ಕರ್ನಾಟಕವನ್ನು ಏಷ್ಯಾದಲ್ಲಿ ನಂ 1 ಉತ್ಪಾದನಾ ಕೇಂದ್ರವಾಗಿಸುವ ಗುರಿ; ಕೈಗಾರಿಕಾ ನೀತಿ ಪರಿಷ್ಕರಣೆಗೆ ಸರ್ಕಾರ ಮುಂದು!

ರಾಜ್ಯದ ಕೈಗಾರಿಕಾ ಬೆಳವಣಿಗೆ ದರವನ್ನು ದ್ವಿಗುಣಗೊಳಿಸುವ ಮತ್ತು ಏಷ್ಯಾದ ನಂ 1 ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಗೌರವ ವಂದನೆ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಗೌರವ ವಂದನೆ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ರಾಜ್ಯದ ಕೈಗಾರಿಕಾ ಬೆಳವಣಿಗೆ ದರವನ್ನು ದ್ವಿಗುಣಗೊಳಿಸುವ ಮತ್ತು ಏಷ್ಯಾದ ನಂ 1 ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, “ಕಳೆದ 10 ವರ್ಷಗಳಲ್ಲಿ, ರಾಜ್ಯದ ಕೈಗಾರಿಕಾ ವಲಯವು ಶೇ.9.3 ಬೆಳವಣಿಗೆ ದರವನ್ನು ದಾಖಲಿಸಿದೆ. ಮುಂದಿನ ದಿನಗಳಲ್ಲಿ ಶೇ.15-16ರಷ್ಟು ಬೆಳವಣಿಗೆ ದರ ಸಾಧಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ವಾರ್ಷಿಕವಾಗಿ ಸುಮಾರು 1.4 ಲಕ್ಷ ಕೋಟಿ ಹೂಡಿಕೆಯ ಅಗತ್ಯವಿದೆ. 14 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಇದು ಸಹಾಯ ಮಾಡಲಿದೆ ಎಂದು ಹೇಳಿದರು.

ರಾಜ್ಯವನ್ನು ಹೆಚ್ಚು ಪ್ರಗತಿಪರವಾಗಿಸಲು ರಾಜ್ಯದ ಕೈಗಾರಿಕಾ ನೀತಿಯನ್ನು ಪರಿಷ್ಕರಿಸಲು ಕ್ರಮಗಳ ಕೈಗೊಳ್ಳಲಾಗುತ್ತಿದೆ. ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯ, ಡಿಜಿಟಲ್ ಸೇವಾ ವಿತರಣಾ ವ್ಯವಸ್ಥೆ, ಅತ್ಯುತ್ತಮ ದರ್ಜೆಯ ಹೂಡಿಕೆ ಉತ್ತೇಜನಾ ಸಂಸ್ಥೆ, ಭವಿಷ್ಯಕ್ಕೆ ಸಿದ್ಧವಾಗಿರುವ ಪ್ರತಿಭೆಗಳ ಉತ್ತೇಜಿಸಲು ಹೊಸ ನೀತಿಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ರಾಜ್ಯದ ಜಿಡಿಪಿಯನ್ನು ಹೆಚ್ಚಿಸಲು ಸರ್ಕಾರವು ಏರೋಸ್ಪೇಸ್ ಮತ್ತು ಡಿಫೆನ್ಸ್, ಎಲೆಕ್ಟ್ರಾನಿಕ್ ಘಟಕಗಳು, ಪ್ರಮುಖ ಕೈಗಾರಿಕೆಗಳು, ವೇರ್‌ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ಉದ್ಯೋಗ ಸೃಷ್ಟಿಯ ಮೇಲೆ ಪರಿಣಾಮ ಬೀರದಂತೆಯೂ ನೋಡಿಕೊಳ್ಳಲು ಪ್ರಯತ್ನಗಳ ನಡೆಸಲಾಗುತ್ತಿದೆ.

ಕರ್ನಾಟಕವು ಕೇಂದ್ರ ಸರ್ಕಾರಕ್ಕೆ ತೆರಿಗೆ ಮತ್ತು ಸುಂಕದ ರೂಪದಲ್ಲಿ 4 ಲಕ್ಷ ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ. ಆದರೆ, ರಾಜ್ಯಕ್ಕೆ ಕೇವಲ 50,000 ಕೋಟಿ ರೂಪಾಯಿಗಳು ಮಾತ್ರ ಬರುತ್ತಿದೆ. ನಮಗೆ ಸಿಗಬೇಕಾದದ್ದು ಸಿಕ್ಕರೆ ಕರ್ನಾಟಕ ಶ್ರೀಮಂತ ರಾಜ್ಯವಾಗಲಿದೆ. ಈ ಸವಾಲಿನ ಪರಿಸ್ಥಿತಿಯ ಹೊರತಾಗಿಯೂ, ನಾವು ಹಣಕಾಸಿನ ಶಿಸ್ತನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಿಂದ ದೇಶವು ವಿಪರೀತ ಆತಂಕಕ್ಕೆ ಒಳಗಾಗಿದೆ. ಸಮಾಜಗಳಲ್ಲಿ ವಿನಾಕಾರಣ ದ್ವೇಷ, ಹಿಂಸೆ, ಗುಮಾನಿ, ಶತ್ರುಸ್ವ ಭಾವ, ಅಸಹನೆಗಳು ಬೆಳೆಯುತ್ತಿದ್ದು, ಕೆಟ್ಟದ್ದನ್ನು ಉತ್ಪಾದಿಸಿ ಅದಕ್ಕೆ ಎಲ್ಲರ ಒಪ್ಪಿಗೆ ಇದೆ ಎಂಬ ಭಾವನೆ ಸೃಷ್ಟಿಸಲು ಸಮಾಜದ ಕೆಲವು ವರ್ಗಗಳು ನಿರಂತರವಾಗಿ ಪ್ರಯತ್ನಗಳು ನಡೆಸುತ್ತಿವೆ. ಈ ರೀತಿಯ ನಕಾರಾಮತ್ಮಕ ಧೋರಣೆಯನ್ನು ನಾವು ಹಿಮ್ಮೆಟ್ಟಿಸಬೇಕೆಂದು ಕರೆ ನೀಡಿದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು-ಸುದ್ದಿ ಹರಡುವ, ಸಾಮರಸ್ಯ ಕದಡುವ ಯತ್ನ ಮತ್ತು ಮತೀಯ ಗೂಂಡಾಗಿರಿ ಅಥವಾ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ನಡೆಯುವ ಅನೈತಿಕ ದಬ್ಬಾಳಿಕೆಯನ್ನು ನಮಮ ಸರ್ಕಾರ ಖಂಡಿತವಾಗಿಯೂ ಸಹಿಸುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಕಾವೇರಿ ವಿವಾದ ಕುರಿತು ಮಾತನಾಡಿ, ರಾಜ್ಯದ ಪಾಲಿನ ಕಾವೇರಿ ನೀರನ್ನು ಬಳಸಿಕೊಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸುತ್ತಿದ್ದೇವೆಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com