ಬೆಳಗಾವಿಯಲ್ಲಿ ವರುಣನ ಆರ್ಭಟ: ಹೆದ್ದಾರಿ ಜಲಾವೃತ, ಮನೆಗಳಿಗೆ ನುಗ್ಗಿದ ನೀರು!
ಬೆಳಗಾವಿ: ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗುರುವಾರವೂ ಭಾರೀ ಮಳೆ ಮುಂದುವರಿದಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಪಾರ ಪ್ರಮಾಣದ ಬೆಳೆ ಆಸ್ತಿ, ಪಾಸ್ತಿ ನಷ್ಟ ಉಂಟಾಗಿದೆ.
ಖಾನಾಪುರದಿಂದ ಹೇಮಡ್ಗಾ ಮೂಲಕ ಗೋವಾಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಒಂದು ಭಾಗವು ತುಂಬಿ ಹರಿಯುತ್ತಿರುವ ಅಲತ್ರಾ ಕೆರೆಯಲ್ಲಿ ಮುಳುಗಡೆಯಾಗಿದ್ದು, ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಬೆಳಗಾವಿ ನಗರದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಖಾನಾಪುರ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗ್ಗೆಯಿಂದ ಮಳೆಯ ಆರ್ಭಟ ಜೋರಾಗಿದ್ದು, ಹೇಮಡ್ಗಾ ರಸ್ತೆ 4 ಅಡಿ ಆಳದ ನೀರಿನಲ್ಲಿ ಮುಳುಗಿದೆ.
ಮುಳುಗಡೆಯಾದ ರಸ್ತೆಯ ಎರಡೂ ಬದಿಗಳಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಬಂದ್ ಮಾಡಿದರು. ಅನ್ನಪೂರ್ಣೇಶ್ವರಿ ನಗರ ಮತ್ತು ಕೇಶವ ನಗರದಲ್ಲಿ ಕನಿಷ್ಠ 10 ಮನೆಗಳಿಗೆ ನೀರು ನುಗ್ಗಿದೆ.
ಅವ್ಯವಸ್ಥಿತ ಯುಜಿಡಿ ಪೈಪ್ಲೈನ್ ಹಾಗೂ ನಾಲೆಗಳು ತುಂಬಿ ಹರಿಯುತ್ತಿರುವ ನೀರನ್ನು ಬೇರೆಡೆಗೆ ಹರಿಸುವ ಸೌಲಭ್ಯ ಇಲ್ಲದ ಕಾರಣ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುತ್ತಿದೆ.
ರಸ್ತೆ ಬದಿಯಲ್ಲಿ ಪೇವರ್ಗಳನ್ನು ಅಳವಡಿಸಿದ್ದರಿಂದ ಹಲವು ರಸ್ತೆಗಳು ಜಲಾವೃತಗೊಂಡಿವೆ. ಹೊಸ ಯುಜಿಡಿ ಮಾರ್ಗದ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದ್ದರೂ, ಸರ್ಕಾರ ಅದನ್ನು ಅನುಷ್ಠಾನಕ್ಕೆ ತಂದಿಲ್ಲ ಎಂದು 50ನೇ ವಾರ್ಡ್ ಕಾರ್ಪೋರೇಟರ್ ಸಾರಿಕಾ ಪಾಟೀಲ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ