ಮಡಿಕೇರಿ: ಕೊಡಗಿನ ಕುಶಾಲನಗರ ತಾಲೂಕಿನ ಕೂಡಿಗೆ ಬಳಿ ಹಾರಂಗಿ ಕಾಲುವೆಯಲ್ಲಿ ಮುಳುಗಿ 14 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಬಾಲಕ ಏಡಿ ಹಿಡಿಯಲು ಯತ್ನಿಸುತ್ತಿದ್ದಾಗ ಹಾರಂಗಿ ಜಲಾಶಯದ ಮುಖ್ಯ ಕಾಲುವೆಗೆ ಜಾರಿ ಬಿದ್ದಿದ್ದಾನೆ. ಮೃತ ಬಾಲಕನನ್ನು ಕುಶಾಲನಗರ ತಾಲೂಕಿನ ದಿಡ್ಡಳ್ಳಿ ಪುನರ್ವಸತಿ ಬಡಾವಣೆ ನಿವಾಸಿ ಅಣ್ಣಪ್ಪ ಎಂಬುವರ ಪುತ್ರ ಅನಿತ್(14) ಎಂದು ಗರುತುಸಲಾಗಿದೆ.
ಸದ್ಗುರು ಅಪ್ಪಯ್ಯ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಅನಿತ್ ತನ್ನ ಇತರ ಇಬ್ಬರು ಸ್ನೇಹಿತರಾದ ಸಂಚು ಮತ್ತು ಅಬ್ಬಿ ಜೊತೆಗೆ ಪ್ರತಿದಿನ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದನು. ಬುಧವಾರ ಮೂವರು ಬಾಲಕರು ಹಾರಂಗಿ ಜಲಾಶಯದ ಮುಖ್ಯ ಕಾಲುವೆ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಏಡಿಯನ್ನು ಕಂಡಿದ್ದಾನೆ ಎನ್ನಲಾಗಿದೆ.
ಏಡಿಯನ್ನು ಗಮನಿಸಿದ ಅನಿತ್ ರಸ್ತೆಯಿಂದ ಇಳಿದು ಏಡಿಯನ್ನು ಹಿಡಿಯಲು ನೀರಿನ ಕಾಲುವೆಯ ಅಂಚಿಗೆ ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಘಟನೆಯನ್ನು ಕಣ್ಣಾರೆ ಕಂಡ ಅಬ್ಬಿ ಕೂಡಲೇ ನೀರಿಗೆ ಹಾರಿ ಅನಿತ್ನನ್ನು ರಕ್ಷಿಸಿಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬಳಿಕ ಅಬ್ಬಿ ಈಜಿಕೊಂಡು ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ.
ಬಳಿಕ ಇಬ್ಬರು ಬಾಲಕರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಣೆಕಟ್ಟೆಯಿಂದ ನೀರು ಹೊರಬಿಡುವುದನ್ನು ನಿಲ್ಲಿಸುವಂತೆ ಹಾರಂಗಿ ಜಲಾಶಯದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಘಟನೆ ನಡೆದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಅನಿತ್ ಮೃತದೇಹವನ್ನು ಒಂದು ಗಂಟೆಯಲ್ಲಿ ಪತ್ತೆ ಮಾಡಲಾಗಿದೆ.
ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
Advertisement