ಬೆಂಗಳೂರು: ನೀರು ಪೂರೈಕೆ ಸ್ಥಗಿತ; ಮಹಿಳೆಗೆ 55,000 ರೂ. ಪರಿಹಾರ ಪಾವತಿಸುವಂತೆ ಬಿಡಬ್ಲ್ಯುಎಸ್‌ಎಸ್‌ಬಿಗೆ ನಿರ್ದೇಶನ

2018ರಿಂದಲೂ ಪದೇ ಪದೇ ಮನವಿ ಮಾಡಿದರೂ ದೋಷಪೂರಿತ ಮೀಟರ್ ಬದಲಾಯಿಸದೆ ಮಹಿಳೆಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಕ್ಕೆ ಬಿಡಬ್ಲ್ಯುಎಸ್‌ಎಸ್‌ಬಿ ಮಲ್ಲೇಶ್ವರಂನ ಮಹಿಳೆಯೊಬ್ಬರಿಗೆ ರೂ.55,000 ಪಾವತಿಸುವಂತಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 2018ರಿಂದಲೂ ಪದೇ ಪದೇ ಮನವಿ ಮಾಡಿದರೂ ದೋಷಪೂರಿತ ಮೀಟರ್ ಬದಲಾಯಿಸದೆ ಮಹಿಳೆಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಕ್ಕೆ ಬಿಡಬ್ಲ್ಯುಎಸ್‌ಎಸ್‌ಬಿ ಮಲ್ಲೇಶ್ವರಂನ ಮಹಿಳೆಯೊಬ್ಬರಿಗೆ ರೂ.55,000 ಪಾವತಿಸುವಂತಾಗಿದೆ.

ದೂರುದಾರರಾದ  53 ವರ್ಷದ ಸದಾಶಿವಮ್ಮ ಅವರಿಗೆ 50, 000 ಪರಿಹಾರ, ಕಾನೂನು ಹೋರಾಟಕ್ಕೆ ತಗುಲಿದ 5 ಸಾವಿರ ವೆಚ್ಚ ಸೇರಿದಂತೆ ಒಟ್ಟಾರೇ ರೂ. 55,000 ಪಾವತಿಸುವಂತೆ ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ, ಬಿಡಬ್ಲ್ಯೂಎಸ್ ಎಸ್ ಬಿಗೆ  ನಿರ್ದೇಶಿಸಿದೆ.

ಅಧ್ಯಕ್ಷರಾದ ಎಂ.ಶೋಭಾ, ಸದಸ್ಯರಾದ ಬಿ ದೇವರಾಜ್ ಮತ್ತು ವಿ ಅನುರಾಧಾ ಅವರನ್ನೊಳಗೊಂಡ ಆಯೋಗ, ಈ ತೀರ್ಪು ನೀಡಿದ್ದು, ಕೂಡಲೇ ದೋಷಪೂರಿತ ಮೀಟರ್ ಬದಲಾಯಿಸಿ, ದೂರುದಾರ ಮಹಿಳೆ ಮನೆಗೆ ಮತ್ತೆ ನೀರು ಪೂರೈಸುವಂತೆ ಮಂಡಳಿಗೆ ಸೂಚಿಸಿದೆ.  

ದೂರುದಾರ ಮಹಿಳೆ ರೂ. 1,91,826 ರೂ. ಪಾವತಿಸಬೇಕಾಗಿದೆ ಎಂದು ಬಿಡಬ್ಲ್ಯೂಎಸ್ ಎಸ್ ಬಿ ಹೇಳಿತ್ತು. ಆದರೆ, ದೂರುದಾರ ಮಹಿಳೆ ಬಳಿ ಇರುವ ದಾಖಲೆಗಳ ಪ್ರಕಾರ ಬಿಡಬ್ಲ್ಯೂಎಸ್ ಎಸ್ ಬಿ ತಪ್ಪೇ ಹೆಚ್ಚಾಗಿ ಕಂಡುಬಂದಿದ್ದು, ಆಕೆ ಯಾವುದೇ ಹಣ ಪಾವತಿಸಬೇಕಾಗಿಲ್ಲ ಎಂದು ಆಯೋಗ ಹೇಳಿತು. ಆದೇಶದ ಪ್ರಕಾರ, ದೂರುದಾರ ಮಹಿಳೆ ಪ್ರತಿ ತಿಂಗಳು ನೀರಿನ ಶುಲ್ಕವಾಗಿ ರೂ. 100 ರಿಂದ 200 ಕಟ್ಟುತ್ತಿದ್ದರು. ಆದರೆ, ಮೀಟರ್ ದೂಷದಿಂದಾಗಿ  ಪ್ರತಿ ತಿಂಗಳು 2,000 ದಿಂದ 3,0000 ನೀರಿನ ಬಿಲ್ ಬರುತ್ತಿದೆ ಎಂದು ಆಗಸ್ಟ್ 2018ರಲ್ಲಿ ಆಕೆ ಮನವಿ ಸಲ್ಲಿಸಿದ್ದಳು.

ಮೀಟರ್ ಸ್ಥಗಿತಗೊಂಡಿದ್ದು, ಜನವರಿ 2017 ರಿಂದಲೂ ಬಿಡಬ್ಲ್ಯೂಎಸ್ ಎಸ್ ಬಿಯಿಂದ ನೀರು ಪಡೆದಿಲ್ಲ, ಮತ್ತೆ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ, ಆಕೆ ಬೋರ್ ವೆಲ್ ನೀರನ್ನು ಉಪಯೋಗಿಸುತ್ತಿಲ್ಲ, ವಾಣಿಜ್ಯ ಉದ್ದೇಶಕ್ಕೂ ನೀರನ್ನು ಬಳಸುತ್ತಿಲ್ಲ ಎಂದು ಮಹಿಳೆ ಸ್ಪಷ್ಪಪಡಿಸಿದ್ದರು.

ಆದರೂ, ಆಕೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಬಿಡಬ್ಲ್ಯೂಎಸ್ ಎಸ್ ಬಿ ಪರಿಗಣಿಸಿರಲಿಲ್ಲ, ಕೆ ರೂ. 1,91,826 ನೀರಿನ ಬಿಲ್ ಕಟ್ಟಬೇಕೆಂದು ಮಂಡಳಿ ಬೆದರಿಕೆ ಹಾಕಿತ್ತು. ಇದರಿಂದ ಮಹಿಳೆ ಆಯೋಗದ ಮೆಟ್ಟಿಲೇರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com