ಬೆಂಗಳೂರು: ಚುನಾವಣೆ ಹೊಸ್ತಿಲಿನಲ್ಲಿರುವ ಕರ್ನಾಟಕ ರಾಜ್ಯದಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ ಮಠಗಳು,ದೇವಾಲಯಗಳು, ಟ್ರಸ್ಟ್ ಗಳಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಈ ಮೂಲಕ ಬಿಜೆಪಿ ಸರ್ಕಾರ ಮಠ-ಮಾನ್ಯಗಳಿಗೆ ಪ್ರಾಮುಖ್ಯತೆ ಕೊಡುತ್ತಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ.
ಮುಜರಾಯಿ ಇಲಾಖೆ ಒಟ್ಟು 142.59 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ 178 ಮಠಗಳು, 59 ದೇವಸ್ಥಾನಗಳು, 26 ಸಂಘ-ಸಂಸ್ಥೆಗಳು ಸೇರಿವೆ. ಸಮಾಜಮುಖಿ ಚಟುವಟಿಕೆಗಳು, ಅಭಿವೃದ್ಧಿ, ಜೀರ್ಣೋದ್ಧಾರ ಕಾರ್ಯಗಳಿಗೆ ಈ ಹಣ ಬಳಸಿಕೊಳ್ಳಲು ಅವಕಾಶವಿದೆ. 178 ಮಠಗಳಿಗೆ 108.24 ಕೋಟಿ ರೂ, 59 ದೇವಸ್ಥಾನಗಳಿಗೆ 21.35 ಕೋಟಿ ರೂಪಾಯಿ, 26 ಸಂಘ-ಸಂಸ್ಥೆಗಳು ಹಾಗೂ ಟ್ರಸ್ಟ್ಗಳಿಗೆ 13 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ಆರ್ಥಿಕ ಇಲಾಖೆಯ ಸಹಮತದ ಮೇರೆಗೆ 148.59 ಕೋಟಿ ರೂಪಾಯಿ ಅನುದಾನಕ್ಕೆ ಸರ್ಕಾರವು ಆಡಳಿತಾತ್ಮಕ ಮಂಜೂರಾತಿ ನೀಡಿದೆ.
ಷರತ್ತು ವಿಧಿಸಿರುವ ಸರ್ಕಾರ: ಸರ್ಕಾರ ಬಿಡುಗಡೆ ಮಾಡಿರುವ ಅನುದಾನಗಳನ್ನು ಬಳಸಿಕೊಳ್ಳಲು ಇದೇ ಸಂದರ್ಭದಲ್ಲಿ ಷರತ್ತು ವಿಧಿಸಲಾಗಿದೆ. ಮಂಜುರಾದ ಅನುದಾನವನ್ನು ‘ಖಜಾನೆ-2’ ಮೂಲಕ ಜಿಲ್ಲಾಧಿಕಾರಿಗಳ ಡಿಡಿಒಒ ಸಂಕೇತಕ್ಕೆ ಅಪ್ಲೋಡ್ ಮಾಡಬೇಕು. ಸಂಬಂಧಿಸಿದ ಜಿಲ್ಲಾಧಿಕಾರಿಗಳು ತಹಶೀಲ್ದಾರ್ರ ಮೂಲಕ ನಿಯಮಾನುಸಾರ ಪ್ರಸ್ತಾವನೆ ಪಡೆದು, ಅನುದಾನ ಮಂಜೂರಾತಿಗೆ ಒಪ್ಪಿಗೆ ನೀಡಬೇಕು. ತಹಶೀಲ್ದಾರ್ ಅವರೇ ಅನುದಾನದ ಮೊತ್ತವನ್ನು ಡ್ರಾ ಮಾಡಿ ಸಂಸ್ಥೆಗಳಿಗೆ ಕೊಡಬೇಕು ಎಂಬ ನಿಯಮವನ್ನು ಹೇರಲಾಗಿದೆ.
ಅನುದಾನ ಪಡೆದುಕೊಂಡ ಸಂಸ್ಥೆಯು ನಿಯಮಾನುಸಾರ ‘ಮುಂಗಡ ರಸೀದಿ’ (Advance Receipt) ಪಡೆದು ಸಾದಿಲ್ವಾರು ಬಿಲ್ಗೆ ಲಗತ್ತಿಸಿ ಸಂಸ್ಥೆಯ ಹೆಸರಿಗೆ ಖಜಾನೆಯ ಚೆಕ್ ನೀಡಬೇಕು. ಉದ್ದೇಶಿತ ಕಾಮಗಾರಿಗಳ ಅಂದಾಜುಪಟ್ಟಿಗೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಬೇಕು.
ಅನುದಾನ ಬಳಕೆ ಬಗ್ಗೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ಮುಜರಾಯಿ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ಅನುದಾನ ಬಳಕೆಯಲ್ಲಿ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಹಾಗೂ ಇತರ ನಿಯಮಗಳು ಅನ್ವಯವಾಗುತ್ತವೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಆದೇಶದಲ್ಲಿ ವಿವರಿಸಲಾಗಿದೆ.
Advertisement