ಮಗು ಮಾರಾಟ ಮಾಡಿದ ಕೃತ್ಯವನ್ನು ಬಯಲಿಗೆಳೆದ ಮೈಸೂರು ವಿವಿ ತೃತೀಯಲಿಂಗಿ ಪಿಎಚ್‌.ಡಿ ವಿದ್ಯಾರ್ಥಿ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌.ಡಿ ವ್ಯಾಸಂಗ ಮಾಡುತ್ತಿರುವ ತೃತೀಯಲಿಂಗಿಯೊಬ್ಬರು ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಬಡ ದಂಪತಿ ನವಜಾತ ಶಿಶುವನ್ನು ಮಾರಾಟ ಮಾಡಿರುವ ಘಟನೆಯನ್ನು ಬಹಿರಂಗಪಡಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌.ಡಿ ವ್ಯಾಸಂಗ ಮಾಡುತ್ತಿರುವ ತೃತೀಯಲಿಂಗಿಯೊಬ್ಬರು ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಬಡ ದಂಪತಿ ನವಜಾತ ಶಿಶುವನ್ನು ಮಾರಾಟ ಮಾಡಿರುವ ಘಟನೆಯನ್ನು ಬಹಿರಂಗಪಡಿಸಿದ್ದಾರೆ.

‘ಮೈಸೂರು-ಚಾಮರಾಜನಗರ ಜಿಲ್ಲೆಗಳ ತೃತೀಯಲಿಂಗಿ ಸಮುದಾಯಗಳು: ಬದುಕು ಮತ್ತು ಹೋರಾಟದ ಕುರಿತು ವಿಮರ್ಶಾತ್ಮಕ ಅಧ್ಯಯನ’ ಎಂಬ ವಿಷಯದ ಕುರಿತು ಪಿಎಚ್‌.ಡಿ ಮಾಡುತ್ತಿರುವ ದೀಪಾ ಬುದ್ಧೆ ಅವರು ಸಮೀಕ್ಷೆಗಾಗಿ ಚಾಮರಾಜನಗರಕ್ಕೆ ತೆರಳಿದ್ದಾಗ ಮಗುವನ್ನು 50,000 ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂಬ ವಿಚಾರ ತಿಳಿದುಬಂದಿದೆ.

ಈ ಪ್ರದೇಶದಲ್ಲಿ ಮಗು ಮಾರಾಟ ಮಾಡುವ ದಂಧೆ ಚಾಲ್ತಿಯಲ್ಲಿದೆ ಎಂಬುದನ್ನು ಸಾಬೀತುಪಡಿಸಲು ದೀಪಾ ಸ್ವಯಂಪ್ರೇರಣೆಯಿಂದ ಹೆಚ್ಚಿನ ಮಾಹಿತಿ ಮತ್ತು ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಮಗುವಿನ ತಾಯಿಗೆ ನ್ಯಾಯ ಕೋರಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

25 ದಿನಗಳ ಹಿಂದೆ ಹೋಟೆಲ್ ಸಿಬ್ಬಂದಿ ಬಸವ ಮತ್ತು ನಾಗವೇಣಿ ದಂಪತಿಗೆ ಮಗು ಜನಿಸಿತ್ತು. ನಾಗವೇಣಿಯ ಒಪ್ಪಿಗೆಯ ವಿರುದ್ಧ ಬಸವ ಗಾಳಿಪುರದ ವ್ಯಕ್ತಿಯೊಬ್ಬನಿಗೆ ಮಗುವನ್ನು ಮಾರಲು ನಿರ್ಧರಿಸಿದ್ದರು. ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉಲ್ಲೇಖಿಸಿ ಬಲವಂತವಾಗಿ ಮಗು ಮಾರುವ ಒಪ್ಪಂದಕ್ಕೆ ಒಪ್ಪಿಗೆ ನೀಡುವಂತೆ ಮಾಡಿದ್ದಾಗಿ ನಾಗವೇಣಿ ನಂತರ ಬಹಿರಂಗಪಡಿಸಿದ್ದಾರೆ.

ಮಗುವನ್ನು ಉಳಿಸಲು ಪ್ರಯತ್ನಿಸುತ್ತಿರುವ ಸಂಶೋಧನಾ ವಿದ್ಯಾರ್ಥಿ

<strong>ದೀಪಾ ಬುದ್ಧೆ</strong>
ದೀಪಾ ಬುದ್ಧೆ

ಅನಾಥೆ ಹಾಗೂ ಹೃದ್ರೋಗಿಯಾಗಿರುವ ನಾಗವೇಣಿ ಮಾತನಾಡಿ, ಸಾಲ ಮರುಪಾವತಿ ಮಾಡುವುದರ ಜೊತೆಗೆ ನನ್ನ ಹೃದಯ ಸಂಬಂಧಿ ಚಿಕಿತ್ಸೆ ವೆಚ್ಚವನ್ನೂ ಭರಿಸಬೇಕಾಗಿದೆ. ಅನಾಥೆಯಾಗಿದ್ದ ನನಗೆ ಮೊದಲ ಮಗುವಿನ ಚಿಂತೆ ಕಾಡುತ್ತಿತ್ತು. ಈಗ ನನ್ನ ಎರಡನೇ ಮಗುವನ್ನು ಮಾರಾಟ ಮಾಡಲಾಗಿದೆ' ಎಂದು ತಿಳಿಸಿದ್ದಾರೆ. ಅನಕ್ಷರಸ್ಥೆಯಾಗಿರುವ ಆಕೆ ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಲು ಹೆದರುತ್ತಿದ್ದಳು.

ಈ ಘಟನೆಯನ್ನು ನಾಗವೇಣಿಯ ಸಹೋದರಿ ನಂದಿತಾ ತೃತೀಯಲಿಂಗಿಯಾಗಿರುವ ದೀಪಾ ಅವರಿಗೆ ವಿವರಿಸಿದ್ದಾರೆ. ದೀಪಾ ಈಗ ಈ ಅಪರಾಧವನ್ನು ಬಹಿರಂಗಪಡಿಸಲು ಆಡಿಯೊ ಕ್ಲಿಪ್ ಸೇರಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

30,000 ಸಾಲವನ್ನು ಹೊಂದಿದ್ದ ಬಸವ, ನವಜಾತ ಶಿಶುವನ್ನು ಮತ್ತೋರ್ವ ದಂಪತಿಗೆ ಹಸ್ತಾಂತರಿಸಿದ್ದಾರೆ. ಆಗ ಮಗುವಿಗೆ 10 ದಿನವಾಗಿತ್ತು. ನಾಗವೇಣಿ ಮಗುವನ್ನು ವಾಪಸ್ಸು ಕೇಳಿದಾಗ ಬಸವ ಆಕೆಯ ಮೇಲೆ ಹಲ್ಲೆ ನಡೆಸಿದ್ದಾಗಿ' ದೀಪಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

'ನಾನು ಬಸವನಿಗೆ ಆತನ ಅಪರಾಧ ಕೃತ್ಯದ ಕಾನೂನು ಪರಿಣಾಮಗಳ ಬಗ್ಗೆ ಹೇಳಿದೆ ಮತ್ತು ಮಗುವನ್ನು ಮೂರು ದಿನಗಳಲ್ಲಿ ಮರಳಿ ತರಲು ಹೇಳಿದೆ. ಆದರೆ ಇಲ್ಲಿಯವರೆಗೂ ಅದನ್ನು ಮಾಡಿಲ್ಲ' ಎಂದು ದೀಪಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com