40 ವರ್ಷ ಹಳೆಯ ಡಂಪ್ ಯಾರ್ಡ್ ಅನ್ನು ಉದ್ಯಾನವನ್ನಾಗಿ ಮಾಡಲು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಮುಂದು
ಮಡಿಕೇರಿ: ಕಳೆದ ವರ್ಷ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ತನ್ನ ವಿಶಿಷ್ಟ ಮತ್ತು ವೈಜ್ಞಾನಿಕ ಉಪಕ್ರಮಗಳಿಂದ ಜನಮನದಲ್ಲಿ ಉಳಿಯುತ್ತಿದೆ. ಕಸ ಹಾಕುವುದು ಮತ್ತು ಅವೈಜ್ಞಾನಿಕವಾಗಿ ಕಸ ಸುರಿಯುವುದರ ವಿರುದ್ಧದ ಹೋರಾಟದ ಭಾಗವಾಗಿ ಹಳೆಯ ಡಂಪಿಂಗ್ ಯಾರ್ಡ್ ಈಗ ಸಾರ್ವಜನಿಕ ಉದ್ಯಾನವಾಗಿ ಪರಿವರ್ತನೆಯಾಗುತ್ತಿದೆ.
ಮಡಿಕೇರಿ ಜಿಲ್ಲಾ ಆಡಳಿತ ಕೇಂದ್ರದಲ್ಲಿ ಸರಿಯಾದ ತ್ಯಾಜ್ಯ ನಿರ್ವಹಣಾ ಸೌಲಭ್ಯ ಇಲ್ಲದಿರುವುದರಿಂದ ಕೊಡಗಿನಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಕಷ್ಟದ ಕೆಲಸವಾಗಿದೆ. ಆದರೆ, ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಪೈಕಿ ಪೊನ್ನಂಪೇಟೆ ಪಂಚಾಯಿತಿಯೂ ಒಂದಾಗಿದೆ.
ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 40 ಸೆಂಟ್ಸ್ನ 40 ವರ್ಷ ಹಳೆಯದಾದ ಡಂಪ್ ಯಾರ್ಡ್ ಶೀಘ್ರದಲ್ಲೇ ಉದ್ಯಾನವಾಗಿ ರೂಪುಗೊಳ್ಳಲಿದ್ದು, ಅದಕ್ಕಾಗಿ ಕೆಲಸ ನಡೆಯುತ್ತಿದೆ.
2019 ರಲ್ಲಿ ಪಂಚಾಯತಿಯು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ಜಾರಿಗೆ ತಂದಿತು. ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಪ್ರತ್ಯೇಕಿಸಿ ಮರುಬಳಕೆ ಮಾಡಬಹುದಾದ ಅಥವಾ ಅಪ್ಸೈಕ್ಲಿಂಗ್ ಮಾಡಬಹುದಾದ ತ್ಯಾಜ್ಯವನ್ನು ಮೈಸೂರಿನ ಖಾಸಗಿ ಕಂಪನಿಗೆ ಮಾರಾಟ ಮಾಡಲಾಗುತ್ತದೆ.
'ಮೌಲ್ಯದ ತ್ಯಾಜ್ಯವನ್ನು ಖಾಸಗಿ ಕಂಪನಿಗೆ ಮಾರಾಟ ಮಾಡುವ ಮೂಲಕ ಪಂಚಾಯಿತಿಗೆ ಈವರೆಗೆ 70 ಸಾವಿರ ರೂ.ಗೂ ಅಧಿಕ ಆದಾಯ ಬಂದಿದೆ’ ಎಂದು ಪಂಚಾಯಿತಿ ಪಿಡಿಒ ಪುಟ್ಟರಾಜು ಆರ್ಜೆ ಹೇಳುತ್ತಾರೆ. ಇದಲ್ಲದೆ, ಉಳಿದ ಅಪಾಯಕಾರಿ ಮತ್ತು ತಿರಸ್ಕರಿಸಿದ ತ್ಯಾಜ್ಯವನ್ನು ಬೆಳಗಾವಿಯ ಸಿಮೆಂಟ್ ಕಾರ್ಖಾನೆಗೆ ಸಾಗಿಸಲಾಗುತ್ತಿದೆ ಮತ್ತು ಪಂಚಾಯಿತಿಯಿಂದ ಯಾವುದೇ ತ್ಯಾಜ್ಯವು ನೆಲವನ್ನು ಸೇರುತ್ತಿಲ್ಲ.
ಈ ಬೆಳವಣಿಗೆಗಳನ್ನು ಅನುಸರಿಸಿ, ಸರಿಯಾಗಿ ನಿರ್ವಹಣೆಯಿಲ್ಲದ ತ್ಯಾಜ್ಯದಿಂದಾಗಿ ಗಬ್ಬು ನಾರುತ್ತಿದ್ದ 40 ವರ್ಷಗಳಷ್ಟು ಹಳೆಯದಾದ ಭೂಮಿ ಇದೀಗ ಈಗ ಉದ್ಯಾನವಾಗಿ ಅರಳುತ್ತಿದೆ.
'ಪಂಚಾಯಿತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಆದಾಯ ಗಳಿಸುತ್ತಿದ್ದು, ಅಷ್ಟೇ ಸಂಖ್ಯೆಯ ಸಿಬ್ಬಂದಿ ಹಾಗೂ ಉಪಕರಣಗಳನ್ನು ಬಳಸಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಸಾಧ್ಯವಾಗುತ್ತಿದೆ. ಈಗ ಜಿಲ್ಲಾ ಪಂಚಾಯಿತಿಯ 15 ಲಕ್ಷ ರೂ.ನಿಧಿ ಬಳಸಿ ಸುಸಜ್ಜಿತ ಉದ್ಯಾನವನ್ನು ನಿರ್ಮಿಸುತ್ತಿದ್ದೇವೆ’ ಎಂದು ಪುಟ್ಟರಾಜು ಹೇಳುತ್ತಾರೆ.
ಉದ್ಯಾನವನ್ನು ವಿಶಿಷ್ಟ ರೀತಿಯಲ್ಲಿ ನಿರ್ಮಿಸಲು ಯೋಜಿಸಲಾಗುತ್ತಿದ್ದು, ಯೋಜನೆ ಪೂರ್ಣಗೊಳಿಸಲು ಖಾಸಗಿ ದಾನಿಗಳ ಸಹಾಯವನ್ನು ಪಡೆಯಲೂ ಪಂಚಾಯಿತಿಯೂ ಮುಂದಾಗಿದೆ. ಸಾರ್ವಜನಿಕ ಉದ್ಯಾನ ನಿರ್ಮಿಸಲು ಭೂಮಿ ಸಮತಟ್ಟು ಮಾಡುವ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಮೂರು ತಿಂಗಳಲ್ಲಿ ಸಂಪೂರ್ಣ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು.