ಬೆಳಗಾವಿ: ಕಾಲು ನೋವಿಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿದರೂ ಎಲ್ಲಿಯೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕಾಲನ್ನೇ ತುಂಡರಿಸಿಕೊಂಡಿದ್ದ ಬೆಳಗಾವಿ ಮೂಲದ ಯುವಕ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾನೆ.
ಮೃತ ಯುವಕನನ್ನು ರಾಜು ಫಕೀರಪ್ಪ ಯರಗುದ್ದಿ (24) ಎಂದು ಗುರ್ತಿಸಲಾಗಿದೆ. ಹಲವು ದಿನಗಳಿಂದ ರಾಜು ಅವರು ಕಾಲು ನೋವಿನಿಂದ ಬಳಲುತ್ತಿದ್ದರು. ಹಲವು ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆದುಕೊಂಡರೂ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ನೊಂದ ರಾಜು ಅವರು, ಶಾಶ್ವತ ಪರಿಹಾರ ಸಿಗಬಹುದು ಎಂದು ಭಾವಿಸಿ ನ.3 ರಂದು ಮನೆಯಲ್ಲಿ ಒಬ್ಬರೇ ಇದ್ದಾಗ ಕುಡುಗೋಲಿನಿಂದ ನೋವಿದ್ದ ಕಾಲನ್ನು ತುಂಡರಿಸಿದ್ದರು.
ಕಾಲು ಕತ್ತರಿಸಿಕೊಂಡ ಕೂಡಲೇ ರಾಜು ಕಿರುಚಾಡಿದ್ದಾರೆ. ಇದನ್ನು ಕೇಳಿದ ಸುತ್ತಮುತ್ತಲಿನ ಜನರು ಮನೆಯೊಳಗೆ ಓಡಿ ಬಂದು ನೋಡಿ ತುಂಡರಿಸಿದ್ದ ಕಾಲಿನ ಜೊತೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾಜು ಶನಿವಾರ ಕೊನೆಯುಸಿರೆಳೆದಿದ್ದಾರೆ.
Advertisement