ಬೆಂಗಳೂರು: ಚುನಾವಣಾ ಪ್ರಚಾರದ ವೇಳೆ ಆಡಳಿತ ಪಕ್ಷದ ಶಾಸಕರೊಬ್ಬರ ಬೆಂಬಲಿಗರು ನಮ್ಮ ಸದಸ್ಯರಿಗೆ ಬೆದರಿಕೆ ಹಾಗೂ ಕಿರುಕುಳ ನೀಡಿದ್ದಾರೆಂದು ಆಮ್ ಆದ್ಮಿ ಪಕ್ಷ ಗುರುವಾರ ಆರೋಪಿಸಿದೆ.
ಆರ್ಆರ್ನಗರದ ಎಎಪಿ ಸ್ವಯಂಸೇವಕಿ ಭವ್ಯಾ ನಾರಾಯಣ ಅವರು ಈ ಆರೋಪವನ್ನು ಮಾಡಿದ್ದಾರೆ. ಸಿವಿ ರಾಮನ್ ನಗರದ ಸುದ್ದಗುಂಟೆಪಾಳ್ಯದಲ್ಲಿ ಪಕ್ಷದ ಅಭ್ಯರ್ಥಿ ಪರ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದರು. ಆದರೆ, ಮಧ್ಯಾಹ್ನ 12 ಗಂಟೆ ವೇಳೆಗೆ ಕೆಲ ಬಿಜೆಪಿ ಬೆಂಬಲಿಗರು ಅವರ ಬಳಿ ಬಂದು ಜಗಳಕ್ಕಿಳಿದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
“ನಾವು ನಮ್ಮ ಅಭ್ಯರ್ಥಿ ಮೋಹನ್ ದಾಸರಿ ಪರ ಪ್ರಚಾರ ನಡೆಸುತ್ತಿದ್ದೆವು. ನಾವು ಪ್ರಚಾರ ಮಾಡುತ್ತಿದ್ದುದನ್ನು ನೋಡಿದ ಕೆಲ ಬಿಜೆಪಿ ಬೆಂಬಲಿಗರು ನಮ್ಮೊಂದಿಗೆ ವಾಗ್ವಾದ ನಡೆಸಿ, ಶಾಸಕರೇ ಎಲ್ಲ ಕೊಟ್ಟಿದ್ದಾರೆ ಎಂದು ಹೇಳಿ ಸ್ಥಳದಿಂದ ತೆರಳುವಂತೆ ಹೇಳಿದರು. ಈ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು ಎಂದು ಭವ್ಯಾ ಅವರು ಆರೋಪಿಸಿದ್ದಾರೆ.
ಈ ಸಂಬಂಧ ಬಿಜೆಪಿ ಬೆಂಬಲಿಗರು ಎಂದು ಹೇಳಲಾದ ಮೋಹನ್ ಮತ್ತು ನಾಗರಾಜ್ ಎಂಬ ಇಬ್ಬರ ವಿರುದ್ಧ ಜೀವನ್ ಬಿಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏತನ್ಮಧ್ಯೆ, ಎಎಪಿಗೆ ಸೇರಿದ ಮನೋಜ್ ಕುಮಾರ್ ಮತ್ತು ಶಿವಕುಮಾರ್ ಅವರು, ಬಿಜೆಪಿ ಬೆಂಬಲಿಗರು ತಮ್ಮನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಯ ವಿಡಿಯೋವನ್ನು ಸೆರೆಹಿಡಿಯರು ಯತ್ನಿಸಿದಾಗ ನಮ್ಮ ಮೊಬೈಲ್ ಫೋನ್'ನ್ನು ಕಸಿದುಕೊಂಡರು. ನಂತರ ಮರಳಿ ನೀಡಿದರು ಎಂದು ಹೇಳಿದ್ದಾರೆ.
Advertisement