10 ದಿನಗಳಿಂದ ಭೂಕಂಪನ: ಗಡಿಕೇಶ್ವರ ಗ್ರಾಮಕ್ಕೆ ಎನ್‌ಜಿಆರ್‌ಐ ತಂಡ ಭೇಟಿ; ತಾತ್ಕಾಲಿಕ ಸಿಸ್ಮೋಮೀಟರ್ ಸ್ಥಾಪನೆ

ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಕಳೆದ 10 ದಿನಗಳಿಂದ ಭೂಕಂಪನವಾಗುತ್ತಿರುವುದರಿಂದ ಭಾನುವಾರ ಹೈದರಾಬಾದಿನ ಎನ್‌ಜಿಆರ್‌ಐ ವಿಜ್ಞಾನಿಗಳ ತಂಡ ಭೇಟಿ ನೀಡಿ ಭೂಕಂಪನದ ಅಲೆಯನ್ನು ಅಳೆಯಲು ಸಿಸ್ಮೋಮೀಟರ್ ಅನ್ನು ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದೆ.
ಸಿಸ್ಮೋಮೀಟರ್
ಸಿಸ್ಮೋಮೀಟರ್

ಕಲಬುರಗಿ: ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಕಳೆದ 10 ದಿನಗಳಿಂದ ಭೂಕಂಪನವಾಗುತ್ತಿರುವುದರಿಂದ ಭಾನುವಾರ ಹೈದರಾಬಾದಿನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ(ಎನ್‌ಜಿಆರ್‌ಐ) ವಿಜ್ಞಾನಿಗಳ ತಂಡ ಭೇಟಿ ನೀಡಿ ಭೂಕಂಪನದ ಅಲೆಯನ್ನು ಅಳೆಯಲು ಸಿಸ್ಮೋಮೀಟರ್ ಅನ್ನು ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದೆ.

ಇಲ್ಲಿ ಸಿಸ್ಮೋಮೀಟರ್ ಸ್ಥಾಪಿಸಿದ್ದರಿಂದ ಗಡಿಕೇಶ್ವರ ಸುತ್ತಮುತ್ತ ಗ್ರಾಮಗಳಲ್ಲಿ ಭೂಕಂಪಗಳು ಸಂಭವಿಸಿದಲ್ಲಿ ನೆಲದೊಳಗಿನ‌ ಭೂಮಿಯ ಚಲನೆಯನ್ನು ಇಲ್ಲಿ ದಾಖಲಾಗಿ ಮಾಹಿತಿಯು ನೇರವಾಗಿ ಹೈದ್ರಬಾದಿನ ಎನ್.ಜಿ.ಆರ್.ಐ ಸಂಸ್ಥೆಗೆ ರವಾನೆ ಆಗಲಿದೆ. ತದನಂತರ‌ ಇದರ ಮಾಹಿತಿ ಆಧರಿಸಿ‌ ಮುಂದೆ ಕೈಗೊಳ್ಳಬೇಕಾದ‌ ಕ್ರಮಗಳ‌ ಬಗ್ಗೆ‌ ವಿಜ್ಞಾನಿಗಳ ತಂಡ‌ ನಿರ್ಧರಿಸಲಿದೆ.

ಸಿಸ್ಮೋಮೀಟರ್  ಸ್ಥಾಪನೆಯ ನಂತರ ಡೆಮೋ ಸಹ ಪ್ರದರ್ಶಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮಾಪಕ ಉಪಕರಣಗಳ ಕಾರ್ಯನಿರ್ವಹಣೆಯ ಕುರಿತು ವಿಜ್ಞಾನಿಗಳ ತಂಡ ಮಾಹಿತಿ ನೀಡಿತು.

ಎನ್.ಜಿ‌.ಅರ್.ಐ ಸಂಸ್ಥೆಯ ಭೂ ವಿಜ್ಞಾನಿ ಡಾ.ಸುರೇಶ, ಡಾ.ಶಶಿಧರ ಇವರೊಂದಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ಹಿರಿಯ ಭೂ ವಿಜ್ಞಾನಿ ಡಾ.ರಮೇಶ, ಕಿರಿಯ ವಿಜ್ಞಾನಿ ಡಾ.ಅಭಿನಯ, ಸಹಾಯಕ ವಿಜ್ಞಾನಿ ಅಣವೀರಪ್ಪ ಬಿರಾದರ ಅವರು ಗಡಿಕೇಶ್ವರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಚಿಂಚೋಳಿ ತಹಶೀಲ್ದಾರ ಅಂಜುಮ್ ತಬಸ್ಸುಮ್, ಜಿಲ್ಲಾಧಿಕಾರಿಗಳ ಕಚೇರಿಯ ಡಿಸ್ಟ್ರಿಕ್ಟ್ ಡಿಸಾಸ್ಟರ್ ಪ್ರೊಫೆಶನಲ್ ಉಮೇಶ ಬಿರಾದರ ಸೇರಿ  ಕಂದಾಯ ಇಲಾಖೆಯ ಇನ್ನಿತರ ಅಧಿಕಾರಿಗಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com