ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಾವರ್ಕರ್ ಫೋಟೋಗೆ ಎಸ್ ಡಿಪಿಐ ಕಾರ್ಯಕರ್ತರ ಆಕ್ಷೇಪ, ಶಿಕ್ಷಕರಿಂದ ಕ್ಷಮೆ ಕೇಳಲು ಪಟ್ಟು
ಮಂಗಳೂರು ಸಮೀಪದ ಗುರುಪುರದಲ್ಲಿ ನಿನ್ನೆ ಸೋಮವಾರ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ವಿಡಿ ಸಾವರ್ಕರ್ ಭಾವಚಿತ್ರ ಬಳಸಿದ್ದಕ್ಕೆ ಎಸ್ಡಿಪಿಐ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದ ಶಾಲಾ ಅಧಿಕಾರಿಗಳಲ್ಲಿ ಕ್ಷಮೆ ಯಾಚಿಸಿದ ಘಟನೆ ನಡೆದಿದೆ.
Published: 16th August 2022 11:14 AM | Last Updated: 16th August 2022 11:14 AM | A+A A-

ದಾಮೋದರ್ ಸಾವರ್ಕರ್
ಮಂಗಳೂರು: ಮಂಗಳೂರು ಸಮೀಪದ ಗುರುಪುರದಲ್ಲಿ ನಿನ್ನೆ ಸೋಮವಾರ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ವಿಡಿ ಸಾವರ್ಕರ್ ಭಾವಚಿತ್ರ ಬಳಸಿದ್ದಕ್ಕೆ ಎಸ್ಡಿಪಿಐ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದ ಶಾಲಾ ಅಧಿಕಾರಿಗಳಲ್ಲಿ ಕ್ಷಮೆ ಯಾಚಿಸಿದ ಘಟನೆ ನಡೆದಿದೆ.
ವಿದ್ಯಾರ್ಥಿಗಳ ನೃತ್ಯ ಪ್ರದರ್ಶನದ ವೇಳೆ ಸಾವರ್ಕರ್ ಅವರ ಭಾವಚಿತ್ರವನ್ನು ಬಳಸಿದ್ದಕ್ಕೆ ಕೆಲವು ಎಸ್ಡಿಪಿಐ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ವಾತಾವರಣ ತಿಳಿಗೊಳಿಸಲು ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು ಎಂದು ಗುರುಪುರ ಪಂಚಾಯತ್ ಸದಸ್ಯ ರಾಜೇಶ್ ಹೇಳಿದ್ದಾರೆ.
ಬಿಜೆಪಿಗೆ ಸೇರಿದ ಕೆಲ ಪಂಚಾಯಿತಿ ಸದಸ್ಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ತಮಗೆ ದೂರು ನೀಡಿದ್ದಾರೆ ಎಂದು ಅಬೂಬಕ್ಕರ್ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
ನಡೆದ ಘಟನೆಯೇನು?: ಗ್ರಾಮ ಪಂಚಾಯತಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಆಡಳಿತ ಪಕ್ಷದ ಆರು ಸದಸ್ಯರು ಸಾವರ್ಕರ್ ಅವರ ಭಾವಚಿತ್ರವನ್ನು ಬಳಸುವುದನ್ನು ವಿರೋಧಿಸಿದರು. ಬೆಥನಿ ಶಾಲೆಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನೃತ್ಯ ಪ್ರದರ್ಶನ ಮುಗಿದ ಹತ್ತು ನಿಮಿಷದಲ್ಲಿ ಕೆಲ ಪಂಚಾಯಿತಿ ಸದಸ್ಯರು ವೇದಿಕೆಗೆ ತೆರಳಿ ಶಾಲೆಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಭಾವಚಿತ್ರವನ್ನು ಬಳಸಿದ್ದಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ಕ್ಷಮೆ ಯಾಚಿಸಿದರು. ಕೆಲವು ಗಂಟೆಗಳ ನಂತರ, ಪ್ರತಿಪಕ್ಷದ ಸದಸ್ಯರು ಶಾಲೆಯ ಅಧಿಕಾರಿಗಳು ಏಕೆ ಕ್ಷಮೆಯಾಚಿಸಬೇಕು ಎಂದು ಪ್ರಶ್ನಿಸಿದರು. ಸ್ಥಳದಲ್ಲಿ ಮಾತಿಗೆ ಮಾತು ಬೆಳೆದು ಜಗಳವೇರ್ಪಟ್ಟು ನಾನು ಪೊಲೀಸರಿಗೆ ಮಾಹಿತಿ ನೀಡಿದ್ದು, ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ನೋಡಬೇಕು ಎಂದು ಅಬೂಬಕ್ಕರ್ ತಿಳಿಸಿದ್ದಾರೆ.
ಪಂಚಾಯತಿಯಲ್ಲಿ 28 ಸದಸ್ಯರಿದ್ದು, ತಲಾ 10 ಸದಸ್ಯರನ್ನು ಹೊಂದಿರುವ ಎಸ್ ಡಿಪಿಐ, ಕಾಂಗ್ರೆಸ್ ಸದಸ್ಯರಿದ್ದಾರೆ. ಎಂಟು ಸ್ಥಾನಗಳನ್ನು ಹೊಂದಿರುವ ಬಿಜೆಪಿ ವಿರೋಧ ಪಕ್ಷ ಸ್ಥಾನದಲ್ಲಿದೆ. ಈ ಮಧ್ಯೆ, ಸುರತ್ಕಲ್ನ ವೃತ್ತಕ್ಕೆ ಸಾವರ್ಕರ್ ಅವರ ಹೆಸರನ್ನು ಅನಧಿಕೃತವಾಗಿ ಹೆಸರಿಸಿರುವುದು ಸೋಮವಾರ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಸುರತ್ಕಲ್ ಮೇಲ್ಸೇತುವೆ ಬಳಿಯ ಜಂಕ್ಷನ್ಗೆ ‘ವೀರ್ ಸಾವರ್ಕರ್ ಸರ್ಕಲ್’ ಎಂದು ನಾಮಕರಣ ಮಾಡಿ ಭಾನುವಾರ ರಾತ್ರಿ ಕೆಲ ಕಿಡಿಗೇಡಿಗಳು ಬೋರ್ಡ್ ಹಾಕಿದ್ದರು. ನಿನ್ನೆ ಇದನ್ನು ಗಮನಿಸಿದ ಕೆಲ ಸ್ಥಳೀಯರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಪೋಸ್ಟರ್ ತೆಗೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.