ಉಡುಪಿ: 5 ವರ್ಷಗಳಿಂದ ಶಾಲೆಗೆ ಗೈರಾಗಿ ವೇತನ ಪಡೆಯುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕ ಅಮಾನತು!

ಕಳೆದ ಐದು ವರ್ಷಗಳಿಂದ ಶಾಲೆಗೆ ನಿಯಮಿತವಾಗಿ ಬಾರದೆ ಪ್ರತಿ ತಿಂಗಳು ವೇತನ ಪಡೆದು ಕರ್ತವ್ಯ ಲೋಪವೆಸಗಿದ ಸರ್ಕಾರಿ ಸಾಲೆಯ ಶಿಕ್ಷಕನೊಬ್ಬನನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉಡುಪಿ: ಕಳೆದ ಐದು ವರ್ಷಗಳಿಂದ ಶಾಲೆಗೆ ನಿಯಮಿತವಾಗಿ ಬಾರದೆ ಪ್ರತಿ ತಿಂಗಳು ವೇತನ ಪಡೆದು ಕರ್ತವ್ಯ ಲೋಪವೆಸಗಿದ ಸರ್ಕಾರಿ ಸಾಲೆಯ ಶಿಕ್ಷಕನೊಬ್ಬನನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆನಗಳ್ಳಿ ಸರ್ಕಾರಿ ಶಾಲೆಯ ಸಹಶಿಕ್ಷಕ ಅಂಪಾರು ದಿನಕರಶೆಟ್ಟಿ ಎಂಬುವವರು ಸುಮಾರು 5 ವರ್ಷಗಳಿಂದ ಶಾಲೆಗೆ ಬಾರದೆ, ಮಕ್ಕಳಿಗೆ ಪಾಠ ಮಾಡದೆ ಮನೆಯಲ್ಲೇ ಕುಳಿತು ವೇತನ ಪಡೆಯುತ್ತಿದ್ದರು.

ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಆಗಿರುವ ಅಂಪಾರು ದಿನಕರಶೆಟ್ಟಿ ಅವರು ಆನಗಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರೂ ಆಗಿದ್ದಾರೆ.

ತಮ್ಮ ಮೇಲೆ ಬೆಟ್ಟದಷ್ಟು ಜವಾಬ್ದಾರಿ ಇದ್ದರೂ 2017 ರಿಂದ ಶಾಲೆಯ ಕಡೆಗೆ ಮುಖ ತೋರಿಸದೆ ಸರಕಾರಿ ಸಂಬಳ ಪಡೆಯುತ್ತಿದ್ದರು. ಅನಾರೋಗ್ಯದ ನೆಪ ಹೇಳಿ ಶಾಲೆಗೆ ಹಾಜರಾಗದೆ, ಬೇರೆಯೇ ವ್ಯವಹಾರ ಮಾಡಿಕೊಂಡಿದ್ದರು. ಸದ್ಯ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಇನ್ನು ಸಹಶಿಕ್ಷಕ ಅನಾರೋಗ್ಯದಿಂದ ರಜೆಯಲ್ಲಿದ್ದ ಕಾರಣ ಇತರೆ ಶಿಕ್ಷಕರು ಮಕ್ಕಳಿಗೆ ತಮ್ಮ ಪಾಠದ ಜೊತೆಗೆ ರಜೆಯಲ್ಲಿದ್ದ ಶಿಕ್ಷಕನ ಪಾಠವನ್ನೂ ವರ್ಷಗಳ ಕಾಲ ಹೇಳಿಕೊಟ್ಟಿದ್ದಾರೆ. ಈ ವಿಚಾರ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಂಡಿಲ್ಲ. ಶಿಕ್ಷಕ ಅಂಪಾರು ದಿನಕರಶೆಟ್ಟಿ ಆಗಾಗ ಬಂದು ಹಾಜರು ಪುಸ್ತಕದಲ್ಲಿ ಸಹಿ ಹಾಕಿ ಹಿಂದಿರುಗುತ್ತಿದ್ದರು. ಜೊತೆಗೆ ನಿರಂತರವಾಗಿ ಶಾಲೆಯ ಯಾವುದೇ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಶಿಕ್ಷಕನ ಗೈರು ಹಾಜರಿಯ ಕುರಿತು ಪಂಚಾಯತ್ ಅಧ್ಯಕ್ಷ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಬಳಿಕ ಆನಗಳ್ಳಿ ಪಂಚಾಯತ್ ಅಧ್ಯಕ್ಷ ಲಾರೆನ್ಸ್ ಡಿಸೋಜಾ ಅವರು ಕುಂದಾಪುರ ಬಿಇಒ ಶೋಭಾ ಶೆಟ್ಟಿ ಅವರಿಗೆ ದೂರು ನೀಡಿದ್ದರು. ಈ ದೂರನ್ನು ವಿಚಾರಣೆ ನಡೆಸಿದ ನಂತರ ಉಡುಪಿ ಡಿಡಿಪಿಐ ಕೆ ಗಣಪತಿ ಅವರು ಶಿಕ್ಷಕ ದಿನಕರ ಶೆಟ್ಟಿಯನ್ನು ಅಮಾನತುಗೊಳಿಸಿದ್ದಾರೆ.

ದಿನಕರ ಶೆಟ್ಟಿ ಅವರು ಮುರುಡೇಶ್ವರದಲ್ಲಿ ಒಂದು ಮತ್ತು ಭಟ್ಕಳದಲ್ಲಿ ಎರಡು ಹೋಟೆಲ್‌ಗಳನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಿನಕರ ಶೆಟ್ಟಿಯವರು ಬಟ್ಕಳದಲ್ಲಿ ಹೋಟೆಲ್ ಸಿಬ್ಬಂದಿಯೊಬ್ಬರಿಗೆ ಧಳಿಸಿದ ವಿಡಿಯೋವೊಂದು ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬೆನ್ನು ನೋವು ಕಾರಣ ನೀಡಿ, ಶೆಟ್ಟಿಯವರು 728 ದಿನಗಳ ಕಾಲ ವೇತನ ಸಹಿತ ರಜೆ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರೂ ಆಗಿರುವ ಶೆಟ್ಟಿ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ವಿಜಯ ಸಾಧಿಸಿದ ಬಳಿಕ ವಿಜಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ವಿವಾದಕ್ಕೆ ಸಿಲುಕಿದ್ದರು.

ಶಾಲೆಯಲ್ಲಿ ಶಿಕ್ಷಕ ಗೈರು ಹಾಜರಾಗುತ್ತಿರುವುದರ ಬಗ್ಗೆ ಮಕ್ಕಳ ಪೋಷಕರು ಪ್ರತೀನಿತ್ಯ ದೂರು ನೀಡುತ್ತಿದ್ದರು. ಬಿಇಒ ಗಮನಕ್ಕೆ ತರಬೇಕೆಂದು ಹೇಳುತ್ತಿದ್ದರು ಎಂದು ಲಾರೆನ್ಸ್ ಡಿಸೋಜ ಅವರು ಹೇಳಿದ್ದಾರೆ.

ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಶಾಲೆಯ ಮುಖ್ಯಸ್ಥ ಜನಾರ್ಧನ ಪಟಗಾರ ಅವರನ್ನೂ ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com