ಬೆಂಗಳೂರು: ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನುಷ್ಠಾನದ ನಂತರ ಮೊದಲ ಬ್ಯಾಚಿನ ಫಲಿತಾಂಶ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಪದವೀಧರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂದು ಅಖಿಲ ಭಾರತ ಪ್ರಜಾಸತಾತ್ಮಕ ವಿದ್ಯಾರ್ಥಿಗಳ ಒಕ್ಕೂಟ ಒತ್ತಾಯಿಸಿತು.
ಈ ಮಧ್ಯೆ ಮೊದಲ ಬ್ಯಾಚಿನ ಎನ್ ಇಪಿ ವಿದ್ಯಾರ್ಥಿಗಳು ಈಗಾಗಲೇ ದ್ವಿತೀಯ ವರ್ಷ ಆರಂಭಿಸಿದ್ದರೂ ಇನ್ನೂ ಫಲಿತಾಂಶ ಪಡೆದಿಲ್ಲ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸುವ್ಯವಸ್ಥಿತಗೊಳಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದ್ದರೂ, ಪೋರ್ಟಲ್ನಿಂದ ಸಮಸ್ಯೆಗಳು ಉಂಟಾಗಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಸರ್ವರ್ ಸಮಸ್ಯೆಯಿಂದಾಗಿ ಪೋರ್ಟಲ್ ನಲ್ಲಿ ಲಾಗಿಂಗ್ ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಮತ್ತು ಅನುದಾನಿತ ಕಾಲೇಜ್ ಗಳಿಂದಲೂ ಫಲಿತಾಂಶ ಪ್ರಕಟಿಸುತ್ತಿಲ್ಲ ಎಂದು ಎಐಡಿಎಸ್ ಒ ಸಂಘಟನೆಯ ಬೆಂಗಳೂರು ನಗರ ಸಂಚಾಲಕಿ ಅಪೂರ್ವ ಹೇಳಿದರು.
ಈ ಮಧ್ಯೆ ಕರ್ನಾಟಕ ಲರ್ನಿಂಗ್ ಸಿಸ್ಟಮ್ , ಯುಯುಸಿಎಂಎಸ್ ಸೇರಿದಂತೆ ಅನೇಕ ದೋಷಗಳನ್ನು ಸರಿಪಡಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಒತ್ತಾಯಿಸಿದೆ.
Advertisement