ಮಡಿಕೇರಿ: ನೂರಾರು ಜನ ಸಂಚರಿಸುವ ಕೊಡಗಿನ ಕಣಿವೆ ತೂಗು ಸೇತುವೆ ಶಿಥಿಲಾವಸ್ಥೆ ತಲುಪಿದೆ. ಒಂದು ದಶಕದ ಹಿಂದೆ ನಿರ್ಮಿಸಲಾದ ಈ ಸೇತುವೆಯು 2018-19ರ ಮಳೆಗಾಲದಲ್ಲಿ ತೀವ್ರ ಹಾನಿಗೊಳಗಾಗಿದ್ದು, ಇದುವರೆಗೂ ದುರಸ್ಥಿ ಕಾರ್ಯ ನಡೆದಿಲ್ಲ.
ರಾಜ್ಯ ಸರ್ಕಾರ 2011ರಲ್ಲಿ ಕಣಿವೆಗೆ ತೂಗು ಸೇತುವೆ ಯೋಜನೆ ಮಂಜೂರಾತಿ ನೀಡಿದ್ದು, 47 ಲಕ್ಷ ರೂ. ವೆಚ್ಚದಲ್ಲಿ ಸೇತುವೆ-ಮ್ಯಾನ್ ಗಿರೀಶ್ ಭಾರದ್ವಾಜ್ ಅವರು 2012 ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸುಸಜ್ಜಿತ ತೂಗು ಸೇತುವೆ ನಿರ್ಮಿಸಿದರು. ಇದು ಮೈಸೂರು ಮತ್ತು ಕೊಡಗು ಎರಡು ಜಿಲ್ಲೆಗಳನ್ನು ಸಂಪರ್ಕಿಸುತ್ತದೆ.
ಈ ಸೇತುವೆ ಪಿರಿಯಾಪಟ್ಟಣದ ಗಡಿ ಭಾಗಗಳಿಂದ ಕೊಡಗಿನ ಕಣಿವೆಗೆ ತೆರಳುವ ಸಮಯ ಅತ್ಯಂತ ಕಡಿಮೆಯಾಗುವುದರಿಂದ ಕಾಲೇಜು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ನಿವಾಸಿಗಳು ಈ ಸೇತುವೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಬಹುಪಾಲು ಕಾರ್ಖಾನೆ ಮತ್ತು ಎಸ್ಟೇಟ್ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ಈ ಸೇತುವೆಯನ್ನು ಬಳಸುತ್ತಿದ್ದಾರೆ. ಆದರೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ನಿರ್ವಹಣೆ ಕೊರತೆಯಿಂದ ಸಂಚಾರಿಗಳಿಗೆ ಅಪಾಯ ತಂದೊಡ್ಡುವಂತಿದೆ.
ಸೇತುವೆ ಗಟ್ಟಿಮುಟ್ಟಾಗಿದ್ದರೂ, 2018 ಮತ್ತು 2019 ರ ಮಳೆಗಾಲದಲ್ಲಿ ಕಾವೇರಿ ನದಿಯ ನೀರು ಸೇತುವೆಯ ಮೇಲೆ ಉಕ್ಕಿ ಹರಿದ ನಂತರ ಇದಕ್ಕೆ ಅಪಾರ ಹಾನಿಯಾಗಿದೆ. ಶಾಸಕ ಅಪ್ಪಚ್ಚು ರಂಜನ್ ಅವರ ಪ್ರಯತ್ನದ ನಂತರ ಸೇತುವೆಯ ಮರದ ನೆಲಹಾಸು ಮತ್ತು ಸೇತುವೆಗೆ ಸಂಪರ್ಕಿಸುವ ಸಿಮೆಂಟ್ ಮೆಟ್ಟಿಲುಗಳನ್ನು 2019-20 ರಲ್ಲಿ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ.
ಆದರೆ, ಸೇತುವೆ ಗಟ್ಟಿತನ ಕಳೆದುಕೊಂಡಿದ್ದು, ಹಲವೆಡೆ ಲೋಹದ ಗಾಳಗಳು ಮುರಿದು ಬಿದ್ದಿವೆ. ಹೀಗಾಗಿ ಮಳೆಗಾಲದಲ್ಲಿ ಸೇತುವೆ ಮೇಲೆ ಪ್ರಯಾಣಿಸದಂತೆ ನಿಷೇಧಿಸಲಾಗಿದ್ದರೂ, ನೂರಾರು ಜನ ದುರ್ಬಲ ಸೇತುವೆಯನ್ನು ಬಳಸುತ್ತಿದ್ದಾರೆ.
ಅಹಿತಕರ ಘಟನೆಗಳನ್ನು ತಪ್ಪಿಸಲು ತಕ್ಷಣವೇ ಸೇತುವೆ ದುರಸ್ತಿ ಮಾಡುವ ಅಗತ್ಯವಿದೆ. ಯಾವಾಗ ಬೇಕಾದರೂ ಕುಸಿದು ಬೀಳುವ ಆತಂಕದಲ್ಲಿದ್ದರೂ ನೂರಾರು ಜನ ಶಿಥಿಲಗೊಂಡ ಸೇತುವೆಯ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಸ್ಥಳೀಯ ಲೋಕೇಶ್ ಮತ್ತು ಇತರ ಗ್ರಾಮಸ್ಥರು ಹೇಳಿದ್ದಾರೆ.
Advertisement