ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಿರಿಯ ಪುತ್ರಿ ದೃತಿ ಅವರು ಕೆಲವೇ ಕ್ಷಣಗಳ ಹಿಂದೆ ನವದೆಹಲಿಗೆ ಬಂದಿಳಿದರು.
ಅಮೆರಿಕಾದಿಂದ ಪ್ರಯಾಣಿಸಿದ್ದ ಅವರು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ. ಇಂದು ಮಧ್ಯಾಹ್ನ 1-30ಕ್ಕೆ ಹೊರಡಲಿರುವ ಏರ್ ಇಂಡಿಯಾದ ವಿಶೇಷ ವಿಮಾನ 502 ವಿನಲ್ಲಿ ಬೆಂಗಳೂರು ತಲುಪುತ್ತಾರೆ.
ಸಂಜೆ 4-15ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿರುವ ದ್ರಿತಿ, ಅಲ್ಲಿಂದ ನೇರವಾಗಿ ಕಂಠೀರವ ಸ್ಟುಡಿಯೋಗೆ ತೆರಳಲಿದ್ದು, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಮಧ್ಯೆ ಮಧ್ಯಾಹ್ನ ಮೂರು ಗಂಟೆಗೆ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಮೆರವಣಿಗೆಗೆ ಸಿದ್ಧತೆ ನಡೆಸಲಾಗಿದೆ. ಕಂಠೀರವ ಕ್ರೀಡಾಂಗಣದಿಂದ ಕಾರ್ಪೋರೇಷನ್ ಸರ್ಕಲ್, ಬಸವೇಶ್ವರ ಸರ್ಕಲ್, ವಿಂಡ್ಸರ್ ಮ್ಯಾನರ್, ಸ್ಯಾಂಕಿ ಟ್ಯಾಂಕ್, ಸರ್ಕಲ್ ಮಾರಮ್ಮ ದೇವಾಲಯ, ಯಶವಂತಪುರ ಮತ್ತು ಗೊರಗುಂಟೆ ಪಾಳ್ಯ ಮಾರ್ಗವಾಗಿ ಕಂಠೀರವ ಸ್ಟುಡಿಯೋಗೆ ಪಾರ್ಥಿವ ಶರೀರ ತಲುಪಲಿದ್ದು, ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ.
Advertisement