ಮಂಗಳೂರು: 'ಮೋದಿ ಯೋಜನೆ'ಯಡಿ ಹಣ ದುಪ್ಪಟ್ಟು ಮಾಡುವುದಾಗಿ ಮಹಿಳೆಯನ್ನು ಸಂಪರ್ಕಿಸಿದ ವ್ಯಕ್ತಿಯೊಬ್ಬ, ಅವರ ಚಿನ್ನದ ಸರವನ್ನು ದೋಚಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಸಂತ್ರಸ್ತ ಮಹಿಳೆ ಲಲಿತಾ(51) ಅವರು ನೀಡಿದ ದೂರಿನ ಪ್ರಕಾರ, ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತನ್ನ ಮನೆಯಿಂದ ಕಣಿಯೂರು ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿ, ತನ್ನನ್ನು ತಾನು ಬ್ಯಾಂಕರ್ ಎಂದು ಪರಿಚಯಿಸಿಕೊಂಡಿದ್ದಾನೆ. ಹಣ ದ್ವಿಗುಣಗೊಳಿಸುವ 'ಮೋದಿ ಯೋಜನೆ' ಬಗ್ಗೆ ಚರ್ಚಿಸಲು ಬಯಸುವುದಾಗಿ ಹೇಳಿದ್ದಾನೆ. ಈ ವಿಷಯವನ್ನು ಚರ್ಚಿಸಲು ಲಲಿತಾ ಅವರು ಆ ವ್ಯಕ್ತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಮನೆಯಲ್ಲಿ 7 ಸಾವಿರ ಹೂಡಿಕೆ ಮಾಡಿದರೆ ಬ್ಯಾಂಕ್ ನಿಂದ 1 ಲಕ್ಷ ರೂ. ಬರಲಿದೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ಆದರೆ ಮಹಿಳೆ ತನ್ನ ಬಳಿ ಹಣವಿಲ್ಲ ಎಂದು ಹೇಳಿದಾಗ, ಆ ವ್ಯಕ್ತಿ ಮತ್ತೊಂದು ಆಫರ್ ಹೇಳಿದ್ದು, ಅದರ ಅಡಿಯಲ್ಲಿ ಒಂದು ಪವನ್ ಚಿನ್ನ ಹೂಡಿಕೆ ಮಾಡಿದರೆ, ಅದಕ್ಕೆ ಪ್ರತಿಯಾಗಿ ಬ್ಯಾಂಕ್ನಿಂದ 4 ಪವನ್ ಚಿನ್ನ ಪಡೆಯಬಹುದು ಎಂದು ಹೇಳಿದ್ದಾನೆ.
ಆ ವ್ಯಕ್ತಿಯ ಮಾತು ನಂಬಿದ ಮಹಿಳೆ ತನ್ನ ಕತ್ತಿನಲ್ಲಿದ್ದ 6 ಗ್ರಾಂ ತೂಕದ ಚಿನ್ನದ ಸರವನ್ನು ತೆಗೆದು ವ್ಯಕ್ತಿಯ ಬಳಿಗೆ ಬಂದಿದ್ದಾರೆ. ಈ ಹಂತದಲ್ಲಿ, ಆ ವ್ಯಕ್ತಿ ಒಂದು ಕಪ್ ಚಹಾ ಕೇಳಿದ್ದು, ಮಹಿಳೆ ಚೈನ್ ಅನ್ನು ಮೇಜಿನ ಮೇಲೆ ಇಟ್ಟು, ಚಹಾ ಮಾಡಿಕೊಂಡು ಬರಲು ಹೋಗಿದ್ದಾರೆ. ಲಲಿತಾ ಅಡುಗೆಮನೆಗೆ ಹೋದ ನಂತರ ಪರಿಸ್ಥಿತಿಯನ್ನು ಸರಿಯಾಗಿ ಬಳಸಿಕೊಂಡ ವ್ಯಕ್ತಿ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾನೆ.
ಕಡಬ ಪೊಲೀಸರು ಐಪಿಸಿ ಸೆಕ್ಷನ್ 454, 380 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ರವಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Advertisement