ತೆರಿಗೆ ವಂಚನೆ ಮಾಡಬೇಡಿ: ತೆರಿಗೆ ಸಲಹೆಗಾರರಿಗೆ ಸಚಿವ ಕೃಷ್ಣ ಬೈರೇಗೌಡ ಕಿವಿಮಾತು

ತೆರಿಗೆ ವಂಚನೆ ಮಾಡದೆ ಪ್ರಾಮಾಣಿಕವಾಗಿ ಜನರಿಗೆ ಮತ್ತು ಸರ್ಕಾರಕ್ಕೆ ಸೇವೆ ಸಲ್ಲಿಸಿ ಎಂದು ತೆರಿಗೆ ಸಲಹೆಗಾರರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಕಿವಿಮಾತು ಹೇಳಿದರು.
ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ತೆರಿಗೆ ವಂಚನೆ ಮಾಡದೆ ಪ್ರಾಮಾಣಿಕವಾಗಿ ಜನರಿಗೆ ಮತ್ತು ಸರ್ಕಾರಕ್ಕೆ ಸೇವೆ ಸಲ್ಲಿಸಿ ಎಂದು ತೆರಿಗೆ ಸಲಹೆಗಾರರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘವು ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಆಗಸ್ಟ್ 4, 5 ಮತ್ತು 6 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ತೆರಿಗೆ ಸಮ್ಮೇಳನ ಮತ್ತು ತೆರಿಗೆ ವೃತ್ತಿಪರರ ದಿನಾಚರಣೆ ಹಮ್ಮಿಕೊಂಡಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಜನರು ತಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು? ತೆರಿಗೆಯನ್ನು ಎಲ್ಲೆಲ್ಲಿ ಉಳಿಸಬೇಕು ಎಂದು ಸಲಹೆ ನೀಡುವುದು ಉತ್ತಮ ಕೆಲಸವೇ. ಆದರೆ, ತೆರಿಗೆ ಕಳ್ಳತನ ಅಕ್ಷಮ್ಯ ಎಂದು ಕಿವಿಮಾತು ಹೇಳಿದರು.

'ಯಾವುದೇ ಸರಕಾರ ನಡೆಸಲು ತೆರಿಗೆ ತುಂಬ ಅಗತ್ಯ. ತೆರಿಗೆ ಇಲ್ಲದೆ ಜನರಿಗೆ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ. ಆದರೆ, ಅನೇಕ ತೆರಿಗೆ ಸಲಹೆಗಾರರು ಜನರಿಗೆ ತೆರಿಗೆ ಉಳಿಸುವುದಾಗಿ ಹೇಳಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಎಂದು ತಿಳಿಸಿದರು.

ಕೆಎಸ್‌ಟಿಪಿಎ ಅಧ್ಯಕ್ಷ ಎಸ್ ನಂಜುಂಡ ಪ್ರಸಾದ್ ಮಾತನಾಡಿ, 2,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಘವು ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಜಿಎಸ್‌ಟಿ, ಆದಾಯ ತೆರಿಗೆ ಮತ್ತು ಇತರ ತೆರಿಗೆ ಸಂಬಂಧಿತ ಸೇವೆಗಳ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ ಬೆಂಬಲವನ್ನು ನೀಡುತ್ತಿದ್ದಾರೆ. ನಮ್ಮ ಸಂಘವು ಕೋವಿಡ್ ಸಮಯದಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ 15 ಲಕ್ಷ ರೂಪಾಯಿಗಳನ್ನು ನೀಡಿತ್ತು ಎಂದು ಹೇಳಿದರು.

ತಾಲ್ಲೂಕು ಮಟ್ಟದಲ್ಲೂ ಜನರಿಗೆ ತೆರಿಗೆ ಸಲಹೆಗಾರರು ಶಿಕ್ಷಣ ನೀಡುತ್ತಿದ್ದು, ಇವರ ನೆರವಿನಿಂದಾಗಿ ಕರ್ನಾಟಕ ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನವನ್ನು ಯಶಸ್ವಿಯಾಗಿ ಸಾಧಿಸಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com