10 ದಿನಗಳ ಅಂತರದಲ್ಲಿ ಮೂರು ಕೊಲೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ
ಕೇವಲ ಹತ್ತು ದಿನಗಳ ಅಂತರದಲ್ಲಿ ಮೂರು ಕೊಲೆಗಳು ನಡೆದುಹೋದ ನಂತರ ಕೋಮುಸೂಕ್ಷ್ಮವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಕೇರಳ ಗಡಿಯಲ್ಲಿನ ಸ್ಥಳಗಳು ಸೇರಿದಂತೆ ಹಲವೆಡೆ ಚೆಕ್ಪೋಸ್ಟ್ಗಳನ್ನು ಹಾಕಲಾಗಿದೆ.
Published: 30th July 2022 09:57 AM | Last Updated: 30th July 2022 01:43 PM | A+A A-

ನಿನ್ನೆ ಮಂಗಲಪೇಟೆಯಲ್ಲಿ ನಡೆದ ಫಾಜಿಲ್ ಅಂತ್ಯಕ್ರಿಯೆ
ಮಂಗಳೂರು: ಕೇವಲ ಹತ್ತು ದಿನಗಳ ಅಂತರದಲ್ಲಿ ಮೂರು ಕೊಲೆಗಳು ನಡೆದುಹೋದ ನಂತರ ಕೋಮುಸೂಕ್ಷ್ಮವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಕೇರಳ ಗಡಿಯಲ್ಲಿನ ಸ್ಥಳಗಳು ಸೇರಿದಂತೆ ಹಲವೆಡೆ ಚೆಕ್ಪೋಸ್ಟ್ಗಳನ್ನು ಹಾಕಲಾಗಿದೆ.
ನಿನ್ನೆ ಶುಕ್ರವಾರ ಸುರತ್ಕಲ್ನಲ್ಲಿ ಮಾರ್ಗ ಮೆರವಣಿಗೆ ನಡೆಸಲಾಯಿತು. ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಿಆರ್ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ. ಯಾವುದೇ ಅಹಿತಕರ ಘಟನೆ, ಗಲಾಟೆಗಳು ನಡೆಯಬಾರದೆಂದು ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಈ ಸಮಯದಲ್ಲಿ ಇತರ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಮುಚ್ಚಲ್ಪಡುತ್ತವೆ.
ಮೊನ್ನೆ ಗುರುವಾರ ಸುರತ್ಕಲ್ ನಲ್ಲಿ ಕೊಲೆಯಾದ 23 ವರ್ಷದ ಯುವಕ ಮೊಹಮ್ಮದ್ ಫಾಜಿಲ್ ಅಂತ್ಯಕ್ರಿಯೆ ನಿನ್ನೆ ಶುಕ್ರವಾರ ನಡೆಯಿತು. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು, ಆದರೆ ಫಾಜಿಲ್ ಅವರ ಕುಟುಂಬವು ರಾಜಕಾರಣಿಗಳನ್ನು ದೂರವಿಡಲು ವಿನಂತಿಸಿತ್ತು.
ಇದನ್ನೂ ಓದಿ: ಮಂಗಳೂರು: ನಾಳೆ ಶಾಂತಿ ಸಭೆ, ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಅಂಗಡಿ ಮುಂಗಟ್ಟು ಬಂದ್
ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್, ಮುಲ್ಕಿ, ಪಣಂಬೂರು ಮತ್ತು ಬಜ್ಪೆಯ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ನಿನ್ನೆ ರಜೆ ಘೋಷಿಸಲಾಗಿತ್ತು. ಫಾಜಿಲ್ ಹತ್ಯೆ ಪ್ರಕರಣದ ತನಿಖೆ ಆರಂಭವಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ದುಷ್ಕರ್ಮಿಗಳು ಬಂದ ಕಾರಿನ ಮಾಲೀಕರನ್ನು ಹುಡುಕುತ್ತಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾತನಾಡಿ, ಫಾಝಿಲ್ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ನಿನ್ನೆ ತಿಳಿಸಿದ್ದರು.
ಅಗ್ನಿಶಾಮಕ ಸುರಕ್ಷತೆಯಲ್ಲಿ ಡಿಪ್ಲೊಮಾ ಮುಗಿಸಿ ಕೆಲಸ ಹುಡುಕುತ್ತಿದ್ದ ಫಾಜಿಲ್ ಈ ಮಧ್ಯೆ ಒಂದಷ್ಟು ಕೆಲಸಗಳನ್ನು ಮಾಡುತ್ತಿದ್ದ. ಆತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಜನರನ್ನು ವಿಚಾರಣೆಗೆ ಕರೆದೊಯ್ಯಲಾಗಿದೆ. ಇದೇ ವೇಳೆ ಬುಧವಾರ ಪ್ರವೀಣ್ ಅಂತ್ಯಕ್ರಿಯೆ ವೇಳೆ ಲಾಠಿ ಚಾರ್ಜ್ಗೆ ಆದೇಶಿಸಿದ್ದ ಬೆಳ್ಳಾರೆ ಪಿಎಸ್ಐ ರುಕ್ಮಯ ನಾಯ್ಕ್ ಮತ್ತು ಸುಬ್ರಹ್ಮಣ್ಯ ಪಿಎಸ್ಐ ಜಂಬುರಾಜ್ ಅವರನ್ನು ಶುಕ್ರವಾರ ಮಂಗಳೂರಿನ ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.