ಬೆಂಗಳೂರು: ಕೆಎಸ್ಆರ್'ಟಿಸಿ ಸೇವೆಯನ್ನು ಅಗತ್ಯ ಸೇವೆ ನಿರ್ವಹಣಾ ಕಾಯ್ದೆ (ಎಸ್ಮಾ) ಅಡಿ ತರಲು ರಾಜ್ಯ ಸರ್ಕಾರ ಅಧಿಕೃತ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ನಡೆಸಲು ಮುಂದಾಗಿದ್ದ ಸಿಬ್ಬಂದಿಗಳಿಗೆ ಭಾರೀ ಹಿನ್ನಡೆಯುಂಟಾದಂತಾಗಿದೆ.
ಸಕ್ತಾಕಜ ಅಧಿಸೂಚನೆಯ ಪ್ರಕಾರ ಜನವರಿ 1, 2023 ರಿಂದ ಜುಲೈ 31, 2023 ರವರೆಗೆ ಕೆಎಸ್ಆರ್'ಟಿಸಿ ಎಸ್ಮಾ ಅಡಿಯಲ್ಲಿರಲಿದೆ.
ಖಾಯಂ ಆಧಾರದ ಮೇಲೆ ಅಥವಾ ಗುತ್ತಿಗೆ, ತಾತ್ಕಾಲಿಕ, ಹೊರಗುತ್ತಿಗೆ ಆಧಾರದ ಮೇಲೆ ಬಂದಿರುವ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ನಿರಾಕರಿಸಿದರೆ ಅದು, ಸಾರ್ವಜನಿಕ ಉಪಯುಕ್ತ ಸೇವೆಗಳ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಸಿಬ್ಬಂದಿಗಳ ಮುಷ್ಕರ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುವಂತಾಗುತ್ತದೆ ಎಂದು ಸೂಚನೆಯಲ್ಲಿ ಸರ್ಕಾರ ತಿಳಿಸಿದೆ.
ಮುಷ್ಕರಗಳಿಂದ ಸಾರ್ವಜನಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಮೇಲೆ ಎಸ್ಮಾ ಜಾರಿ ಮಾಡುವಂತೆ ಕೆಎಸ್ಆರ್'ಟಿಸಿ'ಗೆ ಸರ್ಕಾರ ಸೂಚನೆ ನೀಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಕೆಎಸ್ಆರ್ಟಿಸಿ ತನ್ನ ಎಲ್ಲಾ ವಿಭಾಗಗಳು, ಕಾರ್ಯಾಗಾರಗಳು, ಕಚೇರಿಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಸರ್ಕಾರದ ಅಧಿಸೂಚನೆಯ ಪ್ರತಿಯನ್ನು ಹಾಕಬೇಕು ಮತ್ತು ಅಧಿಸೂಚನೆ ಬಗ್ಗೆ ನೌಕರರು ಮತ್ತು ಸಾರಿಗೆ ಸಂಘಟನೆಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದೆ ಎಂದು ತಿಳಿದುಬಂದಿದೆ.
ಸರ್ಕಾರದ ಅಧಿಸೂಚನೆ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ಆರ್ ಅವರು, ಈ ಆದೇಶವು ಸಾರಿಗೆ ನಿಗಮಕ್ಕೆ ಯಾವುದೇ ಸೂಚನೆ ನೀಡದೆ ನೌಕರರು ಯಾವುದೇ ದಿಢೀರ್ ಮುಷ್ಕರದಲ್ಲಿ ತೊಡಗುವುದನ್ನು ನಿಷೇಧಿಸುತ್ತದೆ. ಆದರೆ ನಿಯಮಾನುಸಾರ ಕಾರ್ಮಿಕ ಸಂಘಟನೆಗಳು ನಡೆಸುವ ಮುಷ್ಕರಗಳನ್ನು ನಿಷೇಧಿಸುವುದಿಲ್ಲ ಎಂದಿದ್ದಾರೆ.
6ನೇ ವೇತನ ಆಯೋಗದ ಅನ್ವಯ ಸಾರಿಗೆ ನಿಗಮಕ್ಕೆ ವೇತನ ಹೆಚ್ಚಳ, ವಜಾಗೊಂಡಿರುವ ನೌಕರರ ಮರುಸೇರ್ಪಡೆ, ನೌಕರರ ವಿರುದ್ಧದ ಪೊಲೀಸ್ ದೂರು ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಎಸ್ಆರ್ಟಿಸಿ ನೌಕರರ ಸಂಘವು ಪ್ರತಿಭಟನೆ ನಡೆಸುತ್ತಿದೆ.
Advertisement