ಸರಿಯಾದ ಸಿಸಿಟಿವಿ ದೃಶ್ಯಾವಳಿ ಕೊರತೆ: ಹಿಟ್ ಅಂಡ್ ರನ್ ಪ್ರಕರಣಗಳನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ವಿಫಲ

ಹಿಟ್ ಆ್ಯಂಡ್ ರನ್ ಘಟನೆಗಳಲ್ಲಿ ಭಾಗಿಯಾದ ವಾಹನಗಳನ್ನು ಗುರುತಿಸಲು ನಗರ ಸಂಚಾರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಅವಲಂಬಿಸಿದ್ದಾರೆ. ಆದರೆ, ಹಲವು ಕಾರಣಗಳಿಗಾಗಿ ಇತ್ತೀಚಿನ ಕೆಲವು ಪ್ರಕರಣಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಹಿಟ್ ಆ್ಯಂಡ್ ರನ್ ಘಟನೆಗಳಲ್ಲಿ ಭಾಗಿಯಾದ ವಾಹನಗಳನ್ನು ಗುರುತಿಸಲು ನಗರ ಸಂಚಾರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಅವಲಂಬಿಸಿದ್ದಾರೆ. ಆದರೆ, ಹಲವು ಕಾರಣಗಳಿಗಾಗಿ ಇತ್ತೀಚಿನ ಕೆಲವು ಪ್ರಕರಣಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ನಗರದಲ್ಲಿ ಸುಮಾರು 1,100 ಸಿಸಿಟಿವಿ ಕ್ಯಾಮೆರಾಗಳಿವೆ ಮತ್ತು 7,000 ಸಿಸಿಟಿವಿ ಕ್ಯಾಮೆರಾಗಳನ್ನು ‘ಸುರಕ್ಷಿತ ನಗರ’ ಯೋಜನೆಯಡಿ ಸೇರಿಸಲಾಗುತ್ತಿದೆ.

ಮೂರು ದಿನಗಳ ಹಿಂದೆ ಬದ್ರಪ್ಪ ಲೇಔಟ್‌ನಲ್ಲಿ ಸ್ಕೂಟರ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು 33 ವರ್ಷದ ಸುಷ್ಮಾ ಎಂಬ ಅಕೌಂಟೆಂಟ್ ಮೃತಪಟ್ಟಿದ್ದರು. ಆದರೆ, ಹೆಬ್ಬಾಳ ಸಂಚಾರ ಪೊಲೀಸರಿಗೆ ಈ ಪ್ರಕರಣದಲ್ಲಿ ಯಾವುದೇ ಸುಳಿವು ಸಿಕ್ಕಿಲ್ಲ. ಆ ಭಾಗದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ ಎಂದು ಹೇಳಿದ್ದು, ಈಗ, ವಾಹನವನ್ನು ಗುರುತಿಸಲು ಹತ್ತಿರದ ಟ್ರಾಫಿಕ್ ಜಂಕ್ಷನ್‌ಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಇದೊಂದೇ ಪ್ರಕರಣವಲ್ಲ. ಮೂರು ವಾರಗಳ ಹಿಂದೆ, ಬಾಲಬ್ರೂಯಿ ಗೆಸ್ಟ್‌ಹೌಸ್‌ನ ಮುಂದೆ ವೇಗವಾಗಿ ಬಂದ ಹೈ-ಎಂಡ್ ಕಾರೊಂದು ಟಿಎನ್ಐಇ ಉದ್ಯೋಗಿಗೆ ಡಿಕ್ಕಿ ಹೊಡೆದಿತ್ತು. ಹೈಗ್ರೌಂಡ್ಸ್ ಸಂಚಾರ ಪೊಲೀಸರು ಸಿಸಿಟಿವಿ ಕ್ಯಾಮೆರಾದಲ್ಲಿ ವಾಹನದ ಚಲನವಲನವನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಆದರೆ, ದೃಶ್ಯಗಳು ಮಸುಕಾಗಿರುವುದರಿಂದ ವಾಹನದ ನಂಬರ್ ಅನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ.

ಗಾಯಗೊಂಡಿರುವ ಅರುಣ್ ಕುಮಾರ್ ಬಿ ಮಾತನಾಡಿ, 'ನನಗೆ ಡಿಕ್ಕಿ ಹೊಡೆದ ಬಿಳಿ ಬಣ್ಣದ ಜಾಗ್ವಾರ್ ಕಾರನ್ನು ನೋಡಿದ್ದ ಆಟೋ ಚಾಲಕರೊಬ್ಬರು ಪೊಲೀಸರೊಂದಿಗೆ ವಿವರ ಹಂಚಿಕೊಂಡಿದ್ದಾರೆ. ನಾನು ತೀವ್ರವಾಗಿ ಗಾಯಗೊಂಡಿದ್ದೆ ಮತ್ತು ಆಟೋ ಚಾಲಕ ನನ್ನನ್ನು ಆಸ್ಪತ್ರೆಗೆ ಸಾಗಿಸಿದರು. ಒಂದೆರಡು ವಾರಗಳು ಕಳೆದರೂ ಪೊಲೀಸರು ಆ ವಾಹನವನ್ನು ಪತ್ತೆ ಮಾಡದಿರುವುದು ಹೇಗೆ ಎಂಬುದು ನನಗೆ ಆಶ್ಚರ್ಯವಾಗಿದೆ. ನಾನು ತನಿಖಾಧಿಕಾರಿಗೆ ಪದೇ ಪದೆ ಕರೆ ಮಾಡಿದರೂ ಸರಿಯಾದ ಸಿಸಿಟಿವಿ ದೃಶ್ಯಾವಳಿಗಳಿಲ್ಲ ಎಂದು ಅವರು ಹೇಳಿದರು. ಹೀಗಾಗಿ ಆರೋಪಿಯನ್ನು ಬಂಧಿಸುವುದು ಅನುಮಾನ' ಎಂದರು.

ಪೂರ್ವ ವಿಭಾಗದ ಸಂಚಾರ ಡಿಸಿಪಿ ಕಲಾ ಕೃಷ್ಣಸ್ವಾಮಿ ಮಾತನಾಡಿ, 'ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಭಾಗಿಯಾಗಿರುವ ವಾಹನಗಳನ್ನು ಗುರುತಿಸಲು ಹಲವಾರು ಮಾರ್ಗಗಳಿವೆ. ಸಿಸಿಟಿವಿ ಕ್ಯಾಮೆರಾಗಳು ಕೇವಲ ಒಂದು ಆಯ್ಕೆಯಾಗಿದೆ. ಆದರೆ, ಆ ತಾಂತ್ರಿಕ ಅಂಶಗಳನ್ನು ಬಹಿರಂಗಪಡಿಸಲು ನಾನು ಬಯಸುವುದಿಲ್ಲ' ಎನ್ನುತ್ತಾರೆ.

ಸಾರಿಗೆ ಮೂಲಸೌಕರ್ಯ ಯೋಜನಾ ವ್ಯವಸ್ಥೆಗಳ ತಜ್ಞ ಎಂ.ಎನ್. ಶ್ರೀಹರಿ ಮಾತನಾಡಿ, 'ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರಿಯಾಗಿ ತರಬೇತಿ ಇಲ್ಲ ಮತ್ತು ಅಪರಾಧಗಳು ಹಾಗೂ ಟ್ರಾಫಿಕ್ ಸಂಬಂಧಿತ ಪ್ರಕರಣಗಳನ್ನು ಭೇದಿಸಲು ಸಿಸಿಟಿವಿ ದೃಶ್ಯಗಳನ್ನು ಹೇಗೆ ಮೇಲ್ವಿಚಾರಣೆ ಮಾಡಬೇಕು ಎಂಬುದು ಅವರಿಗೆ ತಿಳಿದಿಲ್ಲ. ಐದು ವರ್ಷಗಳ ಹಿಂದೆ, ಕಡಿಮೆ ಸಿಸಿಟಿವಿಗಳು ಇದ್ದವು, ಆದರೆ ಪೊಲೀಸರು ಹಿಟ್ ಮತ್ತು ರನ್ ಪ್ರಕರಣಗಳನ್ನು ಪರಿಹರಿಸುತ್ತಿದ್ದರು. ಈಗ ಅವರು ಸಾಕಷ್ಟು ಹೈ-ಡೆಫಿನಿಷನ್ ಕ್ಯಾಮೆರಾಗಳನ್ನು ಹೊಂದಿದ್ದಾರೆ. ಆದರೆ, ಇನ್ನೂ ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಮಾಡಲು ಸಾಧ್ಯವಾಗುತ್ತಿಲ್ಲ' ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com