ಮೂಲಭೂತ ಸೌಕರ್ಯ ಸಮಸ್ಯೆ, ಒತ್ತುವರಿ ತೆರವು ಭೀತಿ: ಸಿಲಿಕಾನ್ ಸಿಟಿಯಿಂದ ಖಾಸಗಿ ಕಂಪನಿಗಳ ಕಾಲು ತೆಗೆತ: ಇಂಡಿಯಾ ಇಂಕ್  ಆತಂಕ!

ಪ್ರವಾಹ ಮತ್ತು ಇತ್ತೀಚಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯಂತಹ ಘಟನೆಗಳಿಂದಾಗಿ ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಗಳು ನಗರದಿಂದ ಹೊರಗೆ ಹೋಗುವ ಅಪಾಯವಿದೆ ಎಂದು ಇಂಡಿಯಾ ಇಂಕ್ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರವಾಹ ಮತ್ತು ಇತ್ತೀಚಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯಂತಹ ಘಟನೆಗಳಿಂದಾಗಿ ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಗಳು ನಗರದಿಂದ ಹೊರಗೆ ಹೋಗುವ ಅಪಾಯವಿದೆ ಎಂದು ಇಂಡಿಯಾ ಇಂಕ್ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಮಳೆ ಮತ್ತು ಆ ಬಳಿಕ ಸಂಭವಿಸುತ್ತಿರುವ ಘಟನೆಗಳು ಉದ್ಯಮ ಸ್ನೇಹಿಯಾಗಿಲ್ಲ. ಇದು ಸಂಸ್ಥೆಗಳು ನಗರದ ಹೊರಗೆ ಅಥವಾ ಬೇರೆ ರಾಜ್ಯಗಳಲ್ಲಿ ನೆಲೆ ನೋಡುವತ್ತ ಒತ್ತಾಯಿಸುತ್ತಿದೆ ಎಂದು ಬೆಂಗಳೂರಿನ ವಿವಿಧ ಉದ್ಯಮ ಸಂಘಗಳು ನಂಬಿವೆ. ಬಹುಪಾಲು ಕಂಪನಿಗಳು ಕೋವಿಡ್‌ನ ಪ್ರಭಾವದಿಂದ ಚೇತರಿಸಿಕೊಳ್ಳಲು ಇನ್ನೂ ಹೆಣಗಾಡುತ್ತಿವೆ ಮತ್ತು ಮಳೆ, ಪ್ರವಾಹವು ಅವುಗಳನ್ನು ಮತ್ತಷ್ಟು ಕೆಳಗೆ ತಳ್ಳಿವೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರೀಸ್ ಅಂಡ್ ಕಾಮರ್ಸ್ (ಬಿಸಿಐಸಿ) ಐಟಿ ಸಮಿತಿಯ ಅಧ್ಯಕ್ಷ ಮಾನಸ್ ದಾಸ್‌ಗುಪ್ತ ಮಾತನಾಡಿ, 'ಭಾರಿ ಮಳೆ ಮತ್ತು ಪ್ರವಾಹದಿಂದ ಕಂಪನಿಗಳಿಗೆ ಉಂಟಾದ ನಷ್ಟವನ್ನು ಅಳೆಯುವುದು ತುಂಬಾ ಕಷ್ಟ. ಮಳೆಯಿಂದ ಆಗಿರುವ 225 ಕೋಟಿ ರೂ ನಷ್ಟವು ನಿಖರವಾಗಿಲ್ಲ, ಆದರೆ ಇದು ಖಂಡಿತವಾಗಿಯೂ ಹೆಚ್ಚು. ಕಂಪನಿಗಳು ಎದುರಿಸುತ್ತಿರುವ ಕಾಲ್ಪನಿಕ ನಷ್ಟವು ದೊಡ್ಡದಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಕಂಪನಿಗಳು ಖಂಡಿತವಾಗಿಯೂ ನಗರದಿಂದ ಹೊರಗೆ ಹೋಗುವುದನ್ನು ಪರಿಗಣಿಸುತ್ತವೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಕೆಲವು ವರ್ಷಗಳ ಕೆಳಗೆ ಇದೇ ರೀತಿಯ ನಷ್ಟವನ್ನು ಎದುರಿಸಿದರೆ ಪರ್ಯಾಯಗಳನ್ನು ಹುಡುಕುವುದು ಅವರ ಸಹಜ ಪ್ರವೃತ್ತಿಯಾಗುತ್ತದೆ. ಎರಡು ವರ್ಷಗಳ ನಂತರ ಪರಿಸ್ಥಿತಿ ಸುಧಾರಿಸದಿದ್ದರೆ ನಷ್ಟದ ಪ್ರಮಾಣವು ಹತ್ತು ಪಟ್ಟು ಹೆಚ್ಚಾಗಬಹುದು ಎಂದು ದಾಸ್ ಗುಪ್ತ ಎಚ್ಚರಿಸಿದ್ದಾರೆ. 

ಕಳಪೆ ಯೋಜನೆ
ಎಫ್‌ಕೆಸಿಸಿಐನ ನಿರ್ದೇಶಕಿ ರೂಪಾ ರಾಣಿ ಮಾತನಾಡಿ, ಕೆಲವು ಕಂಪನಿಗಳು ವಿಶೇಷವಾಗಿ ಬಾಡಿಗೆ ಜಾಗದಲ್ಲಿ ಕೆಲಸ ಮಾಡುವ ಕಂಪನಿಗಳು ಸ್ಥಳಾಂತರಗೊಳ್ಳಲು ಪರಿಗಣಿಸುವ ಸಾಧ್ಯತೆಯಿದೆ. ಆದರೆ ಅವರ ಸಂಪೂರ್ಣ ವ್ಯಾಪಾರ ಸೆಟಪ್‌ಗಳನ್ನು ಬದಲಾಯಿಸುವುದು ಕಷ್ಟ, ವಿಶೇಷವಾಗಿ ನಗರದಲ್ಲಿ ಆಸ್ತಿ ಹೊಂದಿರುವವರು ಎಂದು ಅವರು ಹೇಳಿದರು. 

ಹೊರ ವರ್ತುಲ ರಸ್ತೆ ಕಂಪನಿಗಳ ಸಂಘವೂ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದು, ಮೂಲಸೌಕರ್ಯ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಕಂಪನಿಗಳು ಪರ್ಯಾಯ ತಾಣಗಳನ್ನು ಹುಡುಕುತ್ತವೆ ಎಂದು ಹೇಳಿದೆ. ಆದರೆ ಪೀಣ್ಯದಲ್ಲಿನ ಕೈಗಾರಿಕೆಗಳು ನಗರದಿಂದ ಹೊರಹೋಗುವ ಬದಲು ಉತ್ತಮ ಆಡಳಿತಕ್ಕಾಗಿ ಹೋರಾಡಲು ಸಿದ್ಧವಾಗಿವೆ. ಈ ಕುರಿತು ಮಾತನಾಡಿರುವ ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್ ​​ಉಪಾಧ್ಯಕ್ಷ ಶಿವ ಕುಮಾರ್ ಆರ್. ಅವರು, 'ನಾವು ಮಳೆಯಿಂದಾಗಿ ನಷ್ಟವನ್ನು ಅನುಭವಿಸಿದ್ದೇವೆ, ಅನೇಕ ಭಾಗಗಳಲ್ಲಿ ಒಳಚರಂಡಿ ವ್ಯವಸ್ಥೆಗಳು ನಿಷ್ಕ್ರಿಯವಾಗಿವೆ. ಮೂಲಭೂತ ಸೌಕರ್ಯಗಳು ಕಳಪೆಯಾಗಿದ್ದು, ಬಿಬಿಎಂಪಿ ಅಥವಾ ಇತರ ಯಾವುದೇ ಅಧಿಕಾರಿಗಳು ಯಾವುದೇ ಯೋಜನೆಯನ್ನು ಮಾಡುತ್ತಿಲ್ಲ. ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ವಾರ್ಷಿಕ ಸಭೆಗಳು ಸಹಾಯಕವಾಗುತ್ತಿತ್ತು. ಆದರೆ ನಾವು ಬೇರೆ ನಗರಕ್ಕೆ ಹೋಗಲು ಸಾಧ್ಯವಿಲ್ಲ, ಏಕೆಂದರೆ ಕಳಪೆ ಆಡಳಿತದಿಂದಾಗಿ ನಾವು ಭೂಮಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಉತ್ತಮ ವ್ಯವಸ್ಥೆಗಾಗಿ ನಮ್ಮ ಸಂಘ ಹೋರಾಟ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com