ಹುಬ್ಬಳ್ಳಿ: ಕಿರಿದಾದ ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಯುವಕನ ದುಸ್ಸಾಹಸ: ಮಧ್ಯದಲ್ಲೇ ತಡೆದು ಹಿಂದಕ್ಕೆ ಕಳಿಸಿದ ಜನ!
ಹುಬ್ಬಳ್ಳಿ: ಕೊಡಸಳ್ಳಿ ಜಲಾಶಯದ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಿರಿದಾದ ತೂಗು ಸೇತುವೆಯ ಮೇಲೆ ಪ್ರವಾಸಿಗರೊಬ್ಬನ ತಮ್ಮ ಕಾರನ್ನು ಚಲಾಯಿಸಿ ದುಸ್ಸಾಹಸ ಮೆರೆದಿದ್ದು ಇದನ್ನು ಕಂಡ ಸ್ಥಳೀಯರು ಆತನನ್ನು ಹಿಂದಕ್ಕೆ ಕಳುಹಿಸಿದ್ದಾರೆ.
ಈ ಘಟನೆಯಿಂದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಶಿವಾಪುರ ಗ್ರಾಮದಲ್ಲಿ ಕಳೆದ ಭಾನುವಾರ ಉದ್ವಿಗ್ನತೆ ಉಂಟಾಗಿತ್ತು. ತೂಗು ಸೇತುವೆ ಮೇಲೆ ಕಾರೊಂದು ಬರುತ್ತಿರುವುದನ್ನು ಕಂಡು ಬೆಚ್ಚಿಬಿದ್ದ ಸ್ಥಳೀಯರು, ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ತಡೆದಿದ್ದಾರೆ. ಸೇತುವೆ ದಾಟಲು ಅವಕಾಶ ಮಾಡಿಕೊಡಬೇಕು ಎಂದು ಚಾಲಕ ಸ್ಥಳೀಯರೊಂದಿಗೆ ವಾಗ್ವಾದ ಆರಂಭಿಸಿದ. ತೀವ್ರ ವಾಗ್ವಾದದ ನಂತರ, ಕಾರು ಚಾಲಕ ಹಿಂದೆ ಸರಿಯಲು ನಿರ್ಧರಿಸಿದ್ದು ತನ್ನ ಕಾರನ್ನು ಹಿಂದಕ್ಕೆ ಚಲಾಯಿಸಿದ್ದಾನೆ.
ಶಿವಾಪುರ ಗ್ರಾಮ ಮತ್ತು ಸುತ್ತಮುತ್ತಲಿನ ಕುಗ್ರಾಮಗಳ ನಿವಾಸಿಗಳು ಜೋಯಿಡಾ ತಾಲೂಕಿಗೆ ತಲುಪಲು ತೂಗು ಸೇತುವೆ ಏಕೈಕ ಸಂಪರ್ಕ ಸಾಧನವಾಗಿದೆ. ಇಲ್ಲದಿದ್ದರೆ, ಅವರು ಅದೇ ಗಮ್ಯಸ್ಥಾನವನ್ನು ತಲುಪಲು ಕಿ.ಲೋ ಮೀಟರ್ ಗಟ್ಟಲೇ ಪ್ರಯಾಣಿಸಬೇಕಾಗುತ್ತದೆ. ಈ ಗ್ರಾಮಗಳ ಹಲವಾರು ಯುವಕರು ಜೋಯಿಡಾ, ದಾಂಡೇಲಿ ಮತ್ತು ಗೋವಾದಲ್ಲಿ ಕೆಲಸ ಮಾಡುತ್ತಿದ್ದು ಆಗಾಗ್ಗೆ ಕಾಲ್ನಡಿಗೆಯಲ್ಲಿ ಅಥವಾ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸೇತುವೆಯನ್ನು ದಾಟುತ್ತಾರೆ. ಈ ಹಿಂದೆ ಸೇತುವೆ ಮೇಲೆ ಆಟೋ ರಿಕ್ಷಾಗಳ ಸಂಚಾರಕ್ಕೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.
ನಿಯಮ ಉಲ್ಲಂಘಿಸಿದ ಕಾರು ಚಾಲಕನ ವಿರುದ್ಧ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸೇತುವೆಯ ಮೇಲೆ ನಾಲ್ಕು ಚಕ್ರದ ವಾಹನಗಳಿಗೆ ಅವಕಾಶವಿಲ್ಲ. ಹೀಗಾಗಿ ಇಲ್ಲಿ ಫಲಕವನ್ನು ಹಾಕಲಾಗಿದೆ. 'ತೂಗು ಸೇತುವೆಯು ಒಂದೇ ಸಮಯದಲ್ಲಿ ಎಲ್ಲಾ ತೂಕವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾರು ಮತ್ತು ಅದರ ಚಾಲಕ ಸೇರಿ 700 ಕೆಜಿಯಷ್ಟು ತೂಗುತ್ತದೆ, ಆದ್ದರಿಂದ, ತೂಗು ಸೇತುವೆಯ ಮೇಲೆ ಪ್ರಯಾಣಿಸುವುದು ಸುರಕ್ಷಿತವಲ್ಲ ಎಂದು ಸ್ಥಳೀಯರೊಬ್ಬರು ಹೇಳಿದರು.
ಇನ್ನು ಗ್ರಾಮಸ್ಥರು ವಾಹನ ನೋಂದಣಿ ಸಂಖ್ಯೆ(MH 09 AB 3853)ಯನ್ನು ಸ್ಥಳೀಯ ಅಧಿಕಾರಿಗಳಿಗೆ ರವಾನಿಸಿದ್ದು ಚಾಲಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮೊರ್ಬಿಯಲ್ಲಿ ನೇತಾಡುವ ಸೇತುವೆ ಕುಸಿದು ಕನಿಷ್ಠ 141 ಜನರು ಬಲಿಯಾಗಿದ್ದರು. ಈ ದುರಂತ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
2015ರಲ್ಲಿ ಸೇತುವೆಯನ್ನುನಿರ್ಮಿಸಲಾಗಿದ್ದು ಅಂದಿನಿಂದ ಇದನ್ನು ಜೋಯಿಡಾ ಮತ್ತು ಯಲ್ಲಾಪುರ ತಾಲೂಕಿನ ಸ್ಥಳೀಯರು ಬಳಸುತ್ತಾರೆ. ಎರಡೂ ಕಡೆಯಿಂದ ಸೇತುವೆಯನ್ನು ದಾಟಿ, ಲಭ್ಯವಿರುವ ಜೀಪ್ಗಳನ್ನು ಬಳಸಿಕೊಂಡು ಇತರ ಸ್ಥಳಗಳಿಗೆ ತಲುಪುವ ಜನರಿದ್ದಾರೆ. ಸ್ಥಳೀಯರಲ್ಲದೆ, ಪ್ರಸಿದ್ಧ ಸಾಥೋಡಿ ಜಲಪಾತವನ್ನು ವೀಕ್ಷಿಸಲು ಬರುವ ಪ್ರವಾಸಿಗರೂ ಸೇತುವೆಗೆ ಭೇಟಿ ನೀಡುತ್ತಾರೆ ಎಂದು ಸ್ಥಳೀಯರು ಹೇಳಿದರು.