
ಹತ್ಯೆಯಾದ ಮಕ್ಕಳು ಹಾಗೂ ಆರೋಪಿ ಲಕ್ಷ್ಮೀಕಾಂತ್.
ಕಲಬುರಗಿ: ಭೀಕರ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಪುತ್ರಿಯರನ್ನು ಹತ್ಯೆ ಮಾಡಿ ಪೊಲೀಸರ ಮುಂದೆ ಶರಣಾಗಿರುವ ಘಟನೆ ಕಲಬುರಗಿಯಲ್ಲಿ ಮಂಗಳವಾರ ನಡೆದಿದೆ.
ಆರೋಪಿಯನ್ನು ಲಕ್ಷ್ಮೀಕಾಂತ ಎಂದು ಗುರ್ತಿಸಲಾಗಿದ್ದು, ಹತ್ಯೆಯಾದ ಮಕ್ಕಳನ್ನು ಸೋನಿ (11) ಹಾಗೂ ಮಯೂರಿ (9) ಎಂದು ಗುರ್ತಿಸಲಾಗಿದೆ.
ನಗರದ ಬೋವಿಗಲ್ಲಿ ನಿವಾಸಿ ಆಟೋ ಚಾಲಕ ಲಕ್ಷ್ಮೀಕಾಂತ್ ಮಂಗಳವಾರ ತಡರಾತ್ರಿ ವೀರೇಂದ್ರ ಪಾಟೀಲ್ ಎಕ್ಸ್ಟೆನ್ಶನ್ ಪ್ರದೇಶದ ಉದ್ಯಾನದ ಬಳಿ ಇಬ್ಬರು ಹೆಣ್ಣುಮಕ್ಕಳನ್ನು ಆಟೋರಿಕ್ಷಾದಲ್ಲಿ ಕರೆದೊಯ್ದು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಹತ್ಯೆ ಬಳಿಕ ಕಂಗಾಲಾಗಿ ರಾತ್ರಿಯಿಡೀ ಶವಗಳನ್ನು ಹೊತ್ತು ವಿವಿಧ ಪ್ರದೇಶಗಳಲ್ಲಿ ಸಂಚರಿಸಿ, ಮನೆಗೆ ಮರಳಿದ್ದಾನೆ.
ಈ ವೇಳೆ ಮತ್ತಿಬ್ಬರು ಮಕ್ಕಳು ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ. ಬಳಿಕ ಮತ್ತಿಬ್ಬರು ಮಕ್ಕಳು ಹಾಗೂ ಶವಗಳೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಇದನ್ನೂ ಓದಿ: ಆರೋಪಿಗಳನ್ನು ಬಂಧಿಸುವ ಪೊಲೀಸರು ಬಾಡಿ ಕ್ಯಾಮರಾ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಿ: ಡಿಜಿಪಿಗೆ ಹೈಕೋರ್ಟ್ ಸೂಚನೆ
ಲಕ್ಷ್ಮೀಕಾಂತ್ ಅವರ ಪತ್ನಿನಾಲ್ಕು ತಿಂಗಳ ಹಿಂದೆ ಪ್ರಿಯಕರನೊಂದಿಗೆ ಓಡಿಹೋಗಿದ್ದು, ಘಟನೆ ಬಳಿಕ ಲಕ್ಷ್ಮೀಕಾಂತ್ ಖಿನ್ನತಗೆಗೊಳಗಾಗಿದ್ದ. ಘಟನೆ ಬಳಿಕ ಮಕ್ಕಳು ತಮ್ಮ ಅಜ್ಜಿ ಮನೆಯಲ್ಲಿದ್ದು, ನಾಲ್ಕು ದಿನಗಳ ಹಿಂದಷ್ಟೇ ಅವರನ್ನು ಮನೆಗೆ ಕರೆತಂದಿದ್ದ. ಮಂಗಳವಾರ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದು, ಈ ವೇಳೆ ಹತ್ಯೆ ಮಾಡಿದ್ದಾನೆ. ಬುಧವಾರ ಮಧ್ಯಾಹ್ನ ಮೃತದೇಹಗಳೊಂದಿಗೆ ಇನ್ನಿಬ್ಬರು ಮಕ್ಕಳಾದ ನವಿತ್ ಹಾಗೂ ಶ್ರೇಯಾ ಜೊತೆಗೆ ಪೊಲೀಸರ ಮುಂದೆ ಶರಣಾಗಿದ್ದಾನೆ. ಶರಣಾಗತಿ ವೇಳೆ ನವಿತ್ ಹಾಗೂ ಶ್ರೇಯಾಳನ್ನು ನೀವೇ ನೋಡಿಕೊಳ್ಳಬೇಕೆಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಮಹಾತ್ಮ ಬಸವೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಲಕ್ಷ್ಮೀಕಾಂತನನ್ನು ಬಂಧಿಸಿದ್ದಾರೆ.