ಬಟ್ಟೆ ಒಗೆಯುವಾಗ ದುರಂತ: ಕಾಲು ಜಾರಿ ಬಿದ್ದ ತಮ್ಮ, ಆತನ ರಕ್ಷಿಸಲು ಹೋದ ಸಹೋದರಿಯರು ಸೇರಿ 4 ಮಂದಿ ಸಾವು!

ಬಟ್ಟೆ ಒಗೆಯಲು ಗೋಕಟ್ಟೆಗೆ ತೆರಳಿದ್ದ ನಾಲ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಕೆರೆ ನೀರಿನಲ್ಲಿ ಮುಳುಗಿ 4 ಸಾವು
ಕೆರೆ ನೀರಿನಲ್ಲಿ ಮುಳುಗಿ 4 ಸಾವು

ವಿಜಯನಗರ: ಬಟ್ಟೆ ಒಗೆಯಲು ಗೋಕಟ್ಟೆಗೆ ತೆರಳಿದ್ದ ನಾಲ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡದಲ್ಲಿ ಈ ದುರ್ಘಟನೆ ನಡೆದಿದ್ದು, ಅಶ್ವಿನಿ (17), ಅಭಿಷೇಕ್ (14), ಕಾವ್ಯಾಂಜಲಿ (19) ಮತ್ತು ಅಪೂರ್ವ (14) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮೃತರು ಬಟ್ಟೆ ತೊಳೆಯಲು ಬುಧವಾರ ಚನ್ನಹಳ್ಳಿ ತಾಂಡದ ಸಮೀಪದಲ್ಲಿರುವ ಗೋಕಟ್ಟೆಗೆ ತೆರಳಿದ್ದರು. 

ಆ ಸಂದರ್ಭದಲ್ಲಿ ಮೊದಲಿಗೆ ಅಭಿಷೇಕ್ ಎಂಬುವರು ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದಾನೆ. ನೀರಿನಲ್ಲಿ ಬಿದ್ದ ಅಭಿಷೇಕನನ್ನು ರಕ್ಷಿಸಲು ಹೋಗಿ ಕಾವ್ಯಾಂಜಲಿ ಸಹ ಆಯಾತಪ್ಪಿ ನೀರಿನಲ್ಲಿ ಬಿದ್ದಿದ್ದಾಳೆ. ಕಾವ್ಯಾಂಜಲಿ ಉಳಿಸಲು ಹೋಗಿ ಅಪೂರ್ವ ಮತ್ತು ಅಶ್ವಿನಿ ಇವರು ಸಹ ನೀರಿನಲ್ಲಿ ಮುಳುಗಿದ್ದಾರೆ. ಒಬ್ಬರ ನಂತರ ಒಬ್ಬರಂತೆ ಮೂವರು ಯುವತಿಯರು ನೀರಿಗೆ ಬಿದ್ದಿದ್ದು, ಒಬ್ಬ ಬಾಲಕ ಸೇರಿ ಒಟ್ಟು ನಾಲ್ಕು ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ನುರಿತು ಮುಳುಗು ತಜ್ಞರ ನೆರವಿನಿಂದ ಶವಗಳನ್ನು ಮೇಲೆಕ್ಕೆತ್ತಿದ್ದಾರೆ. ಮೃತ ದೇಹಗಳನ್ನು ಘಟನಾ ಸ್ಥಳದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಆಯಾ ಪೋಷಕರಿಗೆ ಒಪ್ಪಿಸಲಾಗಿದೆ, ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com