ಸಭೆ ಬಳಿಕ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ತೀರ್ಮಾನ: ಸಿಎಂ ಬೊಮ್ಮಾಯಿ

ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಆಚರಣೆ ಮಾಡುವ ಕುರಿತಂತೆ ಸಭೆ ನಂತರ ತೀರ್ಮಾನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಆಚರಣೆ ಮಾಡುವ ಕುರಿತಂತೆ ಸಭೆ ನಂತರ ತೀರ್ಮಾನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಹೇಳಿದ್ದಾರೆ.

ಅವರಿಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಚಾಮರಾಜಪೇಟೆ ಮೈದಾನದ ಕುರಿತು ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು ಕೋರ್ಟ್ ತೀರ್ಪು ಬಂದಿದೆ. ನಾಳೆ ಸಭೆ ಮಾಡುತ್ತೇವೆ. ಕಂದಾಯ ಸಚಿವರು, ಅಡ್ವೋಕೇಟ್ ಜನರಲ್ ಜೊತೆ ಸಭೆ ಮಾಡಿ ಕಾನೂನು ಸುವ್ಯವಸ್ಥೆ ನೋಡಿಕೊಂಡು ತೀರ್ಮಾನ ಮಾಡ್ತೇವ ಎಂದು ಹೇಳಿದರು.

ಕಂದಾಯ ಸಚಿವ ಆರ್. ಅಶೋಕ್ ಅವರು ಬಹುಜನರ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತೇವೆ ಕೋರ್ಟ್ ತೀರ್ಪು ಸಂತೋಷ ತಂದಿದೆ.. ಇದು ಬಹುಧರ್ಮಿಯರ ದೇಶ. ಅರ್ಜಿ ಪರಿಶೀಲನೆ ಮಾಡಬಹುದು ಎಂದು ಕೋರ್ಟ್ ಹೇಳಿದೆ. ಕಂದಾಯ ಇಲಾಖೆಗೆ ಅವಕಾಶ ನೀಡಿದೆ. ಪೂರ್ತಿ ಮಾಹಿತಿ ಓದಿದ ಬಳಿಕ ಸರ್ಕಾರ ನಿರ್ಧಾರ ಪ್ರಕಟ ಮಾಡಲಿದೆ ಅದಕ್ಕೂ ಮುನ್ನ ಸಿಎಂ ಮತ್ತು ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತೇವೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದು ಎನ್ನೋದು ಸ್ಪಷ್ಟ ಆಗಿದೆ. ಮುಂಬರುವ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಮಾಡ್ತೇವೆ. ಇಂದು ಖುಷಿ ಆಗಿದೆ. ಒಳ್ಳೆಯ ತೀರ್ಪು. ನೆನ್ನೆ ಸ್ವಲ್ಪ ಬೇಸರ ಆಗಿತ್ತು. ಕಂದಾಯ ಭೂಮಿ ಅಲ್ಲ ಎಂದಿದ್ದಕ್ಕೆ ಬೇಸರ ಆಗಿತ್ತು. ಇಂದು ಖುಷಿ ಆಗಿದೆ. ಕಂದಾಯ ಇಲಾಖೆಗೆ ಈ ಜಾಗ ಸೇರಿದ್ದು ಎಂದು ತಿಳಿದು ಖುಷಿ ಆಗಿದೆ ಎಂದು ಹೇಳಿದರು.

ಆಟದ ಮೈದಾನದಲ್ಲಿ ಗಣೇಶೋತ್ಸವ ; ಕೋರ್ಟ್ ತೀರ್ಪು ಸ್ವಾಗತಾರ್ಹ: ಸಿ.ಟಿ ರವಿ
ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಕೋರಿದ್ದ ಅರ್ಜಿಯ ಅನುಮತಿ ಬಗ್ಗೆ ಇಂದು ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ತೀರ್ಪು ಸ್ವಾಗತಾರ್ಹ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಈ ಕುರಿತು ಅವರು ಹೇಳಿಕೆ ನೀಡಿದ್ದಾರೆ. ಹಿಂದೂಗಳ ಧಾರ್ಮಿಕ ಆಚರಣೆ ಸ್ವಾತಂತ್ರ್ಯ ಯಾರೊಬ್ಬರ ಬಳಿ ಕೇಳಿ ಪಡೆಯುವ ಭಿಕ್ಷೆ ಅಲ್ಲ ಅದು ಜನ್ಮ ಸಿದ್ದ ಹಕ್ಕು ಅನ್ನೋದನ್ನು ಇಂದಿನ ತೀರ್ಪು ಎತ್ತಿ ಹಿಡಿದಿದೆ. ಕಂದಾಯ ಇಲಾಖೆಗೆ ಸೇರಿದ್ದ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಸಮಿತಿಗಳಿಗೆ ಅನುಮತಿ ನೀಡಲು ನಾನು ಈಗಾಗಲೇ ಘನ ಸರಕಾರಕ್ಕೆ ಪತ್ರ ಬರೆದಿದ್ದು ಅದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕೂಡಾ ಆಗಿತ್ತು. ಇಂದಿನ  ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಆ ನಿಟ್ಟಿನಲ್ಲೇ ಇದೆ.

ಆಟದ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ನಿನ್ನೆ ಹೈಕೋರ್ಟ್ ನ ಏಕಸದಸ್ಯ ಪೀಠ ನೀಡಿದ್ದ ತೀರ್ಪಿನಿಂದ ನಿರಾಶರಾಗಿದ್ದ ನಮಗೆ ಇಂದಿನ ತೀರ್ಪು ಮತ್ತೊಮ್ಮೆ ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚುವಂತೆ ಮಾಡಿದೆ ಮತ್ತು ಸಂತಸ ತಂದಿದೆ .

ಗಣೇಶೋತ್ಸವ ಆಚರಣೆಯ ಹಿಂದಿನ ಉದ್ದೇಶ ಸಮಾಜದ ಏಕತೆ. ಇದನ್ನು ಅರ್ಥ ಮಾಡಿಕೊಳ್ಳದ ಮತಾಂಧ ಶಕ್ತಿಗಳಿಗೆ ದೇಶ ಭಕ್ತಿಯ ಸದಾಚಾರ, ಸದ್ಬುದ್ಧಿ ಕೊಡಲೆಂದು ವಿಘ್ನ ವಿನಾಶಕನಲ್ಲಿ ಪ್ರಾರ್ಥಿಸೋಣ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com