ಬೆಂಗಳೂರು: ಆಡುಗೋಡಿಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ ಕ್ಯಾಂಪಸ್ ತ್ಯಾಜ್ಯ ನಿರ್ವಹಣಾ ಸೌಲಭ್ಯ ಹೊಂದಿರುವ ನಗರದ ಮೊದಲ ಪೊಲೀಸ್ ಇಲಾಖೆಯಾಗಲಿದೆ. ಆರ್ದ್ರ ತ್ಯಾಜ್ಯದ ಮೂಲಕ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಶೀಘ್ರದಲ್ಲೇ ತನ್ನ ಬೃಹತ್ ಶ್ವಾನದಳಕ್ಕೆ ಆಹಾರ ಬೇಯಿಸಲು ಬಳಸಲಾಗುತ್ತದೆ.
ತ್ಯಾಜ್ಯ ತೆಗೆಯುವವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಾಮಾಜಿಕ ಸಂಸ್ಥೆ ಹಸಿರು ದಳ ಇತ್ತೀಚೆಗೆ ಸಿಎಆರ್ ಆವರಣದಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ಮತ್ತು ಜೈವಿಕ ಅನಿಲ ಘಟಕವನ್ನು ಒಳಗೊಂಡ ಉಪಕರಣವನ್ನು ಸ್ಥಾಪಿಸಿದೆ. ಉಪ ಪೊಲೀಸ್ ಆಯುಕ್ತ (ಆಡಳಿತ) ನಿಶಾ ಜೇಮ್ಸ್ ನೇತೃತ್ವದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದ್ದು, ಡಿಸಿಪಿ ಚನ್ನಬಸಪ್ಪ ಹೊಸಮನಿ ಬೆಂಬಲ ನೀಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹಸಿರು ದಳ ಪ್ರಾಜೆಕ್ಟ್ ಮ್ಯಾನೇಜರ್ ನಿರ್ಮಲಾ ಶೇಖರ್, ದಿನಕ್ಕೆ ಒಂದು ಟನ್ ತ್ಯಾಜ್ಯವನ್ನು ನಿಭಾಯಿಸಬಲ್ಲ ಜೈವಿಕ ಅನಿಲ ಘಟಕ ಇದೀಗ ಸಂಸ್ಕರಣೆಯನ್ನು ಪ್ರಾರಂಭಿಸಿದೆ. ಇದು ಈಗ ಪೊಲೀಸ್ ಕ್ವಾರ್ಟರ್ಸ್ ಮತ್ತು ಕ್ಯಾಂಪಸ್ನೊಳಗಿನ 1400 ಮನೆಗಳು ಹಾಗೂ ಡಿಸಿಪಿ ಕಚೇರಿಯಿಂದ ಉತ್ಪತ್ತಿಯಾಗುವ 500 ಕಿಲೋಗ್ರಾಂಗಳಷ್ಟು ತ್ಯಾಜ್ಯವನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಎರಡು ವಾರಗಳಲ್ಲಿ ಜೈವಿಕ ಅನಿಲ ಸಂಪೂರ್ಣ ಬಳಕೆಗೆ ಸಿದ್ಧವಾಗಲಿದೆ. ಸಿಎಆರ್ ನಲ್ಲಿ 64 ಶ್ವಾನ ದಳವಿದೆ. ಅವುಗಳ ದೈನಂದಿನ ಆಹಾರ ತಯಾರಿಸಲು ಜೈವಿಕ ಅನಿಲವನ್ನು ಬಳಸಲಾಗುವುದು, ಇದು ಪರಿಸರ ಸ್ನೇಹಿ ಮತ್ತು ಆರ್ಥಿಕ ಪರಿಹಾರವಾಗಿದೆ ಎಂದು ಅವರು ಹೇಳಿದರು.
ಆವರಣದಲ್ಲಿರುವ ಅಂಗಡಿ, ಶಾಲೆ ಮತ್ತಿತರ ಕಟ್ಟಡಗಳ ತ್ಯಾಜ್ಯವನ್ನು ಇಲ್ಲಿ ಸಂಗ್ರಹಿಸಲಾಗುತ್ತಿದ್ದು, ಎರಡು ವಾರಗಳಲ್ಲಿ ಒಣತ್ಯಾಜ್ಯ ಕೇಂದ್ರ ಕಾರ್ಯಾರಂಭ ಮಾಡಲಿದೆ. ಜಿಎಐಎಲ್ ಇಂಡಿಯಾ ಮತ್ತು ಐಎಂಸಿಎಲ್ ಸಿಎಆರ್ ಆಧಾರದಲ್ಲಿ ಈ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದೆ ಎಂದು ಶೇಖರ್ ತಿಳಿಸಿದರು.
Advertisement