ನಿರಂತರ ಮಳೆ: ಕೊಡಗು ಸಮೀಪದ ಚೆಂಬು ಗ್ರಾಮದಲ್ಲಿ ರಸ್ತೆಗಳು, ಸೇತುವೆಗಳಿಗೆ ಹಾನಿ, ಸಂಪರ್ಕ ಕಳೆದುಕೊಂಡ ಗ್ರಾಮ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಕೊಡಗು ಜಿಲ್ಲೆಯಲ್ಲಿ ಕೂಡ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಜಿಲ್ಲೆಯ ಚೆಂಬು ಗ್ರಾಮದಲ್ಲಿ ಜೂನ್‌ನಲ್ಲಿ ಏಳು ಬಾರಿ ಭೂಕಂಪನವಾಗಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚು ಮುಂಗಾರು ಹಾನಿಗೊಳಗಾದ ಗ್ರಾಮ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ತೀವ್ರ ಮಳೆಯಿಂದಾಗಿ ಚೆಂಬು ಗ್ರಾಮದ ಸೇತುವೆಗಳು ಮತ್ತು ರಸ್ತೆಗಳು ಹಾನಿಗೊಳಗಾಗಿವೆ
ತೀವ್ರ ಮಳೆಯಿಂದಾಗಿ ಚೆಂಬು ಗ್ರಾಮದ ಸೇತುವೆಗಳು ಮತ್ತು ರಸ್ತೆಗಳು ಹಾನಿಗೊಳಗಾಗಿವೆ
Updated on

ಮಡಿಕೇರಿ: ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಕೊಡಗು ಜಿಲ್ಲೆಯಲ್ಲಿ ಕೂಡ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಜಿಲ್ಲೆಯ ಚೆಂಬು ಗ್ರಾಮದಲ್ಲಿ ಜೂನ್‌ನಲ್ಲಿ ಏಳು ಬಾರಿ ಭೂಕಂಪನವಾಗಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚು ಮುಂಗಾರು ಹಾನಿಗೊಳಗಾದ ಗ್ರಾಮ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ಹಲವಾರು ಭೂಕುಸಿತಗಳು ಉಂಟಾಗಿ ರಸ್ತೆಗಳು ಮತ್ತು ಸೇತುವೆಗಳಿಗೆ ಹಾನಿಯಾಗಿದೆ. ಇದು ನಿವಾಸಿಗಳಿಗೆ ಆತಂಕಕ್ಕೆ ಕಾರಣವಾಗಿದೆ.

ಗ್ರಾಮದಾದ್ಯಂತ ಹರಿಯುವ ಪಯಸ್ವಿನಿ ನದಿ ತುಂಬಿ ಹರಿಯುತ್ತಿದ್ದು, ಹಲವೆಡೆ ಜಲಾವೃತದಿಂದಾಗಿ ಹಲವಾರು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ನದಿ ತುಂಬಿ ಹರಿಯುತ್ತಿರುವುದರಿಂದ  ಈ ಪ್ರದೇಶದ ಅನೇಕ ಮನೆಗಳು ಪ್ರವಾಹದ ಹೊಡೆತಕ್ಕೆ ಸಿಲುಕಿವೆ. ನಿರ್ಮಾಣ ಹಂತದಲ್ಲಿದ್ದ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿದ್ದ ಸೇತುವೆಗೆ ಹಾನಿಯಾಗಿದ್ದು, ಕುಸಿದು ಬಿದ್ದಿದೆ.

'2018 ರಲ್ಲಿ ಸಂಭವಿಸಿದ ದುರಂತದಲ್ಲಿ ಉರುಬೈಲು ಬಳಿ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಹಳೆಯ ಸೇತುವೆ ಕೊಚ್ಚಿಹೋಗಿತ್ತು. ಹೀಗಾಗಿ ಹೊಸ ಸೇತುವೆ ಕಾಮಗಾರಿ ಮುಂದುವರಿದಿತ್ತು. ಆದರೆ, ಈಗ ನಿರ್ಮಾಣ ಹಂತದಲ್ಲಿದ್ದ ಸೇತುವೆಗೂ ಹಾನಿಯಾಗಿದೆ. ಸೇತುವೆಯು ಕುಸಿದು ಬಿದ್ದಿದೆ’ ಎಂದು ನಿವಾಸಿ ಕಿರಣ್ ತಿಳಿಸುತ್ತಾರೆ.

ನಿರಂತರ ಮಳೆಯಿಂದಾಗಿ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಲವಾರು ರಸ್ತೆಗಳು ಕುಸಿತಗೊಂಡು, ಗ್ರಾಮವು ತೊಂದರೆಗೆ ಸಿಲುಕಿದೆ. ಇಲ್ಲಿ ವಾಸಿಸುತ್ತಿರುವ 40 ಕ್ಕೂ ಹೆಚ್ಚು ಕುಟುಂಬಗಳು ಜಿಲ್ಲಾಡಳಿತದಿಂದ ಅಗತ್ಯ ಪರಿಹಾರಕ್ಕಾಗಿ ಕಾಯುತ್ತಿವೆ.

ಚೆಂಬು ಪಂಚಾಯತ್‌ನ ಪ್ರಭಾರ ನೋಡಲ್ ಅಧಿಕಾರಿ ರೇಷ್ಮಾ ಮಾತನಾಡಿ, ಪಂಚಾಯತ್ ಶಾಲಾ ಆವರಣದಲ್ಲಿ ತೆರೆಯಲಾದ ಪರಿಹಾರ ಕೇಂದ್ರಕ್ಕೆ ಕೇವಲ ಮೂರು ಕುಟುಂಬಗಳನ್ನಷ್ಟೇ ಸದ್ಯ ಸ್ಥಳಾಂತರಿಸಲಾಗಿದೆ. ಈ ಗ್ರಾಮದಲ್ಲಿ ಉಳಿದುಕೊಂಡಿರುವ ಕುಟುಂಬಗಳಿಗೆ ಯಾವುದೇ ಆಹಾರ ಕಿಟ್‌ಗಳನ್ನು ವಿತರಿಸಲಾಗಿಲ್ಲ ಮತ್ತು ರಸ್ತೆ ಸಂಪರ್ಕವಿಲ್ಲದ ಕಾರಣ ಯಾವುದೇ ತುರ್ತು ಪರಿಸ್ಥಿತಿ ದುರಂತದಲ್ಲಿ ಕೊನೆಗೊಳ್ಳುವ ಸಾಧ್ಯತೆಯಿದೆ' ಎಂದು ತಿಳಿಸಿದ್ದಾರೆ.

'ನದಿಯ ಆಚೆ ಇರುವ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಎಂಜಿನಿಯರ್‌ಗಳು ತಾತ್ಕಾಲಿಕ ಪರಿಹಾರ ಕಾರ್ಯ ನಡೆಸುತ್ತಿದ್ದಾರೆ. ಆದರೆ, ಸ್ಥಳದಲ್ಲಿ ಇನ್ನೂ ಭಾರಿ ಮಳೆಯಾಗುತ್ತಿದ್ದು, ಪರಿಹಾರ ಕಾರ್ಯ ವಿಳಂಬವಾಗುತ್ತಿದೆ" ಎಂದು ರೇಷ್ಮಾ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com