ಭದ್ರಾವತಿ ಜನರ ಹೋರಾಟಕ್ಕೆ ಸಿಕ್ಕ ಜಯ: VISL ಕಾರ್ಖಾನೆ ಆರಂಭಕ್ಕೆ ಕೇಂದ್ರ ಒಪ್ಪಿಗೆ; ಚುನಾವಣೆ ಹೊಸ್ತಿಲಲ್ಲಿ ಟ್ರಿಕ್!

1918ರಲ್ಲಿ ಮೊದಲ ಮಹಾಯುದ್ಧದ ಅಂತ್ಯದ ವೇಳೆಗೆ ಶಿವಮೊಗ್ಗದ ಭದ್ರಾವತಿಯಲ್ಲಿ ಮೈಸೂರು ರಾಜಮನೆತನದಿಂದ ಆರಂಭಗೊಂಡ ಐತಿಹಾಸಿಕ ಉಕ್ಕಿನ ತಯಾರಿಕಾ ಕಾರ್ಖಾನೆಯು ಕೆಲವೇ ದಿನಗಳಲ್ಲಿ ಪುನರಾರಂಭವಾಗಲಿದೆ.
ವಿಎಸ್ ಐಲ್ (ಸಂಗ್ರಹ ಚಿತ್ರ)
ವಿಎಸ್ ಐಲ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: 1918ರಲ್ಲಿ ಮೊದಲ ಮಹಾಯುದ್ಧದ ಅಂತ್ಯದ ವೇಳೆಗೆ ಶಿವಮೊಗ್ಗದ ಭದ್ರಾವತಿಯಲ್ಲಿ ಮೈಸೂರು ರಾಜಮನೆತನದಿಂದ ಆರಂಭಗೊಂಡ ಐತಿಹಾಸಿಕ ಉಕ್ಕಿನ ತಯಾರಿಕಾ ಕಾರ್ಖಾನೆಯು ಕೆಲವೇ ದಿನಗಳಲ್ಲಿ ಪುನರಾರಂಭವಾಗಲಿದೆ.

ಭಾರತೀಯ ಉಕ್ಕು ಪ್ರಾಧಿಕಾರ ನಿಯಮಿತದ (SAIL) ಆಡಳಿತ ಮಂಡಳಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಉತ್ಪಾದನೆಗೆ ಅನುಮತಿ ನೀಡಿದೆ. ಇದೇ ತಿಂಗಳು ಅಂದರೆ ಆಗಸ್ಟ್‌ 10ಕ್ಕೆ ಎರಡು ಪಾಳಿಗಳಲ್ಲಿ ಕಾರ್ಖಾನೆ ಶುರುವಾಗಲಿದೆ.

ಎಲ್ಲಾ ನಿರ್ವಹಣೆ ಮತ್ತು ಸೇವಾ ಇಲಾಖೆಗಳು ಕಾರ್ಯಾಚರಣೆ ಪುನರಾರಂಭಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲು ಪ್ರಾರಂಭಿಸಬೇಕಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರದ ಆದೇಶದಲ್ಲಿ, ಆಗಸ್ಟ್ 7 ರ ಮುಂಚಿತವಾಗಿ ಮೊದಲು ಎಲ್ಲಾ ಟ್ರಯಲ್ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ. ಆರ್ಥಿಕ ಕಾರಣಗಳಿಂದಾಗಿ ಭದ್ರಾವತಿ ಉಕ್ಕು ಕಾರ್ಖಾನೆ ಮುಚ್ಚಲಾಗಿತ್ತು.

ಈ ವರ್ಷದ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಅಧಿಕೃತ ಹೇಳಿಕೆ ನೀಡಿದ್ದು, "ಹೆಚ್ಚಿನ ಉತ್ಪಾದನಾ ವೆಚ್ಚ, ಕಡಿಮೆ ಪ್ರಮಾಣದ ಉತ್ಪಾದನೆ ಮತ್ತು ಅದಿರು ಗಣಿ ಕೊರತೆಯಿಂದಾಗಿ VISL ಮುಚ್ಚಲಾಗಿದೆ ಎಂದು ಘೋಷಿಸಿದ್ದರು.

ವಿಐಎಸ್‌ಎಲ್‌ಗೆ 100 ವರ್ಷ ತುಂಬಿರುವಾಗಲೇ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿತ್ತು. ಆದರೆ, ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಐಎಸ್‌ಎಲ್‌) ಮುಚ್ಚಬಾರದು ಪುನಃ ಉತ್ಪಾದನೆ ಆರಂಭಿಸಬೇಕು ಎಂದು ಹೋರಾಟ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಳೆದ ತಿಂಗಳು ವಿಐಎಸ್‌ಎಲ್‌ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪುನರ್‌ ಪರಿಶೀಲಿಸಬೇಕು ಎಂದು ಕೇಂದ್ರ ಉಕ್ಕು ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಪತ್ರ ಬರೆದಿದ್ದರು. ಈಗ ಕೇಂದ್ರ ಸರ್ಕಾರ ಮತ್ತೆ ವಿಐಎಸ್‌ಎಲ್‌ ಆರಂಭಕ್ಕೆ ಅನುಮತಿ ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಮಾರ್ಗದರ್ಶನದಿಂದ ಭದ್ರಾವತಿಯ ವಿಐಎಸ್‌ಎಲ್ ಘಟಕದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಸವಾಲುಗಳನ್ನೆಲ್ಲಾ ಎದುರಿಸಿ ಗೆದ್ದ ಹೆಮ್ಮೆ ಶಿವಮೊಗ್ಗ ಜಿಲ್ಲೆ ಹಾಗೂ ಭದ್ರಾವತಿ ನಗರದ ಜನರದ್ದು, ಭರವಸೆ ಕಳೆದುಕೊಳ್ಳದ ನೌಕರ ಸಮುದಾಯದ್ದು ಎಂದಿರುವ ಅವರು. ವಿಐಎಸ್‌ಎಲ್‌ ಪುನರಾರಂಭಕ್ಕೆ ಕಾರಣವಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೃತಜ್ಞತೆಗಳು ಎಂದಿರುವ ಅವರು, ಭದ್ರಾವತಿಯ ಸಮಸ್ತ ಜನರ ಪ್ರಾರ್ಥನೆ ಫಲ ಕೊಟ್ಟಿದೆ ಎಂದಿದ್ದಾರೆ.

ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮತ್ತು ದಿವಾನ ಸರ್‌ ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್‌ ಅವರ ದೂರದೃಷ್ಟಿಯಿಂದ 1923ರಲ್ಲಿ ಭದ್ರಾವತಿಯಲ್ಲಿ ವಿಐಎಸ್‌ಎಲ್‌ ಕಾರ್ಖಾನೆ ಆರಂಭವಾಗಿತ್ತು. ದೇಶದ ಭೂಪಟದಲ್ಲಿ ಉತ್ಕೃಷ್ಟ ಉಕ್ಕು, ಸಿಮೆಂಟ್‌, ಕಾಗದ ಉತ್ಪಾದನೆಗೆ ಭದ್ರಾವತಿ ಹೆಸರಾಗಿತ್ತು. ಕರ್ನಾಟಕ ಸರ್ಕಾರದ ಅಧೀನದಲ್ಲಿದ್ದ ವಿಐಎಸ್‌ಎಲ್‌ ಅನ್ನು ಆಧುನೀಕರಣದ ಉದ್ದೇಶದಿಂದ 1989ರಲ್ಲಿ ಭಾರತ ಸರ್ಕಾರಕ್ಕೆ ಒಪ್ಪಿಸಲಾಯಿತು. ಬಳಿಕ ಉಕ್ಕು ಪ್ರಾಧಿಕಾರಕ್ಕೆ ವಿಐಎಸ್‌ಎಲ್‌ ಅನ್ನು ಸೇರಿಸಲಾಗಿತ್ತು. ಗಣಿ ಇಲ್ಲದ ಕಾರಣ ಹಾಗೂ ನಷ್ಟದ ಕಾರಣದಿಂದ ವಿಐಎಸ್‌ಎಲ್‌ ಮುಚ್ಚುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.

ವಿಐಎಸ್ಎಲ್ ಅವಲಂಬಿಸಿರುವವರಿಗೆ ಮತ್ತು ಒಟ್ಟಾರೆ ಭದ್ರಾವತಿಯ ಎಲ್ಲಾ ಜನರಿಗೆ ಇದು ಮಹತ್ವದ ನಿರ್ಧಾರವಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ವಿಎಸ್ ಐ ಎಲ್ ಕಾರ್ಖಾನೆ ಪುನಾರಂಭ ಆಡಳಿತಾರೂಢ ಪಕ್ಷಕ್ಕೆ ದೊಡ್ಡ ಲಾಭ ತಂದುಕೊಂಡುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com