ನಂದಿ ಬೆಟ್ಟ ಸುತ್ತಮುತ್ತ ಭೂಕಂಪನದ ಅನುಭವ ಮಧ್ಯೆ ರೋಪ್ ವೇ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮುಂದು

ಸ್ಥಳೀಯರು ಮತ್ತು ಪರಿಸರವಾದಿಗಳ ತೀವ್ರ ವಿರೋಧದಿಂದಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಯೋಜನೆ ಕೈಬಿಡಲಾಗಿದ್ದರೂ, ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಮೊದಲ ರೋಪ್‌ವೇ ಯೋಜನೆಯನ್ನು ಕಾರ್ಯಗತಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. 
ನಂದಿ ಬೆಟ್ಟದ ಮೇಲಿನ ರಮಣೀಯ ದೃಶ್ಯ
ನಂದಿ ಬೆಟ್ಟದ ಮೇಲಿನ ರಮಣೀಯ ದೃಶ್ಯ
Updated on

ಬೆಂಗಳೂರು: ಸ್ಥಳೀಯರು ಮತ್ತು ಪರಿಸರವಾದಿಗಳ ತೀವ್ರ ವಿರೋಧದಿಂದಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಯೋಜನೆ ಕೈಬಿಡಲಾಗಿದ್ದರೂ, ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಮೊದಲ ರೋಪ್‌ವೇ ಯೋಜನೆಯನ್ನು ಕಾರ್ಯಗತಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. 

ಬೆಂಗಳೂರು ನಗರದಿಂದ 61 ಕಿಲೋ ಮೀಟರ್ ದೂರದಲ್ಲಿರುವ ನಂದಿ ಗಿರಿಧಾಮದಲ್ಲಿ ರೋಪ್‌ವೇ ಯೋಜನೆಗೆ ಕಂಪೆನಿ ಆಸಕ್ತಿ ತೋರಿರುವುದರಿಂದ ಪ್ರವಾಸೋದ್ಯಮ ಇಲಾಖೆ ಇದೀಗ ಟೆಂಡರ್ ಕರೆಯಲು ಮುಂದಾಗಿದೆ. ಎರಡು ಅಥವಾ ಮೂರು ತಿಂಗಳೊಳಗೆ ಕೆಲಸ ಪ್ರಾರಂಭವಾಗಲಿದೆ. ಅರಣ್ಯ ಇಲಾಖೆಯಿಂದ ಅನುಮತಿಗಾಗಿ ಕಾಯುತ್ತಿದ್ದೇವೆ, ಅದಕ್ಕಾಗಿ ಅರಣ್ಯ ಭೂಮಿಯನ್ನು ಬೇರೆಡೆಗೆ ತಿರುಗಿಸಬೇಕಾಗಿದೆ. ಸ್ವಾಧೀನಪಡಿಸಿಕೊಳ್ಳಬೇಕಾದ ಭೂಮಿಯ ವಿಸ್ತೀರ್ಣದ ಸಮೀಕ್ಷೆಯೂ ಪ್ರಾರಂಭವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಗೆ ತಿಳಿಸಿದ್ದಾರೆ.

ಆದಾಗ್ಯೂ, ಈ ಪ್ರದೇಶದಲ್ಲಿ ಭೂಮಿ ಕಂಪಿಸುವ ಘಟನೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರು ಹೇಳುತ್ತಾರೆ. ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಕಂಪನಗಳು ಈ ಹಿಂದೆ ಸಂಭವಿಸಿವೆ. ಆದ್ದರಿಂದ ಮರಗಳನ್ನು ಕತ್ತರಿಸುವುದು, ಅರಣ್ಯ ಭೂಮಿಯನ್ನು ಬೇರೆಡೆಗೆ ತಿರುಗಿಸುವ ಪರಿಣಾಮದ ಬಗ್ಗೆ ಪರಿಸರ ವರದಿಯನ್ನು ಹೊಂದಿರುವುದು ಮುಖ್ಯವಲ್ಲ, ದುರ್ಬಲ ಭೂಮಿ ಮೇಲೆ ಕಂಬಗಳು ಮತ್ತು ಕೊರೆಯುವುದರಿಂದ ಮುಂದಿನ ದಿನಗಳಲ್ಲಿ ಅಪಾಯವುಂಟಾಗುವ ಸಾಧ್ಯತೆಯಿದೆ. ರೋಪ್ ವೇ ಕೆಲಸಕ್ಕೆ ಮುಂದಾಗುವ ಮುನ್ನ ತಜ್ಞರಿಂದ ಪರಿಸರ ಭೂಮಿಯ ಅಧ್ಯಯನ ಮಾಡಿಸುವುದು ಅತ್ಯಗತ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕಳೆದ ಫೆಬ್ರವರಿಯಲ್ಲಿ ರಾಜ್ಯ ಸಚಿವ ಸಂಪುಟ 93.40 ಕೋಟಿ ರೂಪಾಯಿ ವೆಚ್ಚದಲ್ಲಿ 2.93 ಕಿಮೀ ದೂರದಲ್ಲಿ 18 ಪಿಲ್ಲರ್‌ಗಳೊಂದಿಗೆ ರೋಪ್ ವೇ ನಿರ್ಮಿಸುವ ಯೋಜನೆಗೆ ಅನುಮತಿ ನೀಡಿತ್ತು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳ ಪ್ರಕಾರ, ನಂದಿ ಹಿಲ್ಸ್‌ನಲ್ಲಿ ವಾರಾಂತ್ಯದ ವಹಿವಾಟು ಸುಮಾರು 5 ಲಕ್ಷ ರೂಪಾಯಿಯಾಗಿದೆ, ಇದರಲ್ಲಿ ಹೋಟೆಲ್ ಅತಿಥಿಗಳು, ಪ್ರವಾಸಿಗರ ಭೇಟಿ ಮತ್ತು ರೆಸ್ಟೋರೆಂಟ್ ಮಾರಾಟ ಸೇರಿವೆ. ರೋಪ್‌ವೇ ಬಂದರೆ ವಹಿವಾಟು ಬಹುಪಟ್ಟು ಹೆಚ್ಚಾಗುತ್ತದೆ. ನಂದಿ ಬೆಟ್ಟಗಳು ಹೆಚ್ಚಿನ ಪ್ರವಾಸಿ ಸಾಮರ್ಥ್ಯವನ್ನು ಹೊಂದಿದೆ ಎನ್ನುತ್ತಾರೆ ಅಧಿಕಾರಿಗಳು. 

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಪ್ರದೇಶದಲ್ಲಿ ಭೂಕಂಪನದ ಅಧ್ಯಯನದ ಅಗತ್ಯವಿದೆ ಎಂದು ಹೇಳಿದರೆ, ಇಂತಹ ಬೃಹತ್ ಯೋಜನೆಯನ್ನು ಯೋಜಿಸುವ ಸಂದರ್ಭದಲ್ಲಿ ಇದುವರೆಗೆ ಯಾವುದೇ ಮೌಲ್ಯಮಾಪನಕ್ಕಾಗಿ ತಮ್ಮನ್ನು ಸಂಪರ್ಕಿಸಿಲ್ಲ ಎನ್ನುತ್ತಾರೆ.

ಕಳೆದ ವರ್ಷ ಅತಿವೃಷ್ಟಿಯಿಂದಾಗಿ ನಂದಿಬೆಟ್ಟ ಮತ್ತು ದೇವರಾಯದುರ್ಗದಲ್ಲಿ ಭೂಕುಸಿತ ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರದೇಶದಲ್ಲಿ ಬಂಡೆ ಕುಸಿತವೂ ಉಂಟಾಗಿದೆ. ಕಳೆದ ವರ್ಷ ಚಿಕ್ಕಬಳ್ಳಾಪುರದಲ್ಲಿ ಲಘು ಭೂಕಂಪಗಳು ಮತ್ತು ಕಂಪನಗಳು ಸಂಭವಿಸಿವೆ ಕಳೆದ ಮೇ ತಿಂಗಳಲ್ಲಿ ರಿಕ್ಟರ್ ಮಾಪಕದಲ್ಲಿ 2.6 ಮತ್ತು 2.4 ಅಳತೆಯ ಭೂಕಂಪಗಳು ವರದಿಯಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com