ಬೆಂಗಳೂರು: ಈಗ ಡಿಸೆಂಬರ್ ಅಂತ್ಯ, ವಿಪರೀತ ಚಳಿಯಿದೆ. ಅದರ ಜೊತಗೆ ಮಾಂಡೌಸ್ ಚಂಡಮಾರುತದಿಂದ ಕಳೆದ ಐದು ದಿನಗಳಿಂದ ರಾಜಧಾನಿಯಲ್ಲಿ ಮಳೆಯಾಗುತ್ತಿದೆ. ಚಳಿಯ ಜೊತೆ ಮಳೆಯಿಂದಾಗಿ ಬೆಂಗಳೂರಿಗರು ಗಡಗಡವಾಗಿ ನಡುಗುತ್ತಿದ್ದಾರೆ.
ಈ ಹವಾಮಾನದಲ್ಲಿ ಆರೋಗ್ಯದ ಕಡೆ ವಿಶೇಷವಾಗಿ ಮಕ್ಕಳ ಆರೋಗ್ಯ ಬಗ್ಗೆ ತೀವ್ರ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ತಜ್ಞರು, ವೈದ್ಯರು ಹೇಳುತ್ತಿದ್ದಾರೆ. ಮಾಂಡೌಸ್ ಸೈಕ್ಲೋನ್ ಡೇಂಜರ್ ಆಗಿದೆ. ಎಲ್ಲಾ ವರ್ಷಗಳಂತಲ್ಲ ಈ ಬಾರಿಯ ಚಳಿಗಾಲ ಕಿರಿಯ ಮಕ್ಕಳು, ಹಿರಿಯ ನಾಗರಿಕರಿಗೆ ಅಪಾಯವಾಗಿದೆ. ನಾನಾ ರೋಗ ಮಕ್ಕಳು, ವೃದ್ಧರನ್ನ ವ್ಯಾಪಕವಾಗಿ ಕಾಡುವ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.
ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಜನರು ಏನು ಮಾಡಬಾರದು, ಏನು ಮಾಡಬೇಕು ಎಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಿ, ಶೀತ, ನೆಗಡಿ, ಜ್ವರ ಬರದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ಚಳಿ ಹೆಚ್ಚಾದಾಗ ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕು. ರಕ್ತದೊತ್ತಡ ಮತ್ತು ಪ್ರೊಟೀನ್ ಪ್ರಮಾಣ ಹೆಚ್ಚಾಗಿ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಹೃದಯಾಘಾತದಂತಹ ಸಮಸ್ಯೆಗಳು ಕಂಡುಬರುತ್ತವೆ. ರೋಗನಿರೋಧಕ ಶಕ್ತಿ ಕಡಿಮೆಯಿರುವ 60 ವರ್ಷಕ್ಕೆ ಮೇಲ್ಪಟ್ಟವರು ಹಾಗೂ 6 ವರ್ಷಕ್ಕಿಂತ ಚಿಕ್ಕ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎನ್ನುತ್ತಾರೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ ಸಿ ಎನ್ ಮಂಜುನಾಥ್.
ಹೊರಗಿನ ತಿಂಡಿ-ತಿನಿಸು ಬೇಡ: ಹೊರಗಿನ ತಿಂಡಿ-ತಿನಿಸು, ಎಣ್ಣೆ ಪದಾರ್ಥ, ಮಾಂಸಹಾರ ಸೇವನೆ ಹೆಚ್ಚು ಬೇಡ, ರೋಗನಿರೋಧಕ ಶಕ್ತಿ ಹೆಚ್ಚಿಸುವ ತರಕಾರಿಗಳು, ಸೊಪ್ಪು ತರಕಾರಿ, ಹಣ್ಣು, ಕಾಳಿನ ಪದಾರ್ಥಗಳನ್ನು ಹೆಚ್ಚು ಸೇವಿಸಿ. ಆದಷ್ಟು ಬಿಸಿ ನೀರು ಸೇವಿಸಿ, ಇಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ ಎನ್ನುತ್ತಾರೆ ವೈದ್ಯರು.
ಚಳಿಗಾಲಕ್ಕೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ, ಅದರಲ್ಲೇನಿದೆ?:
ಆರೋಗ್ಯ ಸಮಸ್ಯೆ ಇದ್ದವರಿಗೆ ಮೆಡಿಕಲ್ ಸಲಹೆ.
ಕಡ್ಡಾಯವಾಗಿ ಬಿಸಿ ನೀರಿನ ಸೇವನೆ ಮಾಡಿ.
ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ ಮಾಡಿ.
ತಾಜಾ-ತಾಜಾ ಆಹಾರ ಪದಾರ್ಥ ಸೇವನೆ ಮಾಡಿ.
ಸ್ವೆಟರ್, ಸಾಕ್ಸ್, ಕೈ ಗ್ಲೌಸ್ ಬೆಚ್ಚಗಿನ ಧಿರಿಸುಗಳನ್ನು ಧರಿಸಿ.
ಮನೆಯ ಒಳಗೂ ಮೈ ಬೆಚ್ಚಗಿರುವ ಬಟ್ಟೆಗನ್ನು ಧರಿಸಿ.
ಸ್ನಾನಕ್ಕೆ ಬಿಸಿ ನೀರು/ ಬೆಚ್ಚಗಿನ ನೀರನ್ನು ಉಪಯೋಗಿಸಿ.
ಅನಗತ್ಯವಾಗಿ ಹೊರಗಿನ ಸಂಚಾರವನ್ನು ತಪ್ಪಿಸಿ.
ಹತ್ತಿಯಿಂದ ಕಿವಿ ಮುಚ್ಚಿಕೊಳ್ಳಿ, ಸ್ಕಾರ್ಫ್ ಬಳಸಿ, ಮಾಸ್ಕ್ ಬಳಸಿ.
ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣ ಇದ್ದವರಿಂದ ದೂರವಿರಿ.
ಮೊಣಕೈ ಒಳಗೆ ಸೀನುವುದು, ಕೆಮ್ಮುವುದು ಮಾಡಿ.
ಸೀನುವಾಗ, ಕೆಮ್ಮುವಾಗ ಟಿಶ್ಯೂ ಅಥವಾ ಕರವಸ್ತ್ರ ಬಳಸಿ.
ಕೈಗಳನ್ನು ಆಗಾಗ್ಗೆ ನೀರು ಹಾಗೂ ಸೋಪಿನಿಂದ ತೊಳೆಯಬೇಕು.
ಜ್ವರ ಅಥವಾ ಇತರೆ ರೋಗದ ಲಕ್ಷಣ ಇದ್ದರೆ ಡಾಕ್ಟರ್ ಸಲಹೆ ಪಡೆಯಿರಿ.
ತಂಪು ಪಾನೀಯ, ಐಸ್ ಕ್ರೀಂ ಸೇವನೆ ಕಡಿಮೆ ಮಾಡಿ.
ರೆಫ್ರಿಜರೇಟರ್ ಒಳಗಿರುವ ಅಥವಾ ತಣ್ಣಗಿನ ನೀರು ಕುಡಿಯಬೇಡಿ.
ತಣ್ಣನೆಯ ಶೀತ ಗಾಳಿಗೆ ಮೈ ಒಡ್ಡುವುದನ್ನು ತಪ್ಪಿಸಬೇಕು.
ಹೊರಾಂಗಣ ಪ್ರವಾಸಗಳನ್ನು ಆದಷ್ಟು ನಿರ್ಬಂಧಿಸಿ.
ವೀಕೆಂಡ್ ಪ್ರವಾಸ ಹೋದಾಗ ಮುನ್ನೆಚ್ಚರಿಕೆ ವಹಿಸಿ.
ಮಸಾಲೆ ಪದಾರ್ಥ, ಜಂಕ್ ಫುಡ್ ಸೇವನೆ ಅವೈಡ್ ಮಾಡಿ.
Advertisement