ಬೆಂಗಳೂರು: ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನವನ್ನು ಬಳಸಿಕೊಂಡು ರೈತರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಬಗ್ಗೆ ಚಿಂತನೆ ನಡೆಸುವಂತೆ ಬೊಮ್ಮಾಯಿ ಅವರಿಗೆ ನಿಯೋಗ ಮನವಿ ಮಾಡಿದೆ.
ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಜಾರಿಗೊಳಿಸುವ ತುರ್ತು ಅಗತ್ಯವಿದೆ. ಡಾ.ಸ್ವಾಮಿನಾಥನ್ ಸಮಿತಿ ಶಿಫಾರಸ್ಸು ಮಾಡಿರುವ ಎಂಎಸ್ಪಿ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಬೇಕಿದೆ. ನ್ಯಾಯಯುತವಾಗಿ ಕಬ್ಬಿನ ಖರೀದಿ ಬೆಲೆಯನ್ನು ಸರಕಾರ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರವು ಮಳೆ ಹಾನಿ ಮೌಲ್ಯಮಾಪನದ ಮಾನದಂಡ ಮತ್ತು ಬೆಳೆ ನಷ್ಟವನ್ನು ಅಂದಾಜು ಮಾಡುವ ಮಾನದಂಡವನ್ನು ಬದಲಾಯಿಸದಿದ್ದರೆ ರೈತರಿಗೆ ನ್ಯಾಯ ಸಿಗುವುದಿಲ್ಲ ಎಂದರು. ಸಿಎಂ ಮತ್ತು ಸಚಿವರು ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೆ ಸಾಕಾಗುವುದಿಲ್ಲ. ರೈತರ ಸಂಕಷ್ಟಗಳನ್ನು ನಿವಾರಿಸಬೇಕು ಎಂದು ಹೇಳಿದರು.
ಕೃಷಿ ಉತ್ಪನ್ನಗಳ ಮೇಲೆ ಜಿಎಸ್ಟಿ ವಿಧಿಸುತ್ತಿರುವುದು ಅನ್ಯಾಯ. ಜೂಜು, ಬೆಟ್ಟಿಂಗ್, ಕ್ಯಾಸಿನೊಗಳಿಗೆ ವಿನಾಯಿತಿ ನೀಡುವಾಗ ಬಡ ರೈತರು ಬೆಳೆಯು ಕೃಷಿ ಉತ್ಪನ್ನಗಳು, ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸುವುದು ಸಮರ್ಥನೀಯವಲ್ಲ ಎಂದಿದ್ದಾರೆ.
Advertisement