ರಾಯಚೂರು: ಮಸ್ಕಿ ತಾಲೂಕಿನ ಸಂತೆಕಲ್ಲೂರು ಗ್ರಾಮದಲ್ಲಿ ಟ್ಯೂಷನ್ ತರಗತಿಗೆ ಹಾಜರಾಗುತ್ತಿದ್ದ ಖಾಸಗಿ ಶಾಲೆಯೊಂದರಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ಎಂಟು ವರ್ಷದ ಬಾಲಕನಿಗೆ ನಿಗೂಢವಾಗಿ ಸುಟ್ಟ ಗಾಯಗಳಾಗಿವೆ.
ಬಾಲಕ ಮಿತ್ತಕಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರೂ ಸಂತೆಕಲ್ಲೂರಿನ ಘನಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಚಿಂಗ್ ತರಗತಿಗೆ ಹಾಜರಾಗುತ್ತಿದ್ದ.
ಘಟನೆ ಸೆಪ್ಟೆಂಬರ್ 2ರಂದು ನಡೆದಿದ್ದರೂ ಈಗ ಹೊರಬಿದ್ದಿದೆ. ಸೆಪ್ಟೆಂಬರ್ 2 ರಂದು ಸಂಜೆ, ಬಾಲಕ ಅಖಿಲ್ ಶೌಚಾಲಯಕ್ಕೆ ತೆರಳಿದ್ದ. ತಣ್ಣೀರು ಎಂದು ಭಾವಿಸಿ ನಲ್ಲಿ ತೆರೆದಿದ್ದಾನೆ, ಆದರೆ ನಲ್ಲಿಯಲ್ಲಿ ಬಿಸಿ ನೀರು ಬಂದಿದೆ. ಹೀಗಾಗಿ ಶೇ. 40 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ, ಸದ್ಯ ಬಾಲಕನನ್ನು ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳು ಮತ್ತು ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯರು ಆಸ್ಪತ್ರೆಗೆ ತೆರಳಿ ಅಖಿಲ್ ಮತ್ತು ಆತನ ತಂದೆ ವೆಂಕಟೇಶ್ ಅವರನ್ನು ಭೇಟಿ ಮಾಡಿದರು. ಸೆಪ್ಟಂಬರ್ 2 ರಂದು ಅಖಿಲ್ ಶೌಚಾಲಯಕ್ಕೆ ತೆರಳಿದ್ದ ಆಗ ಬಿಸಿನೀರು ಬಿದ್ದು ಗಾಯಗಳಾಗಿವೆ ಎಂದು ಅಧಿಕಾರಿಗಳು ಉನ್ನತಾಧಿಕಾರಿಗಳಿಗೆ ಪತ್ರ ಕಳುಹಿಸಿದ್ದಾರೆ.
ಆದರೆ ಘಟನೆಯ ನಂತರ ಹುಲಿಗೆಪ್ಪ ಎಂಬ ಶಿಕ್ಷಕ ರಜೆಯ ಮೇಲೆ ತೆರಳಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಟ್ಯಾಪ್ ತೆರೆದಾಗ ಬಾಲಕನ ಎದೆ ಮತ್ತು ಬೆನ್ನಿನ ಮೇಲೆ ಸುಟ್ಟಗಾಯಗಳು ಹೇಗೆ ಸಂಭವಿಸಿದವು ಎಂಬ ಪ್ರಶ್ನೆ ಮೂಡಿವೆ.
ಶುಕ್ರವಾರ ಲಿಂಗಸೂಗೂರಿನ ಆಸ್ಪತ್ರೆಗೆ ಭೇಟಿ ನೀಡಿದ್ದ ಮಕ್ಕಳ ಹಕ್ಕುಗಳ ಹೋರಾಟಗಾರ ಮೋಹನ್ ಭೇಟಿ ನೀಡಿ, ಅಖಿಲ್ನ ತಾಯಿಯೊಂದಿಗೆ ಮಾತನಾಡಿದ್ದಾರೆ. ಘಟನೆ ಸಂಬಂಧ ನನಗೆ ಕೆಲವು ಅನುಮಾನಗಳಿವೆ. ಹುಡುಗನ ಪೋಷಕರು ಮತ್ತು ಶಾಲೆಯ ಅಧಿಕಾರಿಗಳು ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಶಾಲಾ ಆವರಣದಲ್ಲಿಯೇ ಬಾಲಕನಿಗೆ ಅನುಮಾನಾಸ್ಪದವಾಗಿ ಗಂಭೀರ ಗಾಯಗಳಾಗಿದ್ದು, ಮಕ್ಕಳ ಕಲ್ಯಾಣ ಸಮಿತಿ ಹಾಗೂ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ತನಿಖೆ ನಡೆಸಬೇಕು ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನ ಕಾರ್ಯದರ್ಶಿ ವಿಠಲ ಚಿಕಣಿ ಒತ್ತಾಯಿಸಿದ್ದಾರೆ.
ಲಿಂಗಸೂಗೂರು ಬಿಇಒ ಹುಂಬಣ್ಣ ಅವರು ಎರಡೂ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಬಾಲಕನಿಗೆ ಬೇರೆ ಸಂಸ್ಥೆಯಲ್ಲಿ ಓದಲು ಅನುಮತಿ ನೀಡಿದ್ದು ಹೇಗೆ ಎಂದು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಪ್ರಶ್ನಿಸಿದ್ದಾರೆ.
Advertisement