
ಸಾಂದರ್ಭಿಕ ಚಿತ್ರ
ಮಂಗಳೂರು: ಬಂಧಿತ ಶಂಕಿತ ಉಗ್ರ ಮಾಝ್ ಅಹ್ಮದ್ ನ ತಂದೆ ಶುಕ್ರವಾರ ಸಂಜೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ.
ಮಾಝ್ ಅಹ್ಮದ್ ನ್ನು ಎನ್ಐಎ ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಶಿವಮೊಗ್ಗದಲ್ಲಿ ಸೆ.21 ರಂದು ಬಂಧನ್ನಕ್ಕೊಳಪಡಿಸಿತ್ತು. ಶಂಕಿತ ಉಗ್ರನ ತಂದೆ ಮುನೀರ್ ಅಹ್ಮದ್ (57) ಗೆ ತೀವ್ರ ಹೃದಯಾಘಾತ ಉಂಟಾಗಿ ಅವರನ್ನು ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5 ಗಂಟೆಗೆ ನಿಧನರಾದರು.
ಮುನೀರ್ ತೀರ್ಥಹಳ್ಳಿಯವರಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ. ಮಾಝ್ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಹಾಗೂ ಈ ಸಂಬಂಧ ಅವರ ತಂದೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಶಿವಮೊಗ್ಗ: ಭಾರತದಲ್ಲಿ ಐಸಿಸ್ ಚಟುವಟಿಕೆ ಹೆಚ್ಚಿಸಲು ಸಂಚು; ಬಂಧಿತರಿಂದ 'ಸ್ಫೋಟಕ' ಮಾಹಿತಿ
ಇಂಜಿನಿಯರಿಂಗ್ ಪದವೀಧರನಾಗಿರುವ ಮಾಝ್, ಈ ಹಿಂದೆ ಮಂಗಳೂರಿನ ಗೋಡೆಗಳ ಮೇಲೆ ಭಯೋತ್ಪಾದಕ ಬರಹಗಳನ್ನು ಬರೆದು 2 ವರ್ಷಗಳ ಹಿಂದೆ ಬಂಧನಕ್ಕೊಳಗಾಗಿದ್ದ. ಆ ಸಂದರ್ಭದಲ್ಲಿ ಮಾಝ್ ತಂದೆ ಮುನೀರ್ ಗೆ ಅಧಿಕ ರಕ್ತದೊತ್ತಡ ಪ್ರಾರಂಭವಾಗಿತ್ತು. ಅಷ್ಟೇ ಅಲ್ಲದೇ ಕೆಲವು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಮಾಝ್ ಬಂಧನದಿಂದ ಮನನೊಂದ ಮುನೀರ್ ಅವರು ಅನಾರೋಗ್ಯಕ್ಕೀಡಾಗಿದ್ದರು. ಸಂಜೆ ವೇಳೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆ ನಂತರ ಅವರು ಸಾವನ್ನಪ್ಪಿದರು ಎಂದು ಮುನೀರ್ ಸಹೋದರ ಇಲಿಯಾಸ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ. ಮೃತ ಮುನೀರ್ ಅವರು ದಂತವೈದ್ಯರಾಗಿದ್ದರು ಹಾಗೂ ತಮ್ಮದೇ ಉದ್ಯಮ ನಡೆಸುತ್ತಿದ್ದರು.