ಬೆಂಗಳೂರು: ಕ್ಲಾಸ್ ಟೆಸ್ಟ್ನಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿಬಿದ್ದ ಕಾರಣಕ್ಕೆ ತರಗತಿಯಿಂದ ಹೊರಗೆ ಕಳುಹಿಸಿದ ಕಾರಣಕ್ಕೆ ನೊಂದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಅಪಾರ್ಟ್ಮೆಂಟ್ನ 14ನೇ ಮಹಡಿಯಿಂದ ಕೆಳಗಡೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೆಗಡೆ ನಗರದಲ್ಲಿ ಮಂಗಳವಾರ ನಡೆದಿದೆ. ಮೊಯಿನ್ ಖಾನ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಮಂಗಳವಾರ ಶಾಲೆಯಲ್ಲಿ ಮಧ್ಯಂತರ ಪರೀಕ್ಷೆಗಳು ನಡೆಯುತ್ತಿದ್ದವು. ಈ ವೇಳೆ ಮೊಯಿನ್ ನಕಲು ಮಾಡುತ್ತಿರುವಾಗ ಸಿಕ್ಕಿದ್ದಾನೆ. ಶಿಕ್ಷಕರು ಮೋಹಿನ್ನನ್ನು ಕ್ಲಾಸ್ ರೂಮ್ನಿಂದ ಹೊರಗೆ ಕಳುಹಿಸಿದ್ದಾರೆ. ಇದರಿಂದ ನೊಂದ ಮೊಯಿನ್ ಬೆಳಗ್ಗೆ 11 ಗಂಟೆಗೆ ಶಾಲೆಯಿಂದ ಹೊರಗೆ ಬಂದಿದ್ದಾನೆ. ತನ್ನ ಮನೆ ಎದುರಿನ ಅಪಾರ್ಟ್ಮೆಂಟ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೊಯಿನ್ ಕಟ್ಟಡದ ಮೇಲಿನಿಂದ ಜಿಗಿಯುವ ದೃಶ್ಯಗಳ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ದೃಶ್ಯ ಸೆರೆ ಹಿಡಿಯುತ್ತಿದ್ದ ವ್ಯಕ್ತಿ ತುಂಬಾ ದೂರದಲ್ಲಿರುವ ಕಾರಣ ಅವರಿಂದ ಏನು ಮಾಡಲು ಸಾಧ್ಯವಾಗಿಲ್ಲ.
ಮೊಯಿನ್ ಖಾನ್ ಸಾವಿಗೆ ಆತ ವ್ಯಾಸಂಗ ಮಾಡುತ್ತಿದ್ದ ಹೆಗಡೆನಗರ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಕ್ಕಳಿಗೆ ಸೂಕ್ತ ರಕ್ಷಣೆ ಕಲ್ಪಿಸದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಮೃತ ಮೊಯಿನ್ ತಂದೆ ಮೊಹಮದ್ ನೂರ್ ನೀಡಿರುವ ದೂರು ಆಧರಿಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಆರ್ ಆರ್ ಸಿಗ್ನೇಚರ್ ಅಪಾರ್ಟ್ಮೆಂಟ್ ಒಳಗೆ ಅಪರಿಚಿತರಿಗೆ ಪ್ರವೇಶ ನೀಡಲ್ಲ. ಆದ್ರೆ ಬಾಲಕ ಮೊಯಿನ್ ಒಳಗೆ ಹೋಗಿದ್ದು ಹೇಗೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement