ನಕಲಿ ರೈಲ್ವೇ ನೇಮಕಾತಿ ದಂಧೆ ಭೇದಿಸಿದ ಮೈಸೂರು ಆರ್'ಪಿಎಫ್: 400 ಮಂದಿಗೆ ವಂಚನೆ, ಇಬ್ಬರು ಆರೋಪಿಗಳ ಬಂಧನ

ರೈಲ್ವೇ ಉದ್ಯೋಗಗಳ ಕೊಡಿಸುವುದಾಗಿ ಸುಳ್ಳು ಭರವಸೆ ನೀಡುವ ನಕಲಿ ರೈಲ್ವೇ ನೇಮಕಾತಿ ದಂಧೆಯನ್ನು ನೈಋತ್ಯ ರೈಲ್ವೇ ಮೈಸೂರು ವಿಭಾಗದ ರೈಲ್ವೇ ಸಂರಕ್ಷಣಾ ಪಡೆಯವರು (ಆರ್'ಪಿಎಫ್) ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ರೈಲ್ವೇ ಉದ್ಯೋಗಗಳ ಕೊಡಿಸುವುದಾಗಿ ಸುಳ್ಳು ಭರವಸೆ ನೀಡುವ ನಕಲಿ ರೈಲ್ವೇ ನೇಮಕಾತಿ ದಂಧೆಯನ್ನು ನೈಋತ್ಯ ರೈಲ್ವೇ ಮೈಸೂರು ವಿಭಾಗದ ರೈಲ್ವೇ ಸಂರಕ್ಷಣಾ ಪಡೆಯವರು (ಆರ್'ಪಿಎಫ್) ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮೈಸೂರಿನ ನಿವಾಸಿ ಚಂದ್ರ ಗೌಡ ಎಸ್ ಪಾಟೀಲ್ (44) ಹಾಗೂ ಶಿವಸ್ವಾಮಿ (62) ಎಂದು ಗುರ್ತಿಸಲಾಗಿದೆ. ಬಂಧಿತರು ನಕಲಿ ನೇಮಕಾತಿ ದಂಧೆ ನಡೆಸುವ ಮೂಲಕ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿಕೊಂಡು ಅಮಾಯಕರಿಗೆ ವಂಚಿಸಿದ್ದರು.

ಮೈಸೂರಿನ ರೈಲ್ವೇ ಆಸ್ಪತ್ರೆಯ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಹಾಗೂ ಛಾಯಾಚಿತ್ರ ತೆಗೆಯುತ್ತಿರುವ ಕೆಲವು ವ್ಯಕ್ತಿಗಳ ಚಲನವಲನದ ಬಗ್ಗೆ ಹಾಗೂ ಸಂಶಯಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಮುುಖ್ಯ ವೈದ್ಯಕೀಯ ಅಧೀಕ್ಷಕರು ದೂರು ನೀಡಿದ್ದರು. ಈ ಸಂಬಂಧ ಆರ್'ಪಿಎಫ್ ತಂಡ ರಚಿಸಿಕೊಂಡು ಕಾರ್ಯಾಚರಣೆ ಆರಂಭಿಸಿತ್ತು.

ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಯ ವಿಭಾಗೀಯ ಭದ್ರತಾ ಆಯುಕ್ತ ಥಾಮಸ್ ಜಾನ್ ಮತ್ತು ಸಹಾಯಕ ಭದ್ರತಾ ಆಯುಕ್ತರಾದ ಎ. ಶ್ರೀಧರ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗಳಾದ ಸತೀಶನ್, ಎಂ. ನಿಶಾದ್, ವೆಂಕಟೇಶ್, ರಾಧಾಕೃಷ್ಣ ಮತ್ತು ಇತರೆ ಸಿಬ್ಬಂದಿಗಳು ಆರೋಪಿಗಳಾದ ಚಂದ್ರಗೌಡ ಎಸ್. ಪಾಟೀಲ್ ಮತ್ತು ಶಿವಸ್ವಾಮಿ ಆರೋಪಿಗಳ ಚಲನವಲದ ಬಗ್ಗೆ ನಿಗಾವಹಿಸಿದ್ದರು.

ಮೈಸೂರಿನ ಹೈವೇ ಸರ್ಕಲ್ ಬಳಿಯ ಶಿವಶಕ್ತಿ ಕಲ್ಯಾಣ ಮಂಟಪದ ಎದುರಿನ ಮನೆಯೊಂದರಲ್ಲಿ ಈ ತಂಡದ ಕಾರ್ಯಾಚರಣೆ ಕೇಂದ್ರ ಇತ್ತು. ಈ ತಂಡದ ಗುರಿ ಮುಖ್ಯವಾಗಿ ಬಡ ಮತ್ತು ಮುಗ್ಧ ಹಳ್ಳಿ ಹುಡುಗರಾಗಿದ್ದರು. ಅವರು ಅಭ್ಯರ್ಥಿಗಳ ಮೂಲ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸಂಗ್ರಹಿಸಿ ನಕಲಿ ಕರೆ ಪತ್ರಗಳು, ನಕಲಿ ವೈದ್ಯಕೀಯ ಜ್ಞಾಪನ ಪತ್ರಗಳು ಮತ್ತು ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿದ್ದರು.

ಈ ತಂಡ ಸುಳ್ಳು ಭರವಸೆ ನೀಡಿ ಉದ್ಯೋಗ ಆಕಾಂಕ್ಷಿಗಳಿಂದ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಿತ್ತು. ಇದರಲ್ಲಿ ಅಂದಾಜಿನ ಪ್ರಕಾರ ಸುಮಾರು 400 ಅಭ್ಯರ್ಥಿಗಳು ರೂ.22 ಕೋಟಿಗಳಷ್ಟು ಹಣ ಕೊಟ್ಟು ಜನ ಮೋಸ ಹೋಗಿದ್ದಾರೆ. ಹಲವರು ತಮ್ಮ ಜಮೀನು ಮಾರಿ ಮತ್ತು ಹೆಚ್ಚಿನ ಬಡ್ಡಿಗೆ ಕೈ ಸಾಲ ಪಡೆದು ಹಣ ನೀಡಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

ಬಂಧಿತ ವಂಚಕರ ಬಳಿ ಒಟ್ಟು 221 ಸಹಿ ಮಾಡಿರುವ ಖಾಲಿ ಚೆಕ್ ಗಳು, ರೂಪಾಯಿ 4,15,000 ಮೊತ್ತದ ನಗದು, ಆಕಾಂಕ್ಷಿ ಅಭ್ಯರ್ಥಿಗಳ ಮೂಲ ದಾಖಲೆಗಳು, ಚೆಕ್ ಪುಸ್ತಕಗಳು, ಸುಮಾರು 100 ನಕಲಿ ರೈಲ್ವೆ ನೇಮಕಾತಿ ಆದೇಶಗಳು, 70 ಟಿಟಿಇಗಳ ನಕಲಿ ನಾಮಫಲಕಗಳು, ಒಂದು ಲ್ಯಾಪ್‌ಟಾಪ್, ಒಂದು ಕಂಪ್ಯೂಟರ್ ಸೇರಿದಂತೆ ಹಲವಾರು ವಸ್ತುಗಳು ದೊರೆತಿದ್ದು ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇದರೊಂದಿಗೆ ಆರ್'ಪಿಎಫ್ ತ್ವರಿತ ಮತ್ತು ಕ್ಷಿಪ್ರ ಕಾರ್ಯಾಚರಣೆಯೊಂದಿಗೆ ರೈಲ್ವೆಯಲ್ಲಿ ನಕಲಿ ನೇಮಕಾತಿಯನ್ನು ಒಳಗೊಂಡ ದೊಡ್ಡ ದಂಧೆಯನ್ನು ಭೇದಿಸಿದೆ. ಆರೋಪಿಗಳನ್ನು ಅಗತ್ಯ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಲು ಮಂಡಿ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನ ನೈಋತ್ಯ ರೈಲ್ವೆ ವಿಭಾಗದ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಅವರು ಮಾತನಾಡಿ, ರೈಲ್ವೆ ನೇಮಕಾತಿಗೆ ಸಂಬಂಧಿಸಿದ ಯಾವುದೇ ಸೂಚನೆ ಅಥವಾ ಮಾಹಿತಿಗೆ ರೈಲ್ವೇ ನೇಮಕಾತಿ ಮಂಡಳಿಗಳ (ಆರ್'ಆರ್'ಬಿ) ಅಧಿಕೃತ ವೆಬ್‌ಸೈಟ್‌ಗಳಿಗೆ ಮಾಚ್ಕ ಭೇಟಿ ನೀಡುವಂತೆ ಅಭ್ಯರ್ಥಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. "ಆರ್‌ಆರ್‌ಬಿಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಯಾವುದೇ ಮಾಹಿತಿ ಅಥವಾ ಸೂಚನೆಗಳು ಜನರು ನಿರ್ಲಕ್ಷಿಸಬೇಕೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com