ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ ಕರಡು ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು 15 ದಿನ ಅವಕಾಶ

2011ರ ಜನಸಂಖ್ಯೆ ಆಧಾರದಲ್ಲಿ ರೂಪಿಸಲಾಗಿರುವ ಕರಡು ಪಟ್ಟಿಯನ್ನು ರಾಜ್ಯ ಸರ್ಕಾರ ಶುಕ್ರವಾರ ತಡರಾತ್ರಿ ಪ್ರಕಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: 2011ರ ಜನಸಂಖ್ಯೆ ಆಧಾರದಲ್ಲಿ ರೂಪಿಸಲಾಗಿರುವ ಕರಡು ಪಟ್ಟಿಯನ್ನು ರಾಜ್ಯ ಸರ್ಕಾರ ಶುಕ್ರವಾರ ತಡರಾತ್ರಿ ಪ್ರಕಟಿಸಿದೆ.

ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟ ಮಾಡಿದೆ. ಸಾರ್ವಜನಿಕರು - ಸಂಸ್ಥೆಗಳಿಂದ ಆಕ್ಷೇಪಣೆ / ಸಲಹೆಗಳಿಗೆ ಸರ್ಕಾರ ಮುಕ್ತ ಆಹ್ವಾನ ಕೊಟ್ಟಿದೆ.

ಪುನೀತ್ ರಾಜ್‌ಕುಮಾರ್, ಗಾರೆಭಾವಿಪಾಳ್ಯ, ಮಂಗಮ್ಮನಪಾಳ್ಯ, ಹೊಸ ರಸ್ತೆ, ಮುನ್ನೆಕೊಳ್ಳಾಲ ಮತ್ತು ಬೆಳತೂರು ಸೇರಿದಂತೆ ಹೊಸ ವಾರ್ಡ್‌ಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಹೊಸ ವಾರ್ಡ್‌ಗಳ ಪಟ್ಟಿ ಪಾಲಿಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಅವಧಿಯಲ್ಲಿ ಬಿಬಿಎಂಪಿಯ 198 ವಾರ್ಡ್ ಗಳನ್ನು 243ಕ್ಕೆ ಹೆಚ್ಚಿಸಲಾಗಿತ್ತು. ವಾರ್ಡ್ ಮರುವಿಂಗಡಣೆ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಹಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಹಿನ್ನೆಲೆಯಲ್ಲಿ ವಾರ್ಡ ಮರುವಿಂಗಡಣೆ ವರದಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಮತ್ತೆ ಸಲ್ಲಿಕೆ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಅದರಂತೆ ವಾರ್ಡ್ ಮರುವಿಂಗಣೆಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದ ಸಮಿತಿ ರಚಿಸಿ ಸರ್ಕಾರ ಆದೇಶಿಸಿತ್ತು. ಜೊತೆಗೆ 243 ವಾರ್ಡ್ ಗಳನ್ನು 225 ವಾರ್ಡ್ ಗಳಾಗಿ ಮರುವಿಂಗಡಿಸುವಂತೆ ಸೂಚಿಸಿ, ಅದಕ್ಕಾಗಿ ಅಧಿಸೂಚನೆಯನ್ನೂ ಪ್ರಕಟಿಸಲಾಗಿತ್ತು. ಅದರಂತೆ ಅಧಿಕಾರಿಗಳು 225 ವಾರ್ಡ್ ಗಳ ಕರಡು ಪಟ್ಟಿ ರಚಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು.

ಇದೀಗ ಸರ್ಕಾರ ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಆಕ್ಷೇಪ ಸಲ್ಲಿಕೆಗೆ 15 ದಿನ ಕಾಲಾವಶ ನೀಡಿದೆ. ವಾರ್ಡ್ ಗಳ ಬಗ್ಗೆ ಸಾರ್ವಜನಿಕರು ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಡಾ. ಬಿ.ಆರ್‌.ಅಂಬೇಡ್ಕರ್‌ ವೀದಿ, ಬೆಂಗಳೂರು: 560001ಗೆ ಆಕ್ಷೇಪಣೆ ಸಲ್ಲಿಸಬೇಕಿದೆ.

ಪುನೀತ್ ರಾಜ್‌ಕುಮಾರ್, ಗಾರೆಭಾವಿಪಾಳ್ಯ, ಮಂಗಮ್ಮನಪಾಳ್ಯ, ಹೊಸ ರಸ್ತೆ, ಮುನ್ನೆಕೊಳ್ಳಾಲ ಮತ್ತು ಬೆಳತೂರು ಸೇರಿದಂತೆ ಹೊಸ ವಾರ್ಡ್‌ಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಹೊಸ ವಾರ್ಡ್‌ಗಳ ಪಟ್ಟಿ ಪೌರಕಾರ್ಮಿಕರ ವೆಬ್‌ಸೈಟ್‌ನಲ್ಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಕರಡು ಪಟ್ಟಿ ಬಿಡುಗಡೆ ಕುರಿತು ಬಿಜೆಪಿ ಕಾರ್ಪೊರೇಟರ್ ಗಳು ಅಸಮಾಧಾನ ವ್ಯಕ್ತಡಿಸಿದ್ದಾರೆ.

ಸಿಕೆ ರಾಮಮೂರ್ತಿ ಅವರು ಮಾತನಾಡಿ, ಬಿಬಿಎಂಪಿ ಚುನಾವಣೆ ವಿಳಂಬವಾಗುತ್ತಿರುವ ಕುರಿತು ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಇದೀಗ ಕಾಂಗ್ರೆಸ್ 225 ವಾರ್ಡ್ ಗಳ ಕರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಅವೈಜ್ಞಾನಿಕವಾಗಿ ವಿಂಗಡಣೆ ಪ್ರಕ್ರಿಯೆಯಿಂದ ಬಿಜೆಪಿಯಿಂದ ಹಲವು ಮಾಜಿ ಕಾರ್ಪೋರೇಟರ್ ಗಳು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸದಂತಾಗಿದೆ. ಕಾಂಗ್ರೆಸ್‌ಗೆ ಅನುಕೂಲವಾಗುವ ಕೆಲವು ವಾರ್ಡ್ ಗಳನ್ನು ಸರ್ಕಾರ ಬದಲಾಯಿಸಿದೆ ಎಂದು ಕಿಡಿಕಾರಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ವಾರ್ಡ್ ವಾರು ಮೀಸಲಾತಿ ಪಟ್ಟಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪಟ್ಟಿ ವಿರುದ್ಧ  ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com