ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಎಸ್ಸಿ/ಎಸ್ಟಿಗಳ ಹಾಸ್ಟೆಲ್ನಲ್ಲಿ ಸಹಾಯಕಿಯೊಬ್ಬರು ಶುಕ್ರವಾರ ರಾತ್ರಿ ತೆಂಗಿನ ಚಿಪ್ಪಿನ ಸೌಟ್'ನಲ್ಲಿ ಆಹಾರ ಬಡಿಸಿರುವುದನ್ನು ಖಂಡಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕುಲಪತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಘಟನೆಯ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಯನ್ನು ಖಂಡಿಸಿ ಎಸ್ಎಫ್ಐ ಶನಿವಾರ ಪ್ರತಿಭಟನೆ ನಡೆಸಿತು.
ಕೆಲ ವಿದ್ಯಾರ್ಥಿಗಳು ಎಸ್ಸಿ/ಎಸ್ಟಿ ಸಮುದಾಯಗಳಿಂದ ಬಂದವರಾಗಿರುವುದರಿಂದ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ನಡುವೆ, ವಿದ್ಯಾರ್ಥಿಗಳು ಹಾಸ್ಟೆಲ್ನ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಹಾಸ್ಟೆಲ್ ಅನ್ನು ಸರಿಯಾಗಿ ಮೇಲ್ವಿಚಾರಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಕೆಲ ಹೊರಗಿನವರು ಹಾಸ್ಟೆಲ್ನಲ್ಲಿ ಆಶ್ರಯ ಪಡೆದಿದ್ದು, ಅವರು ಇಲ್ಲಿನ ಪರಿಸ್ಥಿತಿಯನ್ನು ಹದಗೆಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಆರೋಪವನ್ನು ತಳ್ಳಿಹಾಕಿರುವ ಕುಲಪತಿ ಡಾ.ಎಂ.ವೆಂಕಟೇಶ್ವರಲು, ಆಹಾರ ಬಡಿಸುವ ಕ್ರಮಕ್ಕೂ ಜಾತಿ ತಾರತಮ್ಯಕ್ಕೂ ಯಾವುದೇ ಸಂಬಂಧವಿಲ್ಲ. ತಾರತಮ್ಯ ಆರೋಪ ಕುರಿತು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಘಟನೆ ಕುರಿತು ಮಾತನಾಡಿರುವ ವಾರ್ಡನ್ ಜಯಶಂಕರ್, ಸ್ಪೂನ್ಗಳು ಲಭ್ಯವಿದ್ದಾಗ ಸಹಾಯಕಿ ತೆಂಗಿನ ಚಿಪ್ಪಿನಿಂದ ಆಹಾರ ಪೂರೈಸಲು ಕಾರಣವೇನು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
Advertisement