ಬೆಂಗಳೂರು: 'ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಹಿಂದಿರುವ ಶಕ್ತಿಗಳನ್ನು ಹೆಡೆಮುರಿ ಕಟ್ಟುತ್ತೇವೆ. ಕಾಂಗ್ರೆಸ್ ಬೆಂಬಲಿಸುವ ಮತಾಂಧ ಶಕ್ತಿಗಳೇ ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಿವೆ. ಎಲ್ಲವನ್ನೂ ಬಯಲಿಗೆಳೆಯುತ್ತೇವೆ' ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
ಹಿಂದೂ ವಿರೋಧಿ ಕಾಂಗ್ರೆಸ್ ಎನ್ನುವ ಹ್ಯಾಷ್ಟ್ಯಾಗ್ ಹಾಕುವ ಮೂಲಕ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 'ಬಿಹಾರದಲ್ಲಿ ಸಿಕ್ಕಿಬಿದ್ದ ಪಿಎಫ್ಐ ಉಗ್ರರ "ಟೂಲ್ ಕಿಟ್" ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಹತ್ಯೆಗಳ ಮೂಲಕ ಹಿಂದೂ ಸಮಾಜವನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ಕರಾವಳಿಯನ್ನು ರಕ್ತಸಿಕ್ತಗೊಳಿಸುವ ಕಾಂಗ್ರೆಸ್ ಪ್ರೇರಿತ ಪ್ರಯತ್ನವನ್ನು ಖಂಡಿಸುತ್ತೇವೆ' ಎಂದಿದೆ.
ಮತ್ತೊಂದು ಟ್ವೀಟ್ನಲ್ಲಿ, 'ದಕ್ಷಿಣ ಕನ್ನಡದಲ್ಲಿ ನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ ಎಂದು ಅನಗತ್ಯ ವಿವಾದ ಸೃಷ್ಟಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರೇ, ಈ ಹತ್ಯೆಯ ಬಗ್ಗೆ ಏನು ಹೇಳುತ್ತೀರಿ? ಮತಾಂಧತೆಯನ್ನು ಖಂಡಿಸದ ಕಾಂಗ್ರೆಸ್ ಪಕ್ಷದ ಧೋರಣೆ ಅನುಮಾನಕ್ಕೆ ಕಾರಣವಾಗಿದೆ.
ಹಿಂದೂ ಕಾರ್ಯಕರ್ತರ ಹತ್ಯೆಯ ಹಿಂದೆ ಮತಾಂಧ ಶಕ್ತಿಗಳ ಕೈವಾಡ ಇದೆ. ರಾಜ್ಯ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಸಿಎಎ ಹೋರಾಟ ಸಂದರ್ಭದಲ್ಲಿ ಕಾನೂನು ಭಂಗ ಮಾಡಿದವರ ವಿರುದ್ಧ ತೆಗೆದುಕೊಂಡ ಉಗ್ರ ಕ್ರಮವನ್ನೇ ತೆಗೆದುಕೊಳ್ಳುತ್ತೇವೆ' ಎಂದು ಹೇಳಿದೆ.
'ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈ ಕಟ್ಟಿ ಕುಳಿತಿಲ್ಲ. ಬೆಂಗಳೂರಿನ ಕೆ.ಜೆ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದಾಗ ಯಾವ ಕ್ರಮಕೈಗೊಂಡಿದ್ದೆವೋ ಅದೇ ಕ್ರಮ ಕೈಗೊಳ್ಳುತ್ತೇವೆ' ಎಂದು ಎಚ್ಚರಿಸಿದೆ.
Advertisement