ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ನಿನ್ನೆ ಸಂಜೆ ಸುರಿದ ಗುಡುಗು ಸಹಿತ ಮಳೆಯ ವೇಳೆ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ತಿಪ್ಪೇ ಸ್ವಾಮಿ (46) ಮೃತ ವ್ಯಕ್ತಿ, ಅವರ ಪುತ್ರ ಚಿದಾನಂದ್ (22) ಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಟಿ.ದಾಸರಹಳ್ಳಿಯ ನಿವಾಸಿಯಾಗಿರುವ ತಿಪ್ಪೇಸ್ವಾಮಿ ಅವರು ಸಂಬಂಧಿಕರ ಮನೆಗೆ ತೆರಳಿದ್ದರು.
ಕಾರ್ಯಕ್ರಮ ಮುಗಿಸಿಕೊಂಡು ನೈಸ್ ರಸ್ತೆಯಲ್ಲಿ ವಾಪಸ್ ಬರುವಾಗ ಮಳೆ ಬಂತು, ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದರು. ಈ ವೇಳೆ ಸಿಡಿಲು ಬಡಿದಿದ್ದರಿಂದ ತಿಪ್ಪೇಸ್ವಾಮಿ ಅವರು ಸ್ಥಳದಲ್ಲೇ ಮೃತಪಟ್ಟಿದ್ಧಾರೆ. ಅವರ ಪುತ್ರ ಚಿದಾನಂದ್ ಗೆ ಗಾಯಗಳಾಗಿದ್ದು, ಅವರನ್ನು ಹೊಯ್ಸಳ ಸಿಬ್ಬಂದಿ
ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿದಾನಂದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರಗಳು ಮಿಂಚಿನ ವಾಹಕಗಳಾಗಿರುವುದರಿಂದ ಗುಡುಗು ಸಹಿತ ಮಳೆಯ ಸಮಯದಲ್ಲಿ ಮರದ ಕೆಳಗೆ ಆಶ್ರಯ ಪಡೆಯಬಾರದು ಎಂದು ತಜ್ಞರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
Advertisement