ಬೆಂಗಳೂರು: ನಗರದ ಚಾಮರಾಜಪೇಟೆಯ ರಾಯನ್ ಸರ್ಕಲ್ ಬಳಿ ನ್ಯೂ ತರಗುಪೇಟೆಯಲ್ಲಿ ಮಧ್ಯಾಹ್ನ ತೀವ್ರ ಪ್ರಮಾಣದ ಸ್ಫೋಟ ಸಂಭವಿಸಿದ್ದು ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದು ಸಿಲಿಂಡರ್ ಸ್ಫೋಟವಲ್ಲ, ನಿಗೂಢ ರೀತಿಯಲ್ಲಿ ಸ್ಫೋಟವಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಐದು ಮಂದಿ ಗಾಯಗೊಂಡಿದ್ದು ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಘಟನೆಯಲ್ಲಿ ಪ್ರದೇಶದಲ್ಲಿ ನಿಲ್ಲಿಸಿದ್ದ ಹತ್ತಾರು ಬೈಕ್ ಗಳು ಸಂಪೂರ್ಣ ಕರಗಲಾಗಿವೆ ಎಂದು ವಿವರ ನೀಡಿದರು.
ನ್ಯೂ ತರಗುಪೇಟೆಯ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದಾರೆ. ಗೋದಾಮಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಕಂಪ್ರೆಸರ್ ಅಥವಾ ಸಿಲಿಂಡರ್ ಸ್ಫೋಟದ ಬಗ್ಗೆ ಮಾಹಿತಿಯಿಲ್ಲ. ಮೇಲ್ನೋಟಕ್ಕೆ ಪಟಾಕಿ ಸ್ಫೋಟದ ರೀತಿಯಲ್ಲಿ ಕಾಣುತ್ತಿದೆ ಎಂದು ಹೇಳಿದ್ದಾರೆ.
ಸ್ಫೋಟದ ಮೂಲವನ್ನು ಇನ್ನೂ ತನಿಖೆ ಮಾಡುತ್ತಿದ್ದೇವೆ. ಬೇರೆ ಬೇರೆ ಕಂಪೆನಿಗಳ ಸಂಗ್ರಹ, ವಸ್ತುಗಳನ್ನು ಗೋದಾಮಿನಲ್ಲಿರಿಸಿದ್ದರು. ಗೋದಾಮಿನಲ್ಲಿ ಎಷ್ಟು ದಿನಗಳಿಂದ, ಎಲ್ಲೆಲ್ಲಿಂದ ತಂದು ಪಟಾಕಿಗಳನ್ನು ಇರಿಸಿದ್ದರು ಎಂದು ನಾವು ಮುಂದೆ ತನಿಖೆ ಮಾಡುತ್ತೇವೆ. ಸಿಲಿಂಡರ್ ನಿಂದ ಅಥವಾ ಶಾರ್ಟ್ ಸರ್ಕ್ಯೂಟ್ ನಿಂದ ಸ್ಫೋಟವಾಗಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ.ಪಟಾಕಿಯಿಂದಲೇ ಆಗಿದ್ದು ಎಂದು ತಕ್ಷಣಕ್ಕೆ ಕಂಡುಬರುತ್ತಿದ್ದು ವಿಧಿ ವಿಜ್ಞಾನ ಪ್ರಯೋಗಾಲಯದವರನ್ನು ಕರೆಸಿ ತನಿಖೆ ಮಾಡಲಾಗುವುದು ಎಂದು ಹೇಳಿದರು.
ಗೋದಾಮಿನಲ್ಲಿ 60ಕ್ಕಿಂತಲೂ ಹೆಚ್ಚು ಪಟಾಕಿ ಬಾಕ್ಸ್ ಗಳಿದ್ದು ಅವು ಸ್ಫೋಟಗೊಂಡಿಲ್ಲ. ಒಂದೆರಡು ಬಾಕ್ಸ್ ಗಳು ಸ್ಫೋಟವಾಗಿವೆ. ಪಕ್ಕದಂಗಡಿಯಲ್ಲಿ ಕೂಡ ಯಾವುದೇ ಹಾನಿಯಿಲ್ಲ ಎಂದರು. ಸದ್ಯ ಸ್ಥಳಕ್ಕೆ ಬಾಂಬ್ ಪತ್ತೆದಳ, ಶ್ವಾನದಳ ಬಂದು ಪರಿಶೀಲನೆ ನಡೆಸುತ್ತಿದೆ.
Advertisement