ಗಣೇಶ ಮೆರವಣಿಗೆ ವೇಳೆ ಅಬ್ಬರದ ಮ್ಯೂಸಿಕ್ ಹಾಕದಂತೆ ಜೆಸ್ಕಾಂ ಸಿಬ್ಬಂದಿಗೆ ವಾರ್ನಿಂಗ್: ಪೊಲೀಸ್ ಸ್ಟೇಷನ್ ಗೆ 'ಪವರ್' ಕಟ್!
ಹುಬ್ಬಳ್ಳಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ತಡರಾತ್ರಿ ಡಿ.ಜೆ. ಬಳಸಿ ನಿಯಮ ಉಲ್ಲಂಘಿಸಿದ ಜೆಸ್ಕಾಂ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಜೆಸ್ಕಾಂ ಸಿಬ್ಬಂದಿ ಹೊಸಪೇಟೆ ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸಿದ್ದರು.
ಶುಕ್ರವಾರ ತಡರಾತ್ರಿ ಜೆಸ್ಕಾಂ ಸಿಬ್ಬಂದಿ ಗಣಪನ ಮೂರ್ತಿ ವಿಸರ್ಜನೆ ವೇಳೆ ನಿಯಮ ಮೀರಿ ಡಿ.ಜೆ. ಹಾಕಿಕೊಂಡು ಕುಣಿಯುತ್ತಿದ್ದರು. ಅದನ್ನು ತಡೆದ ಪೊಲೀಸರು, ಜೆಸ್ಕಾಂ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಸಿಟ್ಟಾದ ಜೆಸ್ಕಾಂ ಸಿಬ್ಬಂದಿ ಗಂಟೆಗೂ ಹೆಚ್ಚು ಕಾಲ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.
ಯುಪಿಎಸ್ ಸಂಪೂರ್ಣ ಚಾರ್ಜ್ ಆಗಿದ್ದರಿಂದ ಠಾಣೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದು ಪೊಲೀಸರಿಗೆ ತಿಳಿದಿರಲಿಲ್ಲ. ಕೆಲವರು ಹೊರಗೆ ಬಂದು ನೋಡಿದಾಗ ಯಾರೋ ವಿದ್ಯುತ್ ಸಂಪರ್ಕ ತೆಗೆದಿದ್ದರು.
ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಜೆಸ್ಕಾಂ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯ ಮುಂದೆ ಜೆಸ್ಕಾಂ ಸಿಬ್ಬಂದಿಯವರು ಡಿ.ಜೆ. ಹಾಕಿಕೊಂಡು ಕುಣಿಯುತ್ತಿದ್ದರು. ಇದನ್ನು ತಡೆದು ಪ್ರಶ್ನಿಸಿದ ಪೊಲೀಸರು, ಅವರಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ಜೆಸ್ಕಾಂ ಸಿಬ್ಬಂದಿಗಳು ಬಡಾವಣೆ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಮುಂಜಾನೆಯವರೆಗೂ ವಿದ್ಯುತ್ ಇಲ್ಲದೇ ಠಾಣೆಯಲ್ಲಿದ್ದ ಸಿಬ್ಬಂದಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಚಿವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜೆಸ್ಕಾಂನ ಮೇಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಾಲೋಚನೆ ನಡೆಸಿ, ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲವೆಂದು ಹೇಳಿಕೆ ನೀಡಿದ ನಂತರ ಪೊಲೀಸ್ ಠಾಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸಚಿವ ಆನಂದ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು ಠಾಣೆಗೆ ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನ ಪಡಿಸಬೇಕಾಯಿತು.
ವಿದ್ಯುತ್ ಕಡಿತಗೊಳಿಸಿದ್ದಕ್ಕಾಗಿ ಗೆಸ್ಕಾಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ಎರಡೂ ಇಲಾಖೆಗಳು ಸರ್ಕಾರಕ್ಕಾಗಿ ಕೆಲಸ ಮಾಡುತ್ತವೆ ಹೀಗಾಗಿ ಇಲಾಖೆಗಳ ನಡುವೆ ಸಹಕಾರದ ಅಗತ್ಯವಿದೆ. ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ