ಏಕರೂಪ ನಾಗರಿಕ ಸಂಹಿತೆ ಕುರಿತು ಇತರೆ ರಾಜ್ಯಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ: ಸಿಎಂ ಬೊಮ್ಮಾಯಿ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ರಾಜ್ಯದಲ್ಲಿ ಜಾರಿಗೆ ತರುವುದಕ್ಕೂ ಮುನ್ನ ಇತರೆ ರಾಜ್ಯಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಮೈಸೂರು: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ರಾಜ್ಯದಲ್ಲಿ ಜಾರಿಗೆ ತರುವುದಕ್ಕೂ ಮುನ್ನ ಇತರೆ ರಾಜ್ಯಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕರೂಪ ನಾಗರೀಕ ಸಂಹಿತೆ ಕುರಿತು ಇತರೆ ರಾಜ್ಯಗಳಲ್ಲಿನ ಬೆಳವಣಿಗೆಗಳ ಮೇಲೆ ನಿಗಾ ಇರಿಸಲಾಗಿದೆ. ರಾಜ್ಯದಲ್ಲಿ ಯುಸಿಸಿ ಜಾರಿಗೆ ತರುವುದಕ್ಕೂ ಮುನ್ನ ಇತರೆ ರಾಜ್ಯಗಳ ಬೆಳವಣಿಗೆ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ಇತರೆ ರಾಜ್ಯಗಳಲ್ಲಿ ಯುಸಿಸಿ ಜಾರಿಗೊಳಿಸಲು ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯದಲ್ಲಿ ಯುಸಿಸಿ ಜಾರಿಗೆ ತರುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಥವಾ ಇತರ ಯಾವುದೇ ಸಚಿವರು ನನ್ನೊಂದಿಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬಳಿಕ ಸರ್ಕಾರವು ಕರಾವಳಿ ಭಾಗದಿಂದ ಮಾತ್ರ ಭತ್ತವನ್ನು ಖರೀದಿಸುತ್ತದೆ ಎಂಬ ರೈತರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮಂಗಳೂರಿನಲ್ಲಿ ಮಾತ್ರ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂಬ ತಪ್ಪು ಕಲ್ಪನೆ ರೈತರಲ್ಲಿದೆ, ಕರಾವಳಿ ಭಾಗವು ಕುಚಲಕ್ಕಿ ಬಳಸುವುದರಿಂದ ಈ ರೀತಿ ಮಾಡಲಾಗಿದೆ. ಶೀಘ್ರದಲ್ಲೇ ಸರ್ಕಾರ ಮೈಸೂರು, ಮಂಡ್ಯ, ಗಂಗಾವತಿ ಹಾಗೂ ರಾಜ್ಯದ ವಿವಿಧೆಡೆ ಖರೀದಿ ಕೇಂದ್ರಗಳನ್ನು ತೆರೆಯಲಿದೆ ಎಂದು ಹೇಳಿದರು.

ಈ ನಡುವೆ 135 ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಅದರ ಸಂರಕ್ಷಣೆಗಾಗಿ ತಜ್ಞರು ವರ್ಷಕ್ಕೆ 500 ಕೋಟಿ ರೂ.ಗಳ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ಆರ್ಥಿಕ ಪರಿಸ್ಥಿತಿ ಆಧರಿಸಿ ಪ್ರಸ್ತಾವನೆಯನ್ನು ಪರಿಗಣಿಸಲಾಗುವುದು ಎಂದರು.

ಇದೇ ವೇಳೆ, ವೆಬ್‌ಸೈಟ್‌ನಿಂದ 300 ರೂ.ಗೆ ಡೌನ್‌ಲೋಡ್ ಮಾಡಬಹುದಾದ ಮತದಾರರ ಗುರುತಿನ ಚೀಟಿಯ ಕುರಿತು ಪ್ರತಿಕ್ರಿಯಿಸಿದ ಅವರು, ಕಾರ್ಡ್ ಡೌನ್‌ಲೋಡ್ ಮಾಡಬಹುದಾದ ಹಲವು ವೆಬ್‌ಸೈಟ್‌ಗಳಿವೆ, ಅದನ್ನು ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದೆ, ಇದರಲ್ಲಿ ಮಂಗಳೂರು ಸ್ಫೋಟ ಪ್ರಕರಣದಲ್ಲಿ ಮೊಹಮ್ಮದ್ ಶಾರಿಕ್ ಅವರಿಗೂ ವೋಟರ್ ಐಡಿ ಸಿಕ್ಕಿರುವ ಕುರಿತಂತೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com