ಬೆಂಗಳೂರು: ಪತಿಯ ಸ್ನೇಹಿತನನ್ನು ಪ್ರೀತಿಸುತ್ತಿದ್ದ ಪತ್ನಿ, ತನ್ನ ಪ್ರೀತಿಗೆ ಅಡ್ಡವಾಗಿದ್ದ ಪತಿಯನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದು, ಆ ಸುಪಾರಿ ವಿಫಲವಾಗಿ ಗಂಡ ಬದುಕುಳಿದಿದ್ದಾರೆ. ಆದರೆ ಬಂಧನ ಭೀತಿಯಿಂದ ಆಕೆಯ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಾರು ಚಾಲಕನಾಗಿ ಕೆಲಸ ಮಾಡುತ್ತಿ ದೊಡ್ಡಬಿದರಕಲ್ಲು ನಿವಾಸಿ ನವೀನ್ ಕುಮಾರ್ ಹಾಗೂ ಪಲ್ಲವಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಪಲ್ಲವಿ ಹಿಮವಂತ್ ಕುಮಾರ್ ಎಂಬುವವನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು.
ತನ್ನ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆಗೆ ಪ್ರಿಯಕರನ ಜತೆ ಸೇರಿ ಪಲ್ಲವಿ ಸಂಚು ರೂಪಿಸಿದ್ದರು. ಅಲ್ಲದೆ 1 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದರು. ಸುಪಾರಿ ಪಡೆದ ಹಂತಕರು ಹತ್ಯೆ ಮಾಡುವ ಧೈರ್ಯ ಮಾಡದೇ ನವೀನ್ ಬಟ್ಟೆ ಮೇಲೆ ಟೊಮೊಟಾ ಸಾಸ್ ಹಾಕಿ ಹತ್ಯೆಯಾಗಿದೆ ಎಂದು ಹಿಮವಂತ್ ಗೆ ವಿಡಿಯೋ ಕಾಲ್ ಮಾಡಿ ನಂಬಿಸಿದ್ದರು. ವಿಡಿಯೋ ಕಾಲ್ ಸಾಕ್ಷ್ಯ ಇರುವುದರಿಂದ ಪೊಲೀಸರು ತನ್ನನ್ನು ಬಂಧಿಸಬಹುದು ಎಂಬ ಭೀತಿಯಿಂದ ಹಿಮವಂತ್ ಆತ್ಮಹತ್ಯೆ ಮಾಡಿದ್ದಾರೆ.
ಬದುಕುಳಿದ ಪತಿ ನವೀನ್ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಕೊನೆಗೆ ಪಲ್ಲವಿ ಇತ್ತ ಪ್ರಿಯಕರನೂ ಇಲ್ಲ ಪತಿಯೂ ಇಲ್ಲದೆ ತನಗೆ ಸಾಥ್ ನೀಡಿ ತಾಯಿ ಹಾಗೂ ಸುಪಾರಿ ಹಂತಕರ ಜೊತೆ ಪರಪ್ಪನ ಅಗ್ರಹಾರ ಸೇರಿದ್ದಾಳೆ.
ಪಲ್ಲವಿ ತನ್ನ ಪತಿಯನ್ನು ಕೊಲೆ ಮಾಡಲು ಪ್ರಿಯಕರನೊಂದಿಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನವೀನ್ ಕೊಲೆಗೆ ಹರೀಶ್ ಹಾಗೂ ನಾಗರಾಜು ಎಂಬುವವರು ಸುಪಾರಿ ಪಡೆದು, ಜುಲೈ 23ರಂದು ನವೀನ್ನನ್ನು ಅಪಹರಿಸಿ ಚೆನ್ನೈನ ಲಾಡ್ಜ್ವೊಂದರಲ್ಲಿ ಕೂಡಿಹಾಕಿದ್ದರು. ಈ ಕೃತ್ಯಕ್ಕೆ ಮುಗಿಲನ್ ಸಹಕರಿಸಿದ್ದ. ಆರೋಪಿಗಳು ಎಣ್ಣೆ ಪಾರ್ಟಿ ಮಾಡುವಾಗ ನವೀನ್ ಕೂಡ ಜತೆಯಾಗಿದ್ದು, ಅವರಿಗೆ ಸ್ನೇಹಿತನಾಗಿಬಿಟ್ಟಿದ್ದ. ಹೀಗಾಗಿ ನವೀನ್ ಕೊಲ್ಲುವ ನಿರ್ಧಾರದಿಂದ ಆರೋಪಿಗಳು ಹಿಂದೆ ಸರಿದು ಸುಪಾರಿ ವಿಚಾರ ತಿಳಿಸಿದ್ದರು.
ಆದರೆ, ಸುಪಾರಿಗೆ ಒಪ್ಪಿಕೊಂಡಿರುವ 1 ಲಕ್ಷ ರೂ. ಹಣ ಪಡೆದುಕೊಳ್ಳುತ್ತೇವೆ. ಹೀಗಾಗಿ ನೀನು ಸತ್ತವನಂತೆ ನಟನೆ ಮಾಡು. ನಾವು ಹಿಮವಂತ್ಗೆ ವಿಡಿಯೋ ಕರೆ ಮಾಡಿ ನಂಬಿಸುತ್ತೇವೆ ಎಂದು ತಿಳಿಸಿದ್ದರು. ಇದಕ್ಕೆ ನವೀನ್ ಒಪ್ಪಿಕೊಂಡಿದ್ದರು. ''ಲಾಡ್ಜ್ನಲ್ಲಿ ನವೀನ್ನನ್ನು ಮಲಗಿಸಿ ಆತನ ಮುಖ ಎದೆಭಾಗ, ತಲೆಯ ತುಂಬಾ ಟೊಮ್ಯಾಟೋ ಸಾಸ್ ಸುರಿದಿದ್ದರು. ಬಳಿಕ ಹಿಮಂತ್ಗೆ ವಿಡಿಯೋ ಕಾಲ್ ಮಾಡಿ, ನವೀನ್ ಕೊಲೆ ಮಾಡಿದ್ದೇವೆ ಎಂದು ಹೇಳಿದ್ದರು'' ಎಂದು ಪೊಲೀಸರು ತಿಳಿಸಿದ್ದಾರೆ.
Advertisement