social_icon

ಮಂಗಳೂರಿನ ಎಸ್‌ಡಿಪಿಐ, ಪಿಎಫ್‌ಐ ಕಚೇರಿ ಮೇಲೆ ಎನ್‌ಐಎ ದಾಳಿ

ಮಂಗಳೂರಿನಲ್ಲಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಗುರುವಾರ ಬೆಳಗ್ಗೆ ದಾಳಿ ನಡೆಸಿದೆ.

Published: 22nd September 2022 09:25 AM  |   Last Updated: 22nd September 2022 01:44 PM   |  A+A-


PFI activist shouts slogans against NIA

ಎನ್ಐಎ ದಾಳಿ ಖಂಡಿಸಿ ಗೋ ಬ್ಯಾಕ್ ಎನ್ಐಎ ಎಂದು ಘೋಷಣೆ ಕೂಗುತ್ತಿರುವ ಪಿಎಫ್ಐ ಕಾರ್ಯಕರ್ತರು

Posted By : Sumana Upadhyaya
Source : Online Desk

ಮಂಗಳೂರು:  ಮಂಗಳೂರಿನಲ್ಲಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಗುರುವಾರ ಬೆಳಗ್ಗೆ ದಾಳಿ ನಡೆಸಿದೆ.

ಬಿಗಿ ಭದ್ರತೆಯ ನಡುವೆ ಎಸ್‌ಡಿಪಿಐ ಕಚೇರಿ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಹಾರದಲ್ಲಿ ರಿಯಾಜ್ ಫರಂಗಿಪೇಟೆ ಸೇರಿದಂತೆ ಕೆಲವು ಎಸ್‌ಡಿಪಿಐ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗೆ ಅಡ್ಡಿಪಡಿಸಲು ಸಂಚು ರೂಪಿಸಿದ ಆರೋಪ ಹೊತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ಹೆಚ್ಚಾಗಿ ನಡೆದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಆದರೆ ಅದೇ ಇನ್ನೂ ದೃಢಪಟ್ಟಿಲ್ಲ.

ಇದೇ ವೇಳೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾತನಾಡಿ, ಪ್ರತಿಭಟನೆ ನಡೆಸುತ್ತಿದ್ದ ಹಲವು ಎಸ್ ಡಿಪಿಐ ಮತ್ತು ಪಿಎಫ್ ಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ ಕೆಲವು ಎಸ್‌ಡಿಪಿಐ ಮತ್ತು ಪಿಎಫ್‌ಐ ಸದಸ್ಯರು ಕಚೇರಿ ಎದುರು ಪ್ರತಿಭಟನೆ ನಡೆಸಿ ದಾಳಿಯನ್ನು ಖಂಡಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾವೂರು, ಜೋಕಟ್ಟೆ ಮತ್ತು ಉಪ್ಪಿನಂಗಡಿಯಂತಹ ಇತರ ಕೆಲವು ಸ್ಥಳಗಳಲ್ಲಿಯೂ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನಲ್ಲಿ 4 ಕಡೆ ದಾಳಿ: ಎಸ್​ಡಿಐಪಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅಬುಬಕರ್ ಕುಳಾಯಿ ಸೋದರ ಅಬ್ದುಲ್ ಖಾದರ್ ಕುಳಾಯಿ ಮನೆ ಮೇಲೆಯೂ ಎನ್​ಐಎ ದಾಳಿ ನಡೆದಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್​ಐ ಮತ್ತು ಎಸ್​ಡಿಪಿಐ ಜಿಲ್ಲಾ ಕಚೇರಿಯ ಮೇಲೆಯೂ ಎನ್​ಐಎ ದಾಳಿ ನಡೆದಿದೆ. ಕುಳಾಯಿ, ಕಾವೂರು, ಜೋಕಟ್ಟೆ, ಬಜಪೆಯ ಪಿಎಫ್​ಐ ಮತ್ತು ಎಸ್​ಡಿಪಿಐ ನಾಯಕರ ಮನೆಗಳ ಮೇಲೆಯೂ ದಾಳಿ ನಡೆದಿದೆ. ಎನ್‌ಐಎ ದಾಳಿಯ ನಂತರ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ದಾಳಿ ನಡೆಯುವ ಸ್ಥಳದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಭದ್ರತೆ ಒದಗಿಸಿದೆ.

ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್​ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿದ ಎನ್​ಐಎ ಅಧಿಕಾರಿಗಳು ಎರಡು ಪುಸ್ತಕ, ಲ್ಯಾಪ್​ಟಾಪ್, 1 ಪೆನ್​ಡ್ರೈವ್, 10ಕ್ಕೂ ಹೆಚ್ಚು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಭಿತ್ತಿಪತ್ರಗಳು, ಟೀ ಶರ್ಟ್ ವಶಕ್ಕೆ ಪಡೆದು ಅಧಿಕಾರಿಗಳು ಹೊರ ನಡೆದರು.

ಬೆಂಗಳೂರು, ಮಂಗಳೂರು, ಶಿರಸಿ ಮತ್ತು ಕೊಪ್ಪಳದಲ್ಲಿ ಗುರುವಾರ ನಸುಕಿನಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇದರಲ್ಲಿ 10 ಸ್ಥಳಗಳು ಪಿಎಫ್​ಐ, ಎಸ್​ಡಿಪಿಐ ಪದಾಧಿಕಾರಿಗಳ ಮನೆಗಳಾಗಿದ್ದರೆ, 2 ಸ್ಥಳಗಳು ಪಿಎಫ್​ಐ ಕಚೇರಿಗಳಾಗಿವೆ. 

ಬೆಂಗಳೂರಿನ ಪಾದರಾಯನಪುರದಲ್ಲಿರುವ ಪಿಎಫ್​ಐ ರಾಜ್ಯ ಘಟಕದ ಕಾರ್ಯದರ್ಶಿ ಅಫ್ಸರ್ ಪಾಷಾ ನಿವಾಸದ ಮೇಲೆ, ಟ್ಯಾನರಿ ರಸ್ತೆಯಲ್ಲಿರುವ ಪಿಎಫ್​ಐ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಪಾಷಾ ನಿವಾಸ, ರಿಚ್ಮಂಡ್ ಟೌನ್​ನಲ್ಲಿರುವ ಪಿಎಫ್​ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್ ಫ್ಲ್ಯಾಟ್​ ಮೇಲೆಯೂ ಎನ್​ಐಎ ದಾಳಿ ನಡೆದಿದೆ. 

ಇದನ್ನೂ ಓದಿ: ಮಂಗಳೂರು, ಬೆಂಗಳೂರು ಸೇರಿ ದೇಶಾದ್ಯಂತ 11 ರಾಜ್ಯಗಳಲ್ಲಿ ಎನ್ಐಎ ದಾಳಿ, ತೀವ್ರ ಶೋಧ: ಸುಮಾರು 100 ಮಂದಿ ವಶ

ರಿಚ್ಮಂಡ್ ಟೌನ್​ನ ಮೊಹಮದ್ ಸಾಕಿಬ್ ನಿವಾಸದ ಬಳಿ ಸೇರಿರುವ ಬೆಂಬಲಿಗರನ್ನು ಸ್ಥಳೀಯ ಪೊಲೀಸರು ದೂರ ಕಳಿಸುತ್ತಿದ್ದಾರೆ. ಪಾದರಾಯನಪುರ ಹಾಗೂ ಟ್ಯಾನರಿ ರಸ್ತೆಗಳಲ್ಲಿ ದಾಳಿ ನಡೆದ ಮನೆಗಳ ಸಮೀಪ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಲು ಮುಂದಾಗಿದ್ದಾರೆ. ಮೊಹ್ಮದ್​ ಸಾಕಿಬ್ ನಿವಾಸದಲ್ಲಿ ಎನ್​ಐಎ ದಾಳಿ ಅಂತ್ಯಗೊಂಡಿದ್ದು, ಮನೆಯಲ್ಲಿ ಕೆಲ ದಾಖಲೆಗಳನ್ನ ವಶಕ್ಕೆ ಪಡೆದು ಹೊರನಡೆದಿದ್ದಾರೆ.

ಶಿರಸಿಯ ಎಸ್​ಡಿಪಿಐ ಮುಖಂಡ ಅಬ್ದುಲ್ ಶುಕುರ್ ಹೊನ್ನಾವರ್ ಅವರ ಮನೆಯ ಮೇಲೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿ, ಕೆಲವು ದಾಖಲೆಗಳೊಂದು ಅಬ್ದುಲ್ ಶುಕುರ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಒಂದು ಲ್ಯಾಪ್​ಟಾಪ್, ಎರಡು ಮೊಬೈಲ್, ಒಂದು ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಲಾಗಿದೆ. ಪಿಎಫ್​ಐ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಫಯಾಜ್ ಅವರನ್ನು ಎನ್​ಐಎ ಅಧಿಕಾರಿಗಳು ಅವರ ಗಂಗಾವತಿ ನಿವಾಸದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಫಯಾಜ್ ಅವರನ್ನು ನಂತರ ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆಗೆ ಕರೆದೊಯ್ಯಲಾಯಿತು.

ತಮಿಳು ನಾಡಿನ ವಿಲ್ಲಾಪುರಂ, ಗೋಮತಿಪುರಂ, ಕುಲಮಂಗಲಂ ಸೇರಿದಂತೆ ಮಧುರೈ ನಗರದ 8 ಸ್ಥಳಗಳಲ್ಲಿ ಎನ್‌ಐಎ ಶೋಧ ನಡೆಸುತ್ತಿದೆ.

ಕೇರಳ ರಾಜಧಾನಿ ತಿರುವನಂತಪುರದಲ್ಲಿ ನಾಲ್ವರು ಪಿಎಫ್‌ಐ ಮುಖಂಡರನ್ನು ಎನ್‌ಐಎ ವಶಕ್ಕೆ ಪಡೆದಿದೆ. ಪಿಎಫ್‌ಐ ಕಚೇರಿಗಳು ಮತ್ತು ಮುಖಂಡರ ನಿವಾಸಗಳ ಮೇಲೆ ಇಡಿ ದಾಳಿ ಪೂರ್ಣಗೊಂಡಿದೆ. ಪಿಎಫ್‌ಐ ಅಧ್ಯಕ್ಷ ಒಎಂಎ ಸಲಾಂ, ಕೇರಳ ರಾಜ್ಯ ಮುಖ್ಯಸ್ಥ ಸಿಪಿ ಮೊಹಮ್ಮದ್ ಬಶೀರ್, ರಾಷ್ಟ್ರೀಯ ಕಾರ್ಯದರ್ಶಿ ವಿಪಿ ನಜರುದ್ದೀನ್ ಮತ್ತು ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಪ್ರೊ ಪಿ ಕೋಯಾ ಅವರನ್ನು ಬಂಧಿಸಲಾಗಿದೆ.

10 ರಾಜ್ಯಗಳಲ್ಲಿ ದಾಳಿ, 100ಕ್ಕೂ ಹೆಚ್ಚು ಪಿಎಫ್​ಐ ಕಾರ್ಯಕರ್ತರು ವಶಕ್ಕೆ: ಭಾರತ 10 ರಾಜ್ಯಗಳಲ್ಲಿ ಎನ್​ಐಎ ಮತ್ತು ಇಡಿ ಅಧಿಕಾರಿಗಳು ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಗೆ ಅಡ್ಡಿಪಡಿಸಿದ 100ಕ್ಕೂ ಹೆಚ್ಚು ಪಿಎಫ್​ಐ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 


Stay up to date on all the latest ರಾಜ್ಯ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp