾಲರ ಹುದ್ದೆ ಪಡೆಯಲು ನಿವೃತ್ತ ನ್ಯಾಯಮೂರ್ತಿ ಬಿ ಎಸ್ ಇಂದ್ರಕಲಾ ಲಂಚ ಪಾವತಿ ಮಾಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿ ಕುರಿತು ಕರ್ನಾಟಕ ಹೈಕೋರ್ಟ್ ಈಚೆಗೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಆದೇಶಿಸಿದೆ.
“ಕಚೇರಿ ಆಕ್ಷೇಪಣೆಗಳನ್ನು ಬದಿಗೆ ಸರಿಸಲಾಗಿದೆ. ಹೆಚ್ಚುವರಿ ಸರ್ಕಾರಿ ವಕೀಲರಿಗೆ ಪ್ರತಿವಾದಿ 1, 2 & 3 (ಪೊಲೀಸ್) ಪರವಾಗಿ ನೋಟಿಸ್ ಪಡೆಯಲು ಆದೇಶಿಸಲಾಗಿದೆ. ನಾಲ್ಕನೇ ಪ್ರತಿವಾದಿಯಾದ ನಿವೃತ್ತ ನ್ಯಾ. ಇಂದ್ರಕಲಾ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ” ಎಂದು ನ್ಯಾ. ಕೃಷ್ಣ ದೀಕ್ಷಿತ್ ನೇತೃತ್ವದ ಏಕ ಸದಸ್ಯ ಪೀಠ ಆದೇಶ ಮಾಡಿದೆ.
ನಿವೃತ್ತ ನ್ಯಾ. ಇಂದ್ರಕಲಾ ಅವರಿಂದ ಪಡೆದ ಲಿಖಿತ ಮಾಹಿತಿ ಆಧರಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ ಗಳಾದ 109 (ಕುಮ್ಮಕ್ಕು), 34 (ಸಾಮಾನ್ಯ ಉದ್ದೇಶ) ಮತ್ತು 420 (ವಂಚನೆ) ಅಡಿ ಪೊಲೀಸರು ದೂರು ದಾಖಲಿಸಿದ್ದಾರೆ. ಇಲ್ಲಿ ಯುವರಾಜ್ ಮತ್ತು ಪಾಪಯ್ಯ ಅವರನ್ನು ಕ್ರಮವಾಗಿ ಮೊದಲ ಮತ್ತು ಎರಡನೇ ಆರೋಪಿಗಳನ್ನಾಗಿಸಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
Advertisement