ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಕರ್ನಾಟಕದ ಮೊದಲ ವೈಲ್ಡ್ ಆರ್ಕಿಡೇರಿಯಂ ಸ್ಥಾಪನೆ

ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಆರ್ಕಿಡ್ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ಪ್ರಯತ್ನವಾಗಿ ಅರಣ್ಯ ಇಲಾಖೆ ಆರ್ಕಿಡೇರಿಯಂ ಸ್ಥಾಪಿಸಲು ಸಜ್ಜಾಗಿದೆ. 
ಆರ್ಕಿಡ್ ಸಸ್ಯಗಳು
ಆರ್ಕಿಡ್ ಸಸ್ಯಗಳು

ಹುಬ್ಬಳ್ಳಿ: ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಆರ್ಕಿಡ್ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ಪ್ರಯತ್ನವಾಗಿ ಅರಣ್ಯ ಇಲಾಖೆ ಆರ್ಕಿಡೇರಿಯಂ ಸ್ಥಾಪಿಸಲು ಸಜ್ಜಾಗಿದೆ. 

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್) ಆರ್ಕಿಡೇರಿಯಂ ಸ್ಥಾಪಿಸಲು ಸಜ್ಜಾಗಿದ್ದು, ಜಿಲ್ಲೆಯ ಜೋಯಿಡಾ (ಸೂಪಾ) ತಾಲೂಕಿನ ನುಜ್ಜಿ ಗ್ರಾಮದಲ್ಲಿ ಆರ್ಕಿಡೇರಿಯಂ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಇದು ಪ್ರಕೃತಿ ಆಸಕ್ತರಿಗೆ ಮತ್ತು ಪ್ರವಾಸಿಗರಿಗೆ ಮುಕ್ತವಾಗಲಿದೆ.

ಪ್ರಸ್ತುತ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಕೆಟಿಆರ್‌ನಲ್ಲಿ ಕಂಡುಬರುವ ಸುಮಾರು 40 ಬಗೆಯ ಕಾಡು ಆರ್ಕಿಡ್‌ಗಳನ್ನು ಆರ್ಕಿಡೇರಿಯಂನಲ್ಲಿ ಬೆಳೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ, ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಹೆಚ್ಚಿನ ಆರ್ಕಿಡ್ ಪ್ರಭೇದಗಳನ್ನು ಸೇರಿಸಲಾಗುವುದು ಎಂದು ಸಂರಕ್ಷಣಾ ಜೀವಶಾಸ್ತ್ರಜ್ಞ ಮತ್ತು ಆರ್ಕಿಡೇರಿಯಂ ಯೋಜನೆಯನ್ನು ಸ್ಥಾಪಿಸಲು ಕೆಆರ್‌ಟಿಗೆ ಸಹಾಯ ಮಾಡುತ್ತಿರುವ ಬಯೋಸ್ಪಿಯರ್ಸ್-ಇಕೋಸ್ಪಿಯರ್ ಸಂಸ್ಥಾಪಕ ಸಚಿನ್ ಅನಿಲ್ ಪುಣೇಕರ್ ಹೇಳಿದರು. 

ಪಶ್ಚಿಮ ಘಟ್ಟಗಳು ಶ್ರೀಮಂತ ಆರ್ಕಿಡ್ ಸಸ್ಯ ಪ್ರಬೇಧಗಳ ನೆಲೆಯಾಗಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಅಂಶಿ ಪ್ರದೇಶದಲ್ಲಿ ಕಂಡುಬರುತ್ತವೆ. ಕರ್ನಾಟಕದಲ್ಲಿ ಕಂಡುಬರುವ 170 ಆರ್ಕಿಡ್ ಪ್ರಭೇದಗಳಲ್ಲಿ 80 ಪ್ರಭೇದಗಳು ಅಂಶಿ ಪ್ರದೇಶದಿಂದ ಬಂದವಾಗಿದೆ. ಸುಮಾರು 20 ಕಾಡು ಆರ್ಕಿಡ್‌ಗಳು ಈ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿವೆ. ಆರ್ಕಿಡೇರಿಯಂ ಕಾಡು ಆರ್ಕಿಡ್‌ಗಳ ಪಾರುಗಾಣಿಕಾ (ಸಂರಕ್ಷಿತ) ಮತ್ತು ಪುನರ್ವಸತಿ (ಪುನರ್ ಬೆಳೆಸಬಲ್ಲ) ತಾಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪುಣೇಕರ್ ಹೇಳಿದರು.

“ಆರ್ಕಿಡ್‌ಗಳು ಮುಖ್ಯವಾಗಿ ಎಪಿಫೈಟಿಕ್ ಮತ್ತು ಟೆರೆಸ್ಟ್ರಿಯಲ್ ಎಂಬ ಎರಡು ಪ್ರಭೇದಗಳಲ್ಲಿ ಕಂಡುಬರುತ್ತವೆ. ಹೆಚ್ಚಿನ ಆರ್ಕಿಡ್‌ಗಳು ಮಾನ್ಸೂನ್ ಸಮಯದಲ್ಲಿ ಅರಳುತ್ತವೆ. ಕೆಟಿಆರ್ ಆರ್ಕಿಡೇರಿಯಂನಲ್ಲಿ ಬೆಳೆಯಲು ನಾವು ಕರ್ನಾಟಕ ಮತ್ತು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಇತರ ಭಾಗಗಳಿಂದ ಆರ್ಕಿಡ್‌ಗಳನ್ನು ಸಂಗ್ರಹಿಸುತ್ತಿದ್ದೇವೆ. ಕೆಟಿಆರ್ ಈಗಾಗಲೇ ತನ್ನ ಮುಂಚೂಣಿ ಸಿಬ್ಬಂದಿಗೆ ಆರ್ಕಿಡ್‌ಗಳನ್ನು ಗುರುತಿಸಲು ಮತ್ತು ಅವು ನೆಲದಲ್ಲಿದ್ದರೆ ಅವುಗಳನ್ನು ಸಂರಕ್ಷಿಸಲು ತರಬೇತಿ ನೀಡಲು ಪ್ರಾರಂಭಿಸಿದ್ದೇವೆ. ಸಿಬ್ಬಂದಿ ಆರ್ಕಿಡ್‌ಗಳನ್ನು ಹುಡುಕಲು, ಅವುಗಳನ್ನು ದಾಖಲಿಸಲು ಮತ್ತು ಉನ್ನತ ಅಧಿಕಾರಿಗಳಿಗೆ ವರದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹೊಸ ಆರ್ಕಿಡೇರಿಯಂ ಒಂದು ರೆಪೊಸಿಟರಿಯಲ್ಲಿ ಆರ್ಕಿಡ್ ಪ್ರಭೇದಗಳನ್ನು ಅಧ್ಯಯನ ಮಾಡುವ ಸಂಶೋಧಕರಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಮರಿಯಾ ಕ್ರಿಸ್ಟು ರಾಜಾ ಮಾತನಾಡಿ, ಆರ್ಕಿಡೇರಿಯಂ ಪಶ್ಚಿಮ ಘಟ್ಟಗಳ ಸಸ್ಯವರ್ಗವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳಿಗೆ ಆರ್ಕಿಡ್‌ಗಳ ಎಕ್ಸ್‌ಸಿಟು ಸಂರಕ್ಷಣೆಗೆ ಜ್ಞಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ನಂಬುತ್ತೇವೆ. ಸಾರ್ವಜನಿಕರಿಗೆ, ಇದು ಆರ್ಕಿಡ್‌ಗಳ ಜಗತ್ತನ್ನು ಮತ್ತು ಅವುಗಳ ಪ್ರಾಮುಖ್ಯತೆಯನ್ನು ಪರಿಚಯಿಸುತ್ತದೆ. ಆರ್ಕಿಡ್‌ಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಸ್ತುತಪಡಿಸಲು ನಾವು ಪ್ರಸ್ತುತ ವ್ಯಾಖ್ಯಾನ ಚೌಕಟ್ಟನ್ನು ವಿನ್ಯಾಸಗೊಳಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com