ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜು: ಬೆಂಗಳೂರಿನಲ್ಲಿ ನಾಳೆ ಹೂಡಿಕೆದಾರರ ಸಮಾವೇಶ

ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನಲ್ಲಿ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಕಲ್ಲಿದ್ದಲು ಸಚಿವಾಲಯ ನಾಳೆ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿದೆ.
ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
Updated on

ಬೆಂಗಳೂರು: ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನಲ್ಲಿ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಕಲ್ಲಿದ್ದಲು ಸಚಿವಾಲಯ ನಾಳೆ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿದೆ.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕಲ್ಲಿದ್ದಲು ಸಚಿವಾಲಯ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ, ಕೇಂದ್ರ ಗಣಿ ಸಚಿವಾಲಯದ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ಹೂಡಿಕೆದಾರರ ಸಮಾವೇಶ  ನಡೆಸಲು ಕೇಂದ್ರ ಕಲ್ಲಿದ್ದಲು ಸಚಿವಾಲಯ ಯೋಜಿಸಿದ್ದು, ಇಂದೋರ್ ಮತ್ತು ಮುಂಬೈನಲ್ಲಿ ಇಂತಹ ಸಮಾವೇಶಗಳನ್ನು ಯಶಸ್ವಿಯಾಗಿ ಈಗಾಗಲೇ ನಡೆಸಿದೆ.  ಇದು ಪ್ರಸ್ತುತ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜಿನ ಬಗ್ಗೆ ಗಣಿ ವಲಯದಲ್ಲಿ ಉತ್ಸಾಹವನ್ನುಂಟು ಮಾಡುವ ಹಾಗೂ ನಿರೀಕ್ಷಿತ ಬಿಡ್ಡರ್ ಗಳಿಂದ ಉತ್ತಮ ರೀತಿಯ ಭಾಗವಹಿಸುವಿಕೆಯ ಸ್ಪಂದನಕ್ಕೆ ಕಾರಣವಾಗಿದೆ.  

ಸಚಿವಾಲಯ 6ನೇ ಸುತ್ತಿನ ವಾಣಿಜ್ಯ ಹರಾಜಿನಡಿ 133 ಕಲ್ಲಿದ್ದಲು ಗಣಿಗಳನ್ನು ಹಾಗೂ 5ನೇ ಹಂತದ ವಾಣಿಜ್ಯ ಹರಾಜಿನ 2ನೇ ಪ್ರಯತ್ನದಡಿ 8 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಕಲ್ಲಿದ್ದಲು ಗಣಿಗಳು ಮುಖ್ಯವಾಗಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್ ಗಢ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಪರಿಧಿಗೆ ಸೇರಿವೆ.

ಕಲ್ಲಿದ್ದಲು ಬಳಕೆಯಲ್ಲಿ ಸಂಪೂರ್ಣ ನಮ್ಯತೆ, ಆಪ್ಟಿಮೈಸ್ಡ್ ಪಾವತಿ ರಚನೆಗಳು, ಆರಂಭಿಕ ಉತ್ಪಾದನೆ ಮತ್ತು ಶುದ್ಧ ಕಲಿದ್ದಲು ತಂತ್ರಜ್ಞಾನದ ಬಳಕೆಗೆ ಪ್ರೋತ್ಸಾಹ ಇತ್ಯಾದಿಗಳು ಹರಾಜು ಪ್ರಕ್ರಿಯೆಯ ಪ್ರಮುಖ ಲಕ್ಷಣಗಳಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com