ಲಾಲ್‌ಬಾಗ್‌: 'ಗುತ್ತಿಗೆ ಜಮೀನಿನ ನವೀಕರಣ ರದ್ದು ಮಾಡಿ' ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಲಾಲ್‌ಬಾಗ್ ಆವರಣದಲ್ಲಿರುವ ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್‌ಗೆ ನೀಡಲಾಗಿದ್ದ 1 ಎಕರೆ 29 ಗುಂಟೆ ಜಮೀನಿನ ಗುತ್ತಿಗೆಯನ್ನು ರದ್ದು ಮಾಡುವಂತೆ ತೋಟಗಾರಿಕೆ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲಾಲ್‌ಬಾಗ್ ಆವರಣದಲ್ಲಿರುವ ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್‌ಗೆ ನೀಡಲಾಗಿದ್ದ 1 ಎಕರೆ 29 ಗುಂಟೆ ಜಮೀನಿನ ಗುತ್ತಿಗೆಯನ್ನು ರದ್ದು ಮಾಡುವಂತೆ ತೋಟಗಾರಿಕೆ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 

ನರ್ಸರಿಗೆ ಏಕಾಏಕಿ ಬೀಗ ಹಾಕಿರುವುದರಿಂದ ಅಕ್ಟೋಬರ್ 21ರಿಂದ ರೂ.1 ಕೋಟಿಯಿಂದ 1.5 ಕೋಟಿಯಷ್ಟು ಗಿಡಗಳಿಗೆ ನೀರುಣಿಸಲಾಗದೇ ಸೊಸೈಟಿಯ ಆದಾಯಕ್ಕೆ ನಷ್ಟ ಉಂಟಾಗಿದೆ. ಹೀಗಾಗಿ ತಕ್ಷಣವೇ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕು ಎಂದು ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಗೋವಿಂದ್ ಮತ್ತು ಸದಸ್ಯ ನಿರ್ದೇಶಕ ಆರ್ ರವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಮಧ್ಯಂತರ ಆದೇಶ ನೀಡಿದ್ದು, ಪ್ರಕರಣವು ಇತ್ಯರ್ಥಗೊಳ್ಳುವವರೆಗೂ ಲಾಲ್‌ಬಾಗ್‌ನಲ್ಲಿ ಕಾರ್ಯಚಟುವಟಿಕೆ ಮುಂದುವರೆಸಲು ಸೊಸೈಟಿಗೆ ನ್ಯಾಯಲಯ ಅನುಮತಿ ನೀಡಿದೆ.

ಸರ್ಕಾರವು 1991ರ ಫೆಬ್ರವರಿಯಿಂದ ಜಾರಿಗೆ ಬರುವಂತೆ ಲಾಲ್‌ಬಾಗ್‌ನಲ್ಲಿ ಒಂದು ಎಕರೆ 29 ಗುಂಟೆ ಭೂಮಿಯನ್ನು 25 ವರ್ಷಗಳ ಅವಧಿಗೆ ನರ್ಸರಿ ಸೇವೆಗಳನ್ನು ನಡೆಸಲು ಗುತ್ತಿಗೆ ರೂಪದಲ್ಲಿ ಪರವಾನಗಿ ನೀಡಿತ್ತು. ಗುತ್ತಿಗೆ ಅವಧಿಯು 2016ರಲ್ಲಿ ಪೂರ್ಣಗೊಂಡಿತ್ತು.

ಇದಕ್ಕೂ ಮುನ್ನ ಸೊಸೈಟಿ ಸರ್ಕಾರಕ್ಕೆ ಪತ್ರ ಬರೆದು ಮತ್ತೆ 25 ವರ್ಷಗಳವರೆಗೆ ಗುತ್ತಿಗೆ ನವೀಕರಿಸಲು ಮನವಿ ಮಾಡಿತ್ತು. ಆದರೆ, ಸರ್ಕಾರವು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಆದರೆ, 2016 ಮತ್ತು 2022ರ ನಡುವೆ ಸರ್ಕಾರಕ್ಕೆ ಅಗತ್ಯ ತೆರಿಗೆಗಳನ್ನು ಪಾವತಿಸಲಾಗಿದೆ. ಇದೀಗ ಗುತ್ತಿಗೆ ರದ್ದು ಕುರಿತು ಸರ್ಕಾರ ಏಕಾಏಕಿ ನಿರ್ಧಾರ ತೆಗೆದುಕೊಂಡಿದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com